ಕರಾವಳಿ

ಕೆಳಾಕಳಿ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ: ಮನೆಗೆ ಬರುವ ಕೋಣಕ್ಕೆ ರಾಜಗೌರವ! (Video)

Pinterest LinkedIn Tumblr

ಕುಂದಾಪುರ: ಇಡಿ ಊರಿಗೆ ಊರೇ ಸಂಭ್ರಮದ ವಾತಾವರಣ. ಪ್ರತಿ ಮನೆಯೆದುರು ತಳಿರು ತೋರಣಗಳ ಸಿಂಗಾರ. ರಂಗೋಲಿಗಳನ್ನು ಹಾಕಿದ ಹೆಂಗಳೆಯರು. ಪ್ರತಿ ಮನೆಗೂ ಬರ್ತಾನೆ ವಿಶೇಷ ಅತಿಥಿ. ಆತನ ಸ್ವಾಗತ ಮಾಡಿ ಸತ್ಕರಿಸುವ ನಾರಿಮಣಿಯರು. ಅಷ್ಟಕ್ಕೂ ಆ ಸಂಭ್ರಮವೇನು? ಆ ಅತಿಥಿ ಯಾರು ಎನ್ನೋದಕ್ಕೆ ಈ ಸ್ಟೋರಿ ನೋಡಿ.

ಕರಾವಳಿಯೇ ದೇವರು ದೈವಗಳ ನೆಲವೀಡು. ಅನಾದಿ ಕಾಲದಿಂದಲೂ ಕೂಡ ಇಲ್ಲಿ ಪ್ರತಿಯೊಂದು ಆರಾಧನೆಗಳು ಸಂಪ್ರದಾಯ ಬದ್ಧವಾಗಿ ನಡೆಯುತ್ತೆ. ಅಂತೆಯೇ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಕೆಳಾಕಳಿ-ಬಂಟ್ವಾಡಿಯಲ್ಲಿರುವ ಶ್ರೀ ಮಾರಿಕಾಂಬ ದೇವಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಎರಡು ವರ್ಷಕ್ಕೊಂದು ಬಾರಿ ನಡೆಯುವ ಜಾತ್ರಾ ಮಹೋತ್ಸವ ನಿಜಕ್ಕೂ ವಿಶೇಷ ಆಚರಣೆಯ ಜೊತೆಗೆ ಆ ಊರಿಗೆ ಒಂದು ಸಂಭ್ರಮವನ್ನು ಸ್ರಷ್ಟಿಸುತ್ತೆ. ಸಿರಸಿ ಮಾರಿಕಾಂಬೆಯಂತೆಯೇ ಇಲ್ಲಿ ನೆಲೆಸಿದ ದೇವಿಯ ಪ್ರತೀತಿ ಆಗಾದವಾದದ್ದು. ಜಾತ್ರೆಯ ಪೂರ್ವಭಾವಿಯಾಗಿ ತಿಂಗಳ ಮೊದಲು ಪ್ರಸಾದ ನೋಡಲಾಗುತ್ತೆ, 21 ದಿನ ಮೊದಲು ಮರಕ್ಕೆ ಮಚ್ಚು ಹಾಕಲಾಗುತ್ತೆ. ಅದಾಗಿ ಒಂದು ವಾರದ ಬಳಿಕದ ಮಂಗಳವಾರ ಕೋಣಕ್ಕೆ ದಾರೆ ಎರೆಯುವ ಪದ್ಧತಿಯಿದೆ. ಮಾರನೇ ದಿನದಿಂದ ಗ್ರಾಮದ ಪ್ರತಿಯೊಂದು ಮನೆಗೂ ಮೆರವಣಿಗೆ ಮೂಲಕ ಹೋಗುತ್ತೆ. ಉತ್ತರ ಕನ್ನಡದ ಸಿರಸಿ ಬಿಟ್ಟರೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕೋಣದ ಮೆರವಣಿಗೆ ಇಲ್ಲಿ ಮಾತ್ರ.

