ಕರಾವಳಿ

ಬೈಂದೂರು ಶಾಸಕರಿಂದ ನಿತ್ಯ ಕಿರುಕುಳ ಆರೋಪ: ಮೂಕಾಂಬಿಕೆ ಮೊರೆಹೋದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫ್ಯಾಮಿಲಿ (Video)

Pinterest LinkedIn Tumblr

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಟುಂಬ ಕೊಲ್ಲೂರು ಶ್ರೀ ಮೂಕಾಂಬಿಕೆ ಮೊರೆ ಹೋದ ಘಟನೆ ಶುಕ್ರವಾರ ನಡೆದಿದೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಅವರ ಪತ್ನಿ ರೇಷ್ಮಾ, ತಾಯಿ ಲೀಲಾವತಿ ಹಾಗೂ ಮೂವರು ಮಕ್ಕಳ‌ ಜೊತೆಗೆ ಮೂಕಾಂಬಿಕೆ ಸನ್ನಿಧಿಗೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸದಾನಂದ ಉಪ್ಪಿನಕುದ್ರು,ಚುನಾವಣೆ ಪೂರ್ವದಲ್ಲಿ ಮಟ್ಕಾ, ಜುಗಾರಿ, ಇಸ್ಫೀಟ್ ದಂಧೆ ನಿಲ್ಲಿಸುವುದಾಗಿ ಹೇಳಿಕೊಂಡಿದ್ದರು. ಅವರು ಶಾಸಕರಾದ ಬಳಿಕ ಇದೆಲ್ಲವೂ ಹೆಚ್ಚಿದ್ದು ಈ ನಿಟ್ಟಿನಲ್ಲಿ ಕಾರ್ಯಕರ್ತರ ಮನವಿಯನ್ನು ಶಾಸಕರ ಮುಂದಿಟ್ಟಾಗ ತನ್ನ ವಿರುದ್ಧ ಕೂಗಾಡಿದ್ದರು. ಅಲ್ಲದೇ ಅಂದಿನಿಂದ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ನಾಲ್ಕೈದು ಚೆಕ್ ಬೌನ್ಸ್ ಕೇಸುಗಳನ್ನೂ ಹಾಕಿಸಿದ್ದಾರೆ. ಯಾರದ್ದೋ ಕೈಯಿಂದ ತಾನು ವ್ಯವಹಾರ ಮಾಡುವ ಸಮಯ ನೀಡಿದ್ದ ಒಂದು ಖಾಲಿ ಚೆಕ್ಕನ್ನು ಪಡೆದುಕೊಂಡಿದ್ದಲ್ಲದೇ ನನ್ನ ವಿರುದ್ಧ ಚೆಕ್ ಬೌನ್ಸ್ ಕೇಸ್ ಹಾಕಿಸಿದ್ದಾರೆ ಎಂದು ದೂರಿದರು.ಅವರ ಗೆಲುವಿಗೆ ಶ್ರಮ ಪಟ್ಟ ಕಾರ್ಯಕರ್ತರನ್ನು ಇದೀಗಾ ಸಂಪೂರ್ಣ ಕಡೆಗಣಿಸುತ್ತಿದ್ದು, ನಮ್ಮ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸುತ್ತಿದ್ದಾರೆ ಎಂದರು.

ಚುನಾವಣೆಯಲ್ಲಿ ಸುಕುಮಾರ ಶೆಟ್ಟಿಯನ್ನು ಗೆಲ್ಲಿಸಿವುದಕ್ಕೋಸ್ಕರ ನಾನು ಮಾಡಿದ ಹೋರಾಟದಿಂದ ನನ್ನ ವ್ಯವಹಾರದಲ್ಲಿ ನಷ್ಟ ಅನುಭವಿಸಿ ನಾನು ಸಂಪೂರ್ಣ ದಿವಾಳಿಯಾಗಿದ್ದೇನೆ. ಶಾಸಕರು ಹಾಕಿಸಿದ ಸುಳ್ಳು ಕೇಸುಗಳಿಂದ ಬಚಾವಾಗಲು ವಕೀಲರನ್ನು ನೇಮಿಸುವಷ್ಟೂ ಆರ್ಥಿಕ ಸದೃಢತೆ ನನ್ನಲ್ಲಿ ಇಲ್ಲವಾಗಿದೆ ಎಂದಿದ್ದಾರೆ

