ಕರಾವಳಿ

ಕಾಂಗ್ರೆಸ್ ಕೇಸರಿಯನ್ನು ನೆಚ್ಚಿಕೊಂಡಾಗಲೇ ಬಿಜೆಪಿ ಪ್ರಥಮ ಹಂತದ ಗೆಲುವು ಸಾಧಿಸಿದಂತಾಗಿದೆ: ಸಚಿವ ಕೋಟ (Video)

Pinterest LinkedIn Tumblr

ಉಡುಪಿ (ಬೈಂದೂರು): ಕೇಸರಿಯನ್ನು ಅಲರ್ಜಿ ಎಂದು ತಿಳಿದುಕೊಂಡು ಕೇಸರಿ ಶಾಲು ವಿರೋಧಿಸುತ್ತಿದ್ದ, ಹಾಸ್ಯ ಮಾಡುತ್ತಿದ್ದ ಕಾಂಗ್ರೆಸ್‌ನವರು ಇದೀಗಾ ಬಿಜೆಪಿ ನಂಬಿಕೆಯನ್ನು ಅರ್ಥಮಾಡಿಕೊಂಡು ಕೇಸರಿ ಶಾಲು ಹಾಕಿಕೊಂಡು ಮನೆಮನೆಗೆ ತೆರಳಿ ಪ್ರಚಾರ ಮಾಡುತಿದ್ದು ಬಿಜೆಪಿ ಪ್ರಥಮ ಹಂತದ ಗೆಲುವು ಸಾಧಿಸಿದಂತಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬೈಂದೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಿಂದುತ್ವ ಬಿಜೆಪಿ ಆಸ್ತಿಯಲ್ಲ ಎಂಬುದನ್ನು ಸಾರ್ವತ್ರಿಕವಾಗಿ ಡಿಕೆಶಿ ಹೇಳಿದ್ದನ್ನು ನಾವು ಅಲ್ಲಗಳೆಯುವುದಿಲ್ಲ. ಚುನಾವಣೆ ಸಂದರ್ಭ ಸಿದ್ಧರಾಮಯ್ಯ ಕೂಡ ಪ್ರಥಮ ಬಾರಿ ದೇವಸ್ಥಾನಕ್ಕೆ ಹೋಗುತ್ತಿದ್ದು ಅವರು ಹಿಂದೂ ಅಲ್ಲ ಎಂದು ಯಾರು ಹೇಳಿಲ್ಲ. ಆದರೆ ಹಿಂದೂಗಳು ಪೂಜಿಸುವ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ವಂಚನೆಯ ಮತಾಂತರ ಕಾಯ್ದೆಯನ್ನು ಸ್ವಾಗತಿಸುತ್ತೇವೆ ಎಂದು ಡಿಕೆಶಿ, ಸಿದ್ದರಾಮಯ್ಯ ಹೇಳಿದರೆ ಕಾಂಗ್ರೆಸ್‌ನವರ ಹಿಂದುತ್ವದ ಪ್ರೀತಿ, ಅಭಿಮಾನದ ಪ್ರತಿಪಾದನೆಗೆ ಅರ್ಥಬರುತ್ತದೆ ಎಂದರು.

ಬಿಜೆಪಿ ಸರಕಾರದಲ್ಲಿ ಮೀನುಗಾರರಿಗೆ ಅತೀ ಹೆಚ್ಚು ಅನುಕೂಲವಾದ ಯೋಜನೆಗಳು ದೊರೆತಿದೆ. ಈಗಾಗಲೇ ಬಾಕಿ ಉಳಿದಿರುವ ನಾಡದೋಣಿ ಮೀನುಗಾರರ ಸೀಮೆಎಣ್ಣೆ ಕೂಡ ಹಂತ ಹಂತವಾಗಿ ಬಿಡುಗಡೆಯಾಗಿದೆ. ಮರವಂತೆ ಮೀನುಗಾರರು ಮತದಾನ ಬಹಿಷ್ಕರಿಸುವ ವಿಷಯ ಅವರ ಹಕ್ಕಿನ ಆಗ್ರಹಕ್ಕಾಗಿ ಸರಿಯಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಜೊತೆ ಮರವಂತೆಗೆ ಶೀಘ್ರದಲ್ಲಿ ಬೇಟಿ ನೀಡುತ್ತೇನೆ ಎಂದರು.

ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿಯವರ   ಹೇಳಿಕೆಗೆ ಪ್ರತಿಕ್ರಿಯಿಸಿ ಗೋಪಾಲ ಪೂಜಾರಿಯವರ ವ್ಯಕ್ತಿತ್ವದ ಬಗ್ಗೆ ಅಪಾರ ಗೌರವವಿದೆ. ನಾನು ಅವರನ್ನು ಭಯೋತ್ಪಾದಕ ಎಂದಿಲ್ಲ ಅವರು ಪ್ರತಿನಿಧಿಸುವ ಕಾಂಗ್ರೇಸ್ ಪಕ್ಷ ಭಯೋತ್ಪಾದಕರಿಗೆ ಬೆಂಬಲ ಕೊಡುವ ಪಕ್ಷವಾಗಿದೆ. ಅವರು ನನ್ನ ವಿರುದ್ಧ ಯಾಕೆ ಮುಗಿಬಿದ್ದಿದ್ದಾರೆ ಎನ್ನುವುದು ತಿಳಿದಿಲ್ಲ. ಬಿಜೆಪಿ ಮುಖಂಡರಾಗಿದ್ದ ಬಾಬು ಹೆಗ್ಡೆ ಅವರು ಅತೃಪ್ತಿ ಇದೆಯೆಂದು ಪಕ್ಷ ತೊರೆದಿದ್ದಾರೆ. ಅವರಿಗೆ ಯಾವುದೇ ನೋವು ಇರಬಹುದು. ನಾನು ಆ ಪ್ರತಿಕ್ರಿಯಿಸಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಲಿದೆ. 140-150 ಸೀಟು ಗೆಲ್ಲುವ ಆಶಯವಿದೆ. ಕರಾವಳಿ ಮೂರು ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರ ಗೆಲ್ಲುವ ಉತ್ಸಾಹ ಕಾರ್ಯಕರ್ತರಲ್ಲಿದೆ. ಈಗಾಗಾಲೇ 224 ವಿಧಾನ ಸಭಾ ಕ್ಷೇತ್ರದಲ್ಲಿ ರಾಜ್ಯ ಮತ್ತು ಕೇಂದ್ರದ ನಾಯಕರು, ಸ್ಟಾರ್ ಪ್ರಚಾರಕರು ಪ್ರಚಾರದ ಕೆಲಸ ಮಾಡುತ್ತಿದ್ದು ಪಕ್ಷದ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಬೈಂದೂರು ಕ್ಷೇತ್ರದ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಸಂಘಟನೆ, ಪಕ್ಷದ ಪರಿಪೂರ್ಣ ಕಲ್ಪನೆ ಹೊಂದಿದ್ದು ಜನಪರ ನಿಲುವು ಹೊಂದಿದ್ದಾರೆ. ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಿಕೊಡಲು ಅವರು ವಿಧಾನಸಭೆ ಪ್ರವೇಶಿಸಬೇಕು. ಗಂಟಿಹೊಳೆ ಶಾಸಕರಾಗಬೇಕು ಎಂಬುದು ಕಾರ್ಯಕರ್ತರ ಇಚ್ಚೆ ಕೂಡ ಆಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾ. ಜ್ಯೋತಿ ಪಾಂಡ್ಯ, ಮುಖಂಡರಾದ ಶ್ಯಾಮಲಾ ಎಸ್.ಕುಂದರ್, ಮಹೇಂದ್ರ ಪೂಜಾರಿ, ಸುರೇಶ ಬಟ್ವಾಡಿ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಪ್ರಜ್ವಲ್ ಶೆಟ್ಟಿ , ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ, ಮಾಧ್ಯಮ ಸಂಚಾಲಕ ಗಣೇಶ ಗಾಣಿಗ ಉಪ್ಪುಂದ ಇದ್ದರು.

Comments are closed.