 

ಅಷ್ಟೇ ಅಲ್ಲ ಐದು ವರ್ಗದ ಸಮುದಾಯದವರು ಪೂಜೆ ಸಲ್ಲಿಸುವ ದೇವಿ ಆಲಯವೂ ಇದು ಎಂಬುದು ಮತ್ತೊಂದು ವೈಶಿಷ್ಟ್ಯ. ವರ್ಷಪೂರ್ತಿ ಇಲ್ಲಿ ಪೂಜಾಕೈಂಕರ್ಯಗಳು ನಡೆದರೂ ಕೂಡ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಜಿಲ್ಲೆ ಸೇರಿದಂತೆ ಮಲೆನಾಡು ನಾಗೂ ಉತ್ತರಕನ್ನಡದ ಭಕ್ತರು ಬರ್ತಾರೆ. ಕೆಳಾಕಳಿ ಗುಡ್ಡಮ್ಮಾಡಿಯ ದೊಡ್ಮನೆಯ ಕುಟುಂಬದವರಾದ ಜಯರಾಜ್ ಎಸ್. ಹೆಗ್ಡೆ ಅನುವಂಶಿಕ ಆಡಳಿತ ಮೊಕ್ತೇಸರರಾಗಿದ್ದಾರೆ.

ಇನ್ನು ಶ್ರೀ ದೇವಿಯ ಆಲಯದಲ್ಲಿ ವಿವಿಧ ಹರಕೆಗಳು ಸಲ್ಲಿಕೆಯಾಗುತ್ತೆ. ಸಿಡುಬು, ದಡಾರಾ ಮೊದಲಾದ ರೋಗಗಳು ಬಂದಾಗ, ಮಕ್ಕಳು, ಮನೆಯ ದನಕರುಗಳಿಗೆ ಸಮಸ್ಯೆಯಾದಾಗ ಶ್ರೀ ದೇವಿಗೆ ಹರಕೆ ಹೊತ್ತ ಭಕ್ತರು ಇಲ್ಲಿಗೆ ಬಂದು ಸೇವೆ ನೀಡ್ತಾರೆ. ತಾವು ನಂಬಿದ ತಾಯಿ ನಮ್ಮನ್ನು ಸಲುಹಿ ಕಾಪಾಡ್ತಾಳೆ ಎಂಬ ಆಗಾಧ ನಂಬಿಕೆ ಭಕ್ತ ಸಮುದಾಯದ್ದು. ಬೇವು ಉಡಿಸುವ ಸಂಪ್ರದಾಯದಂತೆ ಹರಕೆ ಹೊತ್ತ ಮಂದಿ ಮಡಿಯಲ್ಲಿ ಹೊಸಬಟ್ಟೆ ಉಟ್ಟು ಬಂದು ಅದರ ಮೇಲೆ ಬೇವು ಉಟ್ಟು ಹರಕೆ ಸಲ್ಲಿಸುತ್ತಾರೆ.

