ಕುಂದಾಪುರ: ಎಲ್ಲಿ ನೋಡಿದರಲ್ಲಿ ನೆರೆದಿರುವ ಭಕ್ತಸಾಗರ, ಎಲ್ಲರಲ್ಲಿಯೂ ಭಕ್ತಿಯ ಪರಾಕಾಷ್ಟೆ. ಶ್ರೀ ದೇವರ ದರ್ಶನಕ್ಕಾಗಿ ಕಿಲೋಮೀಟರ್ ಉದ್ದಕ್ಕೂ ಸರತಿ ಸಾಲು. ಕೈಯಲ್ಲಿ ಹಿಂಗಾರ ಪುಷ್ಪ, ಹರಕೆ-ಹಣ್ಣುಕಾಯಿಗಳು. ಇದೆಲ್ಲಾ ಕಂಡುಬಂದಿದ್ದು ಕುಂದಾಪುರದ ಕಾಳಾವರದ ಶ್ರೀ ಕಾಳಿಂಗ ದೇವಸ್ಥಾನದಲ್ಲಿ. ಸೋಮವಾರ ಇಲ್ಲಿ ನಡೆದ ಚಂಪಾಷಷ್ಟಿ ಮಹೋತ್ಸವದ ಕುರಿತಾದ ಒಂದು ಸ್ಟೋರಿಯಿಲ್ಲಿದೆ.
ಕರಾವಳಿಯಲ್ಲಿ ನಾಗನಿಗೆ ಸಲ್ಲುವಷ್ಟು ಹರಕೆ ಸೇವೆಗಳು ಮತ್ತೆ ಎಲ್ಲಿಯೂ ಸಲ್ಲುವುದಿಲ್ಲ ಎಂಬುವುದಕ್ಕೆ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರ ಶ್ರೀ ಕಾಳಿಂಗ ದೇವರ ಸನ್ನಿಧಿ ಸಾಕ್ಷಿ. ಪ್ರಮುಖ ಮೂಲಸ್ಥಾನವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಿಟ್ಟರೆ ಎರಡನೇ ಮೂಲಸ್ಥಾನ ಎಂಬ ಹೆಗ್ಗಳಿಕೆ, ಪುರಾತನ ವೈಶಿಷ್ಟತೆ ಪಡೆದ ದೇವಸ್ಥಾನವೇ ಕುಂದಾಪುರ ತಾಲೂಕಿನ ಕಾಳಾವರದ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನಕ್ಕಿದೆ. ಅಷ್ಟಮಂಗಲ ಪ್ರಶ್ನೆಯಲ್ಲೂ ಕೂಡ ಇದು ಸಾಭೀತಾಗಿದೆ. ಸುಮಾರು ಎಂಟು ಶತಮಾನಗಳ ಹಿಂದೆ ಇಲ್ಲಿ ಈಶ್ವರ ದೇವಸ್ಥಾನ ಇತ್ತೆಂಬುದಕ್ಕೆ ಹಳೆಯ ಶಿಲಾ ಶಾಸನಗಳು ಸಾಕ್ಷಿ ನುಡಿಯುತ್ತವೆ. ಈಶ್ವರ ದೇವಸ್ಥಾನದ ಬಲಭಾಗದಲ್ಲಿ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನವಿದೆ. ಸುಮಾರು ೫೦೦ ವರ್ಷಗಳ ಇತಿಹಾಸ ಸಾರುವ ಕಾಳಾವರ ಶ್ರೀ ಕಾಳಿಂಗ ದೇವಸ್ಥಾನಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯದಿಂದ ಕಾಳಿಂಗ ಸರ್ಪವೊಂದು ತೆವಳುತ್ತಾ ಇಲ್ಲಿ ಬಂದು ನೆಲೆ ನಿಂತಿದ್ದು ಕಾಳಿಂಗ ನೆಲೆಸಿದ ಈ ಸ್ಥಳಕ್ಕೆ ಕಾಳಾವರ ಎಂಬ ಹೆಸರು ಬಂತೆಂಬ ಪ್ರತೀತಿಯಿದೆ. ಇಂದಿನಿಂದ ಎರಡು ದಿನಗಳ ಕಾಲ ಸುಬ್ರಹ್ಮಣ್ಯ ದೇವಸ್ಥಾನದ ರೀತಿಯಲ್ಲಿಯೇ ಚಂಪಾ ಷಷ್ಟಿ ಉತ್ಸವ ನಡೆಯುತ್ತದೆ. ರಾಜ್ಯ ಬೇರೆ ಬೇರೆ ಊರುಗಳಿಂದ ಭಕ್ತರು ಇಲ್ಲಿಗೆ ಬಂದು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಈ ಸಂದರ್ಭದಲ್ಲಿ ಮಹಾ ಪೂಜೆ, ಪಂಚಾಮೃತ, ಮುಡಿ ಪ್ರದಕ್ಷಿಣೆ, ಶುದ್ಧ ಕಲಶ, ಈಶ್ವರನಿಗೆ ರುದ್ರಾಭಿಶೇಕ, ಉರುಳು ಸೇವೆ, ತುಲಾಭಾರ, ಆಶ್ಲೇಷ ಬಲಿ, ನಾಗಮಂಡಲ, ಹೂ-ಕಾಯಿ ಅರ್ಪಣೆ, ನಾಗಸಂಸ್ಕಾರ ಮುಂತಾದ ಸೇವೆಗಳು ಭಕ್ತಾಧಿಗಳಿಂದ ನಡೆಯುತ್ತಿದೆ.
