ಉಡುಪಿ: ಬಾವಿಗೆ ಬಿದ್ದ ವೃದ್ಧೆಯನ್ನು ನಗರ ಠಾಣೆಯ ಪಿಎಸ್ಐ ರಕ್ಷಿಸಿರುವ ಘಟನೆ ಉಡುಪಿಯ ಮಾರ್ಪಳ್ಳಿ ನಡೆದಿದೆ.
ಕುಕ್ಕಿಕಟ್ಟೆಯ ವೃದ್ಧೆಯೊರ್ವರು ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದು, ಜೀವನ್ಮರಣದ ಸ್ಥಿತಿಯಲ್ಲಿದ್ದರು. ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಗಸ್ತಿನಲ್ಲಿದ್ದ ಉಡುಪಿ ನಗರ ಠಾಣೆಯ ಪಿ.ಎಸ್.ಐ ಸದಾಶಿವ ರಾ. ಗವರೋಜಿ ಕೂಡಲೇ ಸ್ಥಳಕ್ಕಾಗಮಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಗಿಳಿಯಲು ಸಿದ್ಧತೆ ಮಾಡುತ್ತಿದ್ದರು. ಪಿಎಸ್ಐ ಸದಾಶಿವ, ವಿನಾಯಕ್ ಹಾಗೂ ಸ್ಥಳೀಯ ಆಟೋ ಚಾಲಕ ರಾಜೇಶ್ ನಾಯಕ್ ಕೂಡಲೇ ಬಾವಿಗಿಳಿದರು. ವೃದ್ಧೆಗೆ ಹಗ್ಗ ಕಟ್ಟಿ ಮೇಲೆಳೆಯಲಾಯ್ತು. ಸದ್ಯ ರಕ್ಷಿಸಲ್ಪಟ್ಟ ವೃದ್ಧೆ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ತುರ್ತು ಜೀವರಕ್ಷಣೆ ಕಾರ್ಯಚರಣೆಯಲ್ಲಿ ಸಾಹಸ ಮೆರೆದಿರುವ ಜೀವರಕ್ಷಕರಿಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಅಭಿನಂದನೆ ಸಲ್ಲಿಸಿದ್ದಾರೆ.
Comments are closed.