ಮಂಗಳೂರು: ಕಳೆದ ಕೆಲವು ದಿನಗಳಿಂದ ದ.ಕನ್ನಡ ಜಿಲ್ಲೆ ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಸಮುದ್ರದಲ್ಲಿ ನೀಲಿ, ಹಸಿರು ಬಣ್ಣದ ತೆರೆಗಳು ಕಾಣಿಸುತ್ತಿದ್ದು, ಅಚ್ಚರಿ ಮೂಡಿಸಿದೆ.
ಸುರತ್ಕಲ್, ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲಿ ನೀಲಿ ತೆರೆಗಳು ದಡಕ್ಕೆ ಅಪ್ಪಳಿಸಲು ಆರಂಭಿಸಿವೆ. ಅರಬ್ಬಿ ಸಮುದ್ರದ ಮಲ್ಪೆ, ಕಾರವಾರ ಉದ್ದಕ್ಕೂ ನೀಲಿ ಬೆಳಕು ಕಾಣಿಸಿಕೊಳ್ಳುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿ ಹರಡುತ್ತಿದೆ.
ಸೋಮೇಶ್ವರ, ಉಚ್ಚಿಲ, ಸಸಿಹಿತ್ಲು ಬೀಚ್ ಗಳಲ್ಲಿ ಈ ವಿದ್ಯಮಾನ ಪರಿಣಾಮಕಾರಿಯಾಗಿ ಕಾಣಿಸಿ ಕೊಂಡಿದ್ದು, ಹಲವಾರು ಮಂದಿ ಈ ವಿಸ್ಮಯವನ್ನು ನೋಡಲು ಸಮುದ್ರದ ತೀರಗಳಿಗೆ ತೆರಳುತ್ತಿದ್ದಾರೆ. ಸಮುದ್ರ ತೀರದಲ್ಲಿ ಜನ ಜಮಾಯಿಸಿ ನೀಲಿ ಬೆಳಕು ದಡಕ್ಕೆ ಅಪ್ಪಳಿಸುವುದನ್ನು ಕಂಡು ಬೆರಗಾಗಿದ್ದಾರೆ.
ಸುರತ್ಕಲ್ ಬೀಚ್, ಸಸಿಹಿತ್ಲು ಬೀಚ್ ಸೇರಿದಂತೆ ಉಳ್ಳಾಲ, ಮುಕ್ಕಚ್ಚೇರಿ, ಸೋಮೆಶ್ವರ, ಉಚ್ಚಿಲ, ತಲಪಾಡಿ ಭಾಗಗಳಲ್ಲಿ ಸಮುದ್ರದ ಅಲೆಗಳಲ್ಲಿ ನೀಲಿ ಬೆಳಕು ಕಾಣಿಸಿಕೊಂಡಿದೆ. ಈ ರೀತಿ ನೀಲಿ ಬೆಳಕು ಹಲವು ದಿನಗಳಿಂದ ಬೆಳಕು ಕಾಣುತ್ತಿದ್ದರೂ, ಜನರು ಈ ಬಗ್ಗೆ ಹೆಚ್ಚು ಯೋಚನೆ ಮಾಡಿರಲಿಲ್ಲ.
ಯಾವಾಗ ಕಾರವಾರ ಮಲ್ಪೆ ಸಮುದ್ರ ತೀರದ ಬೆಳಕಿನ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಯಿತು,ಅಂದಿನಿಂದ ಉಳ್ಳಾಲ ಭಾಗದಲ್ಲಿಯೂ ಕುತೂಹಲಿಗರು ಸಮುದ್ರ ತೀರದಲ್ಲಿ ತಡರಾತ್ರಿವರೆಗೂ ಉಳಿದು ಅಲೆಗಳ ಜತೆಗೆ ನೀಲಿಬೆಳಕಿನ ಆಟವನ್ನು ಮೊಬೈಲ್ ಹಾಗೂ ಕ್ಯಾಮ್ಯರಗಳ ಮೂಲಕ ಸೆರೆಹಿಡಿದರು.
ಈ ಕುರಿತು ಅಧ್ಯಯನ ನಡೆಸಿರುವ ಇಲ್ಲಿನ ಮೀನುಗಾರಿಕೆ ಕಾಲೇಜಿನ ವಿಜ್ಞಾನಿಗಳು, ಇದು ಪ್ಲಾಂಕ್ಟನ್ ಹಾಗೂ ಬ್ಯಾಕ್ಟಿರಿಯಾಗಳಿಂದ ಆಗುತ್ತಿದೆ ಎಂದು ತಿಳಿಸಿದ್ದಾರೆ.
ನೀರಿನ ಮಾದರಿಯನ್ನು ಸಂಗ್ರಹಿಸಿ, ಮೈಕ್ರೋಸ್ಕೋಪ್ ಮೂಲಕ ಪರೀಕ್ಷಿಸಲಾಗಿದೆ. ಪ್ಲಾಂಕ್ಟನ್ ಮತ್ತು ಬ್ಯಾಕ್ಟಿರೀಯಾಗಳು ಗೋಚರಿಸಿವೆ ಎಂದು ಕಾಲೇಜಿನ ಡೀನ್ ಡಾ.ಎ. ಸೆಂಥಿಲ್ ವೇಲ್ ತಿಳಿಸಿದ್ದಾರೆ.
Comments are closed.