ಇಷ್ಟೇ ಅಲ್ಲದೇ ನಾನು ಮನೆಯಲ್ಲಿರುವ ಸಂದರ್ಭ ನನ್ನ ಮೊಬೈಲ್ ಗೆ ಕರೆ ಮಾಡಿದ ಶಾಸಕರು ನಿನ್ನ ತಾಯಿ, ಹೆಂಡತಿ ಹಾಗೂ ಮಕ್ಕಳನ್ನು ಮನೆಯಿಂದ ಹೊರ ಹಾಕಿಸುತ್ತೇನೆ. ನಿನ್ನ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುತ್ತೇನೆ ಎಂದೆಲ್ಲಾ ಬೆದರಿಕೆ ಹಾಕಿದ್ದು, ಇದನ್ನು ಕೇಳಿಸಿಕೊಂಡ ನನ್ನ ಕುಟುಂಬ ಹೆದರಿ ಕಂಗಾಲಾಗಿದೆ. ಪ್ರತಿ ದಿನವೂ ಭಯದ ನೆರಳಿನಲ್ಲಿ ಬದುಕುವಂತಾಗಿದೆ. ನನ್ನ ಕುಟುಂಬ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನೂ ಮಾಡಿದೆ. ಇದೆಲ್ಲದರ ಬಗ್ಗೆ ನಾನು ನನ್ನ ಪಕ್ಷದ ಎಲ್ಲಾ ನಾಯಕರಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ದೂರು ನೀಡಿದ್ದರೂ ಶಾಸಕರ ಕಿರುಕುಳ, ಮಾನಸಿಕ ಹಿಂಸೆ, ಬೆದರಿಕೆಗಳು ಹೆಚ್ಚುತ್ತಲೇ ಇವೆ. ದಿಕ್ಕು ಕಾಣದೇ ತಾಯಿ ಮೂಕಾಂಬಿಕೆಯ ಸನ್ನಿಧಾನದಲ್ಲಿ ಪತ್ರಿಕೆ ಹಾಗೂ ಮಾಧ್ಯಮ ಮಿತ್ರರ ಮುಂದೆ ಬಂದಿದ್ದೇನೆ ಎಂದರು.

ಆಣೆ, ಪ್ರಮಾಣಕ್ಕೆ ಬರಲಿ….
ನಾನು ಶಾಸಕರಿಗೆ ಯಾವುದೇ ಚೆಕ್ ನೀಡಿಲ್ಲ. ಒಂದು ವೇಳೆ ನಾನು ಆರೋಪ ಮಾಡಿದ್ದು ಸುಳ್ಳು ಎನ್ನುವುದಾದರೆ ಶಾಸಕರು ಮೂಕಾಂಬಿಕೆಯ ಸನ್ನಿಧಾನದಲ್ಲಿ ಸತ್ಯ ಹೇಳಲಿ ಎಂದರು.

ತನ್ನ ಮಗನಿಗೆ ಬೈಂದೂರು ಶಾಸಕರಾದ ಸುಕುಮಾರ ಶೆಟ್ಟಿ ನಿರಂತರ ಕಿರುಕುಳ ಹಾಗೂ ಬೆದರಿಕೆ ನೀಡುತ್ತಿದ್ದಾರೆ. ಮಗನನ್ನು ಬಲಗೈ ಬಂಟ, ತಮ್ಮ ಎಂದು ಹೊಗಳಿದ್ದ ಶಾಸಕ ಸುಕುಮಾರ ಶೆಟ್ಟಿ ನಮ್ಮನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ ಎಂದು ತಾಯಿ ಲೀಲಾವತಿ ಕಣ್ಣೀರಿಟ್ಟರು.

ಸದಾನಂದ ಅವರ ಅವರ ಪತ್ನಿ ರೇಷ್ಮಾ ಮಾತನಾಡಿ ಶಾಸಕರು ಇದೇ ರೀತಿ ಕಿರುಕುಳ ನೀಡುತ್ತಿದ್ದರೆ ಮಕ್ಕಳೊಂದಿಗೆ ಶಾಸಕರ ಮನೆಯ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಸಿದರು.

Comments are closed.