ಕೋಣಕ್ಕೆ ರಾಜ ಮರ್‍ಯಾದೆ!
ಮನೆ ಮನೆಗೂ ಕೋಣ ಮೆರವಣಿಗೆ ಮಾಡುವ ಸಂಪ್ರದಾಯವೂ ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಊರಿನ ಅನಿಷ್ಟಗಳು ಕೋಣ ನಿವಾರಿಸುತ್ತೆ. ಕೋಣವು ಅನಿಷ್ಟಗಳನ್ನು ಹೊಗಲಾಡಿಸಿ ಬಳಿಕ ಮಾರಿಯ ಮೂಲಕ ಅದನ್ನು ಪರಿಹರಿಸಲಾಗುತ್ತೆ. ಮನೆಮನೆಗೆ ಬರುವ ಕೋಣಕ್ಕೆ ಅಲ್ಲಲ್ಲಿ ರಾಜಮರ್ಯಾದೆ ನೀಡಲಾಗುತ್ತೆ. ಮನೆಮಂದಿ ರಂಗೋಲಿ ಹಾಕಿ, ತಳಿರು ತೋರಣಗಳನ್ನು ಸಿದ್ಧಪಡಿಸಿ ಸಿಂಗಾರ ಮಾಡಿರ್ತಾರೆ. ಹಿಂದಿನ ಸಂಪ್ರದಾಯದಂತೆ ಪುರುಷರು ಡೋಲು, ಕೊಳಲು ವಾದನದ ಮೂಲಕ ಮುಂದೆ ಸಾಗಿದರೆ ಹಿಂದೊಬ್ಬ ಮಹಿಳೆ, ಹೂ-ಕಾಯಿಯಿರುವ ಬುಟ್ಟಿ ಹೊತ್ತು ಸಾಗುತ್ತಾರೆ. ಮನೆಗೆ ಕೋಣ ಬರುತ್ತದೆಂದಾಗ ಆ ಭಾಗದ ಜನರಲ್ಲಿ ಒಂದು ಉತ್ಸಾಹ. ಸಾಕ್ಷಾತ್ ದೇವಿಯೇ ಮನೆಗೆ ಬರುತ್ತಿದ್ದಾಳೆಂಬ ಭಯ-ಭಕ್ತಿ. ಮನೆಯಂಗಳಕ್ಕೆ ಬರುವ ಕೋಣನ ಕಾಲಿಗೆ ನೀರು ಹೊಯ್ದು, ಕುತ್ತಿಗೆಗೆ ಹೂ ಹಾರ ಹಾಕಿ, ತಲೆಗೆ ಎಣ್ಣೆ ಹಾಕಿ, ಕಣ್ಣಿನ ಕೆಳ, ಮೇಲ್ಭಾಗಕ್ಕೆ ಕಾಡಿಗೆ ಹಚ್ಚಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಳ್ಳುವುದಲ್ಲದೇ ಅಕ್ಕಿ ,ಬಾಳೆಹಣ್ಣನ್ನು ಕೋಣಕ್ಕೆ ನೀಡಲಾಗುತ್ತೆ.

ಕೆಳಾಕಳಿ ಮಾರಿಕಾಂಬಾ ದೇವರು ಅತ್ಯಂತ ಶಕ್ತಿ ಸ್ಥಳವಾಗಿದ್ದು, ನಂಬಿದವರ ತಾಯಿ ಕೈ ಬಿಡೋದಿಲ್ಲ ಎನ್ನುವ ನಂಬಿಕೆ ಭಕ್ತರಲ್ಲಿದೆ. ಇಲ್ಲಿ ಜಾತಿ ಬೇಧವಿಲ್ಲದೆ ದೇವಿ ಪೂಜೆ ಮಾಡುವುದು ವಿಶೇಷ. ಸಿಡಿಬು, ಧಡಾರ ಮುಂತಾದ ಕಾಯಿಲೆಗೆ ಜನ ಹರಕೆ ಹೊರಲಿದ್ದು, ಮೇ.೯ರಂದು ಹರಿಕೆ ಹೊತ್ತವರು ಸ್ನಾನ ಮಾಡಿ ಬಡಿಬಟ್ಟೆ ಧರಿಸಿ, ಅದರ ಮೇಲೆ ಸೊಪ್ಪಿನ ಅಟ್ಟೆ ಕಟ್ಟಿ ಗದ್ದುಗೆ ಪ್ರದಕ್ಷಣೆ ಬರುತ್ತಾರೆ. ಶಿರಸಿ ಜಾತ್ರೆ ಮರುವರ್ಷ ಇಲ್ಲಿ ಜಾತ್ರೆ ನಡೆಯುವುದು ವಿಶೇಷ.
– ನಾರಾಯಣ ಗುಜ್ಜಾಡಿ, ಅಧ್ಯಕ್ಷ ಸಾಮಾಜಿಕ ನ್ಯಾಯ ಸಮಿತಿ ತಾಪಂ ಕುಂದಾಪುರ