ಕಾಳಾವರದ ಕಾಳಿಂಗ ದೇವಸ್ಥಾನದಲ್ಲಿ ಬಂದು ದೇವರಿಗೆ ಹರಕೆ ಹೊತ್ತುಕೊಂಡರೆ ಮದುವೆಯಾಗದವರಿಗೆ ವಿವಾಹ ಯೋಗ ಹಾಗೂ ಸಂತಾನ ಭಾಗ್ಯ ದೊರೆಯದವರಿಗೆ ಮಕ್ಕಳಾಗುತ್ತವೆ. ಚರ್ಮರೋಗ, ಕೈಕಾಲು ನೋವು ಮೊದಲಾದ ದೈಹಿಕ ವ್ಯಾಧಿಗಳಿಂದ ಮುಕ್ತಿ ಸಿಗುತ್ತೆ ಎನ್ನುವ ಅಪಾರ ನಂಬಿಕೆ ಭಕ್ತರದ್ದು. ಶ್ರೀ ಸುಬ್ರಮಣ್ಯನಿಗೆ ವಿವಾಹ ಸಂಭಂದಿ, ಸಂತಾನ ಸಂಭಂದಿ, ಚರ್ಮಾಧಿ ರೋಗರುಜಿನಗಳ ಸಂದರ್ಭದಲ್ಲಿ ದೇವರಿಗೆ ಹೇಳಿಕೊಂಡ ಹರಕೆಯನ್ನು ಷಷ್ಠಿಯ ದಿನ ಸಮರ್ಪಿಸುತ್ತಾರೆ. ಅಲ್ಲದೇ ಶ್ರೀ ದೇವರಿಗೆ ಶೃಂಗಾರ ಪುಷ್ಪ ಪ್ರಿಯವಾದುದಾಗಿದ್ದು ಭಕ್ತರು ಹಿಂಗಾರ ಅಥವಾ ಸಿಂಗಾರ ಪುಷ್ಪವನ್ನು ಸಮರ್ಪಿಸುತ್ತಾರೆ. ಅಲ್ಲದೇ ಚರ್ಮ ರೋಗ, ಹಲ್ಲು ನೋವು, ಕಣ್ಣು ನೋವು, ಗಂಟು ನೋವು ಮುಂತಾದ ರೋಗಬಾಧೆಗಳಿಗೆ ಬೆಳ್ಳಿಯ ನಾನಾ ಆಕಾರದ ಆಕೃತಿಗಳನ್ನು ದೇವರಿಗೆ ಸಮರ್ಪಿಸುವುದರ ಮೂಲಕ ಹರಕೆ ಸಲ್ಲಿಸುತ್ತಾರೆ. ಈ ದಿನದಂದು ಕ್ಷೇತ್ರದಲ್ಲಿ ಅನೇಕ ಮಂದಿ ಬೆಳ್ಳಿ ತುಣುಕುಗಳನ್ನು ಮಾರುವ ಸಂಪ್ರದಾಯವಿದೆ. ಈ ಹರಕೆಗಳನ್ನು ಹಾಗೂ ಹಿಂಗಾರ ಪುಷ್ಪ, ಬಾಳೆಹಣ್ಣು ಮೊದಲಾದವುಗಳನ್ನು ದೇವರಿಗೆ ಸಮರ್ಪಿಸಿದರೆ ನಾಗದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು. ಇನ್ನು ಕಷ್ಟಕಾಲದಲ್ಲಿ ಹರಕೆ ಹೇಳಿಕೊಂಡವರು ಉರುಳು ಸೇವೆ ಮಾಡುವ ಸಂಪ್ರದಾಯವೂ ನಡೆದುಕೊಂಡು ಬಂದಿದೆ. ಷಷ್ಠಿ ದಿನದಂದು ಹಲವರ ಮನೆಯಲ್ಲಿ ಕುಂಬಳಕಾಯಿ ಹಾಗೂ ಹರಿವೆಯಿಂದ ತಯಾರಿಸಿದ ಅಡುಗೆ ತಯಾರಿಸುವ ರೂಢಿಯೂ ಇದ್ದು ದೇವಸ್ಥಾನದ ಆವರಣದಲ್ಲಿ ತರಕಾರಿಗಳ ಮಾರಾಟ ಭರ್ಜರಿಯಾಗಿರುತ್ತೆ.
ಕಲಿಯುಗದ ಪ್ರತ್ಯಕ್ಷ ದೈವ ಎಂದು ಕರೆಯಲ್ಪಡುವ ನಾಗನ ಸ್ಥಾನವಾದ ಕಾಳವರದ ಕಾಳಿಂಗ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವರ ದರ್ಶನ ಪಡೆದ್ರು. ಪಡೆದು ಹರಕೆಗಳನ್ನು ತೀರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದ್ರು.
——————–
ಚಿತ್ರ, ವರದಿ- ಯೋಗೀಶ್ ಕುಂಭಾಸಿ
Comments are closed.