ಕರಾವಳಿ

ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗನ ಮಕರ ಸಂಕ್ರಮಣ ಉತ್ಸವಕ್ಕೆ ಸಾಕ್ಷಿಯಾದ ಸಹಸ್ರಾರು ಭಕ್ತರು (Video)

Pinterest LinkedIn Tumblr

ಕುಂದಾಪುರ: ಪ್ರತಿವರ್ಷ ಜನವರಿ 14 ರಂದು ನಡೆಯುತ್ತಿದ್ದ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮಕರ ಸಂಕ್ರಮಣ ಉತ್ಸವ ಈ ಬಾರಿ ಪಂಚಾಗದಂತೆ ಜನವರಿ 15 ರಂದು ಬುಧವಾರ ಅಭಿಜಿನ್ ಮುಹೂರ್ತದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ.

ತುಳುನಾಡಿನ ಅಸಂಕ್ಯ ಭಕ್ತ ಸಮುದಾಯವನ್ನು ಹೊಂದಿರುವ ದೇವಸ್ಥಾನ ಊರ ಮತ್ತು ಪರವೂರ ಅಪಾರ ಭಕ್ತಸಾಗರವನ್ನು ಹೊಂದಿದೆ. ಕ್ಷೇತ್ರದಲ್ಲಿ ಪ್ರತಿನಿತ್ಯ ವಿಶೇಷ ಪೂಜೆಗಳು ನಡೆಯುತ್ತದೆ.ರಂಗಪೂಜೆ, ಮಂಗಳಾರತಿ ಇಲ್ಲಿ ನಡೆಯುವ ವಿಶೇಷ ಪೂಜಾ ಕೈಂಕರ್ಯಗಳು. ಬ್ರಹ್ಮಲಿಂಗೇಶ್ವರ ದೇವರಿಗೆ ಪ್ರಿಯವಾದ ಸೇವಂತಿಗೆ ಮತ್ತು ಶೃಂಗಾರ ಪುಷ್ಪವನ್ನು ಹಬ್ಬದ ದಿನ ಸಾವಿರಾರು ಭಕ್ತರು ಅರ್ಪಿಸಿ ಹರಕೆ ತೀರಿಸಿದರು. ಈ ಸಂಪ್ರದಾಯಕ್ಕೆ ಹೂಕಾಯಿ ಆರ್ಪಿಸುವುದು ಎನ್ನಲಾಗುತ್ತದೆ. ಪ್ರಸಿದ್ಧವಾದ ಮಾರಣಕಟ್ಟೆ ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರಕೆ ಹಾಗೂ ಪೂಜೆಗಳನ್ನು ಸಲ್ಲಿಸುವ ಸಂಪ್ರದಾಯವಿದ್ದು ಜಾತ್ರಾ ಮಹೋತ್ಸವವಾದ ಬುಧವಾರ ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತರು ಹಣ್ಣು ಕಾಯಿಗಳನ್ನು ತಲೆ ಮೇಲೆ ಇಟ್ಟುಕೊಂಡು ದೇವರ ದರ್ಶನ ಪಡೆದು ಪೂಜೆಯನ್ನು ಸಲ್ಲಿಸಿದರು.

ತುಳು ನಾಡಿನ ಭಕ್ತರಿಗೆ ಬ್ರಹ್ಮಲಿಂಗೇಶ್ವರ ದೇವರ ಬಗ್ಗೆ ಅಪಾರ ಭಯ ಭಕ್ತಿ ಇದ್ದು ಪ್ರತಿವರ್ಷ ಸಂಕ್ರಮಣದಂದು ಜರಗುವ ಈ ಜಾತ್ರೆಗೆ ಆಗಮಿಸಿ ಪೂಜೆ ಸಲ್ಲಿಸುವುದು ವಾಡಿಕೆ. ಕ್ಷೇತ್ರದಲ್ಲಿ ಬ್ರಹ್ಮಲಿಂಗೇಶ್ವರನು ಪ್ರಧಾನ ದೇವರಾಗಿದ್ದು ಹುಲಿದೆವರು,ಹಾಯ್ಗುಳಿ,ಮರ್ಲ್ ಚಿಕ್ಕು ಮುಂತಾದ ಪರಿವಾರ ದೈವಗಳು ಇಲ್ಲಿ ನೆಲೆಸಿದೆ. ಮಾರಣಕಟ್ಟೆ ಶ್ರೀ ಕ್ಷೇತ್ರವು ಕುಂದಾಪುರದಿಂದ ಕೊಲ್ಲೂರಿಗೆ ಸಾಗುವ ಹೆದ್ದಾರಿಯಲ್ಲಿ ಸಿಗುವ ಚಿತ್ತೂರು ಎಂಬ ಗ್ರಾಮದಿಂದ ಕಾಲ್ನಡಿಗೆಯ ದೂರದಲ್ಲಿ ಸಿಗುತ್ತದೆ. ಇಂದು (ಬುಧವಾರ) ರಾತ್ರಿ ಕೆಂಡ ಸೇವೆ ನಡೆಯಲಿದ್ದು ಜಾತ್ರಾ ಸಮಯದಲ್ಲಿ ಕುಂದಾಪುರ, ಉಡುಪಿ, ಮಂಗಳೂರು, ಕಾರ್ಕಳ ಹಾಗೂ ಮಲೆನಾಡು ಭಾಗದಿಂದ ಭಕ್ತರು ಆಗಮಿಸುತ್ತಿದ್ದು ದೇವಸ್ಥಾನದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಿ.ಸದಾಶಿವ ಶೆಟ್ಟಿ, ವ್ಯವಸ್ಥಾಪಕ ರಘುರಾಮ ಶೆಟ್ಟಿ, ಕೊಲ್ಲೂರು ದೇವಸ್ಥಾನದ ಧರ್ಮದರ್ಶಿ ವಂಡಬಳ್ಳಿ ಜಯರಾಮ್‌ ಶೆಟ್ಟಿ, ಹೈದರಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಮಧ್ಯಾಹ್ನದ ಮಹಾಪೂಜೆಯಲ್ಲಿ ಪಾಲ್ಘೊಂಡರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.