ಚಿಕ್ಕಬಳ್ಳಾಪುರ,ಮೇ.17 : ಇದು ಒಂದು ಹಂತದಲ್ಲಿ ಸೆಲ್ಫಿ ಜಮಾನ ಅಂತನೇ ಹೇಳಬಹುದು. ದೇಶದ ಪ್ರಧಾನಿಯಿಂದ ಹಿಡಿದು ಹಳ್ಳಿಗರವರೆಗೆ, ಹಿರಿಯರಿಂದ ಕಿರಿಯರ ವರೆಗೆ ಎಲ್ಲೆಲ್ಲೂ ಸೆಲ್ಫಿಮಯ. ಇನ್ನು, ಇಲ್ಲೊಂದು ಬೆಟ್ಟವಿದೆ. ಇದು ಧಾರ್ಮಿಕ ಕ್ಷೇತ್ರಕ್ಕಿಂತಲೂ ಸೆಲ್ಫಿಗಳಿಂದಲೇ ಹೆಚ್ಚು ಖ್ಯಾತಿ ಪಡೆಯುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆವಲಬೆಟ್ಟ ಧಾರ್ಮಿಕವಾಗಿ ಖ್ಯಾತಿ ಹೊಂದಿದ್ದರೂ, ಇತ್ತೀಚೆಗೆ ಯುವಜನರಲ್ಲಿ ಸೆಲ್ಫಿ ಕ್ರೇಜ್’ನಿಂದ ಇದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಈ ಬೆಟ್ಟದ ಮೇಲಿನ ಒಂದು ಭಾಗದಲ್ಲಿ ಬಂಡೆಯೊಂದು ಪಕ್ಷಿಯ ಕೊಕ್ಕರೆಯಂತೆ ಹೊರ ಚಾಚಿದ್ದರಿಂದ ಇದು ಫೋಟೋ ಪ್ರಿಯರ ಹಾಟ್ ಸ್ಪಾಟ್ ಆಗಿದೆ.
ಇದು ಬೆಂಗಳೂರಿನಿಂದ ಸುಮಾರು 80 ಕಿಲೋ ಮೀಟರ್ ದೂರದಲ್ಲಿರುವ ಈ ಬೆಟ್ಟದ ಮೇಲೆ ಐತಿಹಾಸಿಕ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯವಿದೆ. ಅಲ್ಲದೇ, ಬೆಟ್ಟದ ಸುತ್ತಲೂ ಮನಮೋಹಕವಾಗಿ ಹಸಿರು ಮೈಚಾಚಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಬೆಟ್ಟದ ಮೇಲೆ ಮೊನಚಾಗಿರುವ ಬಂಡೆ ಮೇಲೆ ಯುವಜನರು ನಾನಾ ರೀತಿಯಲ್ಲಿ ಫೊಟೋಗೆ ಫೋಸ್ ಕೊಡ್ತಾರೆ. ಇನ್ನೂ, ಕೆಲವರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ.
ನೈಸರ್ಗಿಕ ಸೌಂರ್ಯದಿಂದಲೇ ಬಡವರ ಊಟಿ ಎಂದೇ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರಯ ಜಿಲ್ಲೆಯ ನಂದಿಬೆಟ್ಟ, ಸ್ಕಂದಗಿರಿ ಬೆಟ್ಟಗಳ ಸಾಲಿಗೆ ಇದೀಗ ಆವಲಬೆಟ್ಟ ಕೂಡಾ ಪ್ರವಾಸಿಗರ ಫೇವರಿಟ್ ಸ್ಪಾಟ್ ಆಗುತ್ತಿದೆ. ಹೀಗಾಗಿ ಬೆಟ್ಟದ ಮೇಲೆ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡರೆ, ಒಳ್ಳೆಯದು.
Comments are closed.