ಕರಾವಳಿ

ಹತಾಷೆಯಿಂದ ಮುಖ್ಯಮಂತ್ರಿಗಳು ಬೇಕಾಬಿಟ್ಟಿ ಹೇಳಿಕೆ ಕೊಡುತ್ತಿದ್ದಾರೆ: ಬಿ.ಎಸ್. ಯಡಿಯೂರಪ್ಪ (Video)

Pinterest LinkedIn Tumblr

ಕುಂದಾಪುರ: ಕುಮಾರಸ್ವಾಮಿಯವರ ಭ್ರಷ್ಟಾಚಾರ ಸರಕಾರದಿಂದ ಜನರು ಬೇಸತ್ತಿದ್ದಾರೆ. ಸರಕಾರವು ಅಧಿಕಾರಿಗಳ ವರ್ಗಾವಣೆಯಲ್ಲಿಯೇ ಕಾಲಕಳೆಯುತ್ತಿದೆ. ಐಟಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಹಣ ವಶಕ್ಕೆ ಪಡೆದಿದ್ದು ಇದರಿಂದ ಸಿಎಂ ವಿಚಲಿತರಾಗಿದ್ದಾರೆಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯ್ತೂರಪ್ಪ ರಾಜ್ಯ ಸರಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೈಂದೂರಿನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಐಟಿ ದಾಳಿ ಎಲ್ಲರ ಮೇಲೆ ನಡೆಯುತ್ತದೆ. ಈ ದಾಳಿ ನಡೆಯುವ ಬಗ್ಗೆ ತಿಳಿದಿದೆ ಎಂದು ಹಣವನ್ನು ಬೇರೆ ಕಡೆ ಸಾಗಿಸಿದ್ದಾರೆ ಎಂದು ಆರೋಪಿಸಿದರು. ಸುಮಲತಾ ಅವರು ಮಂಡ್ಯದಲ್ಲಿ ಗೆಲ್ಲಲಿದ್ದು ಅವರು ಪಕ್ಷಕ್ಕೆ ಬರುವ ಬಗ್ಗೆ ನಾವಿನ್ನೂ ಆಹ್ವಾನ ನೀಡಿಲ್ಲ, ಬದಲಾಗಿ ನಮ್ಮ ಬೆಂಬಲ ಅವರಿಗೆ ನೀಡಿದ್ದೇವೆ.

ಇನ್ನು ಪುಲ್ವಾಮಾ ದಾಳಿ ಬಗ್ಗೆ ಎರಡು ವರ್ಷ ಮೊದಲೇ ತಿಳಿದಿದೆ ಎಂದು ಹತಾಷರಾಗಿ ಬೇಜವಬ್ದಾರಿ ಹೇಳಿಕೆ ನೀಡಿದ್ದು ಇದು ಮುಖ್ಯಮಂತ್ರಿಗಳ ಸ್ಥಾನಕ್ಕೆ ತಕ್ಕುದಲ್ಲ. ಇದು ನಾಚಿಕೆಗೇಡಿನ ಹೇಳಿಕೆಯಾಗಿದ್ದು ಅವರು ಭವಿಷ್ಯ ಹೇಳ್ತಿದ್ದಾರಾ? ಒಂದೊಮ್ಮೆ ದಾಳಿ ಬಗ್ಗೆ ತಿಳಿದಿದ್ದರೆ ಕೇಂದ್ರ ಸರಕಾರಕ್ಕೋ ಅಥವಾ ಸಂಬಂದಪಟ್ಟ ಉನ್ನತ ಅಧಿಕಾರಿಗಳಿಗೆ ತಿಳಿಸಬಹುದಿತ್ತು. ಕಾಂಗ್ರೆಸ್ ಜೆಡಿಎಸ್ ಕಚ್ಚಾಟವು ಚುನಾವಣೆ ಫಲಿತಾಂಶದ ಬಳಿಕ ಜನರಿಗೆ ತಿಳಿಯಲಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಭ್ರಷ್ಟಾಚಾರ ಮುಕ್ತ ಸರಕಾರ, ದೇಶದ ಶ್ರೀ ಸಾಮಾನ್ಯರಿಗೆ ಅಭಿವ್ರದ್ಧಿ, ದೇಶದ ಗಡಿಗಳ ರಕ್ಷಣೆ, ವಿದೇಶದಲ್ಲಿ ಭಾರಕ್ಕೆ ಗೌರುವ ಸಿಗುವ ರೀತಿ ಮಾಡುವ ಒಟ್ಟು ನಾಲ್ಕು ಅಂಶಗಳ ಭರವಸೆ ನೀಡಿದ್ದು ಇದು ಯಶಸ್ವಿಯಾಗಿದೆ. ದೇಶ ಇಂದು ಆರ್ಥಿಕ ಸದ್ರಢವಾಗಿದ್ದು ಬೆಳೆಯುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಐದು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಸರಕಾರ ನೀಡಿದ್ದಾರೆ. ಪುಲ್ವಾಮಾ ಘಟನೆ ಬಳಿಕ ಪ್ರಪಂಚದ ಎಲ್ಲಾ ದೇಶಗಳು ಪಾಕಿಸ್ಥಾನದ ನೀತಿ ಖಂಡಿಸಿ ನಮ್ಮ ದೇಶವನ್ನು ಬೆಂಬಲಿಸಿದೆ. ವಿವಿಧ ಸರ್ವೇಗಳನ್ನು ಗಮನಿಸಿದರೆ ದೇಶದಲ್ಲಿ ಕನಿಷ್ಟ ಮುನ್ನೂರು ಹಾಗೂ ಕರ್ನಾಟಕದಲ್ಲಿ ಕನಿಷ್ಟ ೨೨ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಬಿಜೆಪಿ ಮುಖಂಡರಾದ ಯಶಪಾಲ್ ಸುವರ್ಣ, ಉದಯಕುಮಾರ್ ಶೆಟ್ಟಿ, ಕಿರಣ್ ಕುಮಾರ್, ರವಿ ಅಮೀನ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ದತ್ತಾತ್ರೇಯ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.