ಧಾರ್ಮಿಕ ಸಭೆ
ಕೆಳಾಕಳಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆ ನಿಮಿತ್ತ ದೇವಸ್ಥಾನ ವಠಾರದಲ್ಲಿ ಮೇ.೮ ಸಂಜೆ ೮ಕ್ಕೆ ಧಾರ್ಮಿಕ ಸಭೆ ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕೊರಂಗ್ರಪಾಡಿ ವೇ.ಮೂ.ಕುಮಾರಗುರು ತಂತ್ರಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಕೆಳಾಕಳಿ ಶ್ರೀ ಮಾರಿಕಾಂಬಾ ದೇವಸ್ಥಾನ ಅನುವಂಶಿಕ ಮೊಕ್ತೇಸರ ಜಯರಾಜ್ ಎಸ್.ಹೆಗ್ಡೆ, ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ನಿವೃತ್ತ ಶ್ರೇಣಿ ಮುಖ್ಯೋಪಾಧ್ಯಾಯ ರಾಜೀವ ಶೆಟ್ಟಿ, ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಧರ್ಮದರ್ಶಿ ಅರುಣ ಕುಮಾರ್ ಶೆಟ್ಟಿ, ದರ್ಶನ ಪಾತ್ರಿ ನಾರಾಯಣ, ಜಿಪಂ ಸದಸ್ಯ ಬಾಬು ಶೆಟ್ಟಿ, ಕುಂದಾಪುರ ತಾಪಂ ಮಾಜಿ ಉಪಾಧ್ಯಕ್ಷ ಹಕ್ಲಾಡಿ ಸಂತೋಷ ಕುಮಾರ್ ಶೆಟ್ಟಿ ಬಾಳೆಮನೆ, ಗುಡ್ಡಮ್ಮಾಡಿ ದೊಡ್ಮನೆ ವಿಶ್ವನಾಥ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

ಸಾಂಸ್ಕೃತಿಕ ಕಾರ್‍ಯಕ್ರಮ..
ಮೇ.6, 12ಕ್ಕೆ ದೇವಿಯ ವೈಭವದ ಬೀಡಿಗೆ ಮೆರವಣಿಗೆ, ಮೇ.7  ದೇವಿಗೆ ಬಲಿಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ, ತ್ರಾಸಿ ಜನಪ್ರಿಯ ಭಜನಾಮಂಡಳಿಂದ ಭಕ್ತಿ ಲಹರಿ, ಸಂಜೆ ಮೋವಾಡಿ ಶ್ರೀ ಮಾಣಿ ಸಿದ್ದಲಿಂಗೇಶ್ವರ ದೇವಸ್ಥಾನ ತಂಡದಿಂದ ಭಜನೆ, ಸಂಜೆ 8ಕ್ಕೆ ಬಂಟ್ವಾಡಿ ನ್ಯೂ ಅನುದಾನಿತ ಯಕ್ಷ ದೀವಿಗೆ ವಿದ್ಯಾರ್ಥಿಗಳಿಂದ ಮಹಿಷಮರ್ಧಿನಿ, ಮತ್ತು ಸ್ಥಳೀಯ ಹವ್ಯಾಸಿ ಕಲಾವಿದರಿಂದ ಪೌರಾಣಿಕ ಪ್ರಸಂಗ ನಡೆಯಲಿದೆ. ಮೇ.9 ರಂದು ಬೆಳಗ್ಗೆ 10ಕ್ಕೆ ತುಲಾಭಾರ ಸೇವೆ, ಬಲಿ ಹಾಗೂ ಭಜನಾ ಕಾರ್‍ಯಕ್ರಮ ನಡೆಯಲಿದ್ದು, ರಾತ್ರಿ 9ಕ್ಕೆ ಮಂಗಳೂರು ಭಗವತಿ ಮೇಳದವರಿಂದ ಪೌರಾಣಿಕ ಪ್ರಸಂಗ ಯಕ್ಷಗಾನ ನಡೆಯಲಿದೆ.

ವರದಿ- ಯೋಗೀಶ್ ಕುಂಭಾಸಿ

Comments are closed.