ಕರಾವಳಿ

ದಸಂಸ ಕೋಟ ಹೋಬಳಿ ಶಾಖೆ ವತಿಯಿಂದ 25 ವರ್ಷದ ಉಚಿತ ನೋಟ್ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ‘ಅಕ್ಷರದಕ್ಕರೆ-2024

Pinterest LinkedIn Tumblr

ಕುಂದಾಪುರ: ಕರಾವಳಿ ಜಿಲ್ಲೆಗಳು ಶಿಕ್ಷಣದಲ್ಲಿ ಬಹಳಷ್ಟು ಸಾಧನೆ ಮಾಡಿದ್ದರೂ ಕೂಡ ವೈಚಾರಿಕತೆ, ವೈಜ್ಞಾನಿಕವಾಗಿ ಹಿಂದುಳಿದಿದೆ. ಕೋಮುವಾದಿಗಳ ವಿಜೃಂಭಣೆ ಕಂಡುಬರುತ್ತಿದ್ದು ಸಂವಿಧಾನ ವಿರೋಧಿ ಶಕ್ತಿಗಳು ಬೆಳೆಯುತ್ತಿದೆ. ಸಂವಿಧಾನ ಉಳಿದರೆ ಮಾತ್ರ‌ ನಾವು ಉಳಿಯುತ್ತೇವೆ. ಸಂವಿಧಾನದ ಆಶಯಗಳು ಉಳಿಸಿಕೊಳ್ಳಲು ನಾವು ಕಠಿಬದ್ದರಾಗಾಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕೋಟ ಹೋಬಳಿ ಶಾಖೆ ವತಿಯಿಂದ 25 ವರ್ಷದಿಂದ ನಡೆಯುತ್ತಿರುವ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ‘ಅಕ್ಷರದಕ್ಕರೆ-2024’ (ಎದೆಗೆ ಬೀಳಲಿ…ಅಕ್ಷರ) ಕಾರ್ಯಕ್ರಮವನ್ನು ಕೋಟ ಸಿ.ಎ ಬ್ಯಾಂಕ್ ಪ್ರಧಾನ ಕಚೇರಿಯ ಬಿ.ಸಿ ಹೊಳ್ಳ ಸಹಕಾರ ಸಭಾಭವನದಲ್ಲಿ ರವಿವಾರ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಖಾಸಗಿಕರಣವಾಗುತ್ತಿದ್ದು ಉಳ್ಳವರ ಮತ್ತು ಇಲ್ಲದವರ ಶಿಕ್ಷಣ ಎಂಬಂತೆ ವರ್ಗೀಕರಿಸುತ್ತಿರುವುದು ದುರಂತ ಎಂದ ಅವರು ಸಮಾನ ಶಿಕ್ಷಣ ವ್ಯವಸ್ಥೆ ಜಾರಿಯಾದರೆ ಮಾತ್ರ ಅಂತರ ಕಮ್ಮಿಯಾಗಿ ಶ್ರೀಮಂತ-ಬಡವ ಎಂಬ ಅಸಮಾನತೆ ಹೋಗಲಾಡಿಸಬಹುದು. ಸರಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಬೇಡ. ಚಾರಿತ್ರ್ಯಿಕವಾಗಿಯೂ ಕೂಡ ಸರಕಾರಿ ಶಾಲೆಗಳಲ್ಲಿ ಓದಿದವರ ಸಾಧನೆ ಅಪಾರ. ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೂಲಸೌಕರ್ಯ ಒದಗಿಸಿ ಉತ್ತೇಜನ ನೀಡುವುದು ಆಳುವ ಸರಕಾರಗಳ ಜವಬ್ದಾರಿ. ಒಂದು ಕನ್ನಡ ಶಾಲೆ ಮುಚ್ಚಿದರೆ 10 ಹಳ್ಳಿಗಳ ಮಕ್ಕಳು ಜೀತಗಾರರಾಗುತ್ತಾರೆಂಬುದನ್ನು ಮನಗಾಣಬೇಕು. ಸರಕಾರಿ ಶಾಲೆಯಲ್ಲಿ ಇಂಗ್ಲೀಷ್ ಬೋಧನೆಗೆ ಒತ್ತಾಯಿಸಿ ಶಾಲೆ ಉಳಿವಿನಲ್ಲಿ ದಲಿತ ಚಳುವಳಿ ಮಹತ್ತರ ಪಾತ್ರವಹಿಸಿತ್ತು ಎಂದರು.

ಮಣೂರು-ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಅವರು ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿ, ಮಕ್ಕಳು ಹೆಚ್ಚು ಶಿಕ್ಷಣದಲ್ಲಿ ತೊಡಗಿಸಿಕೊಂಡಾಗ ಜನಾಂಗ ಮುಂದೆ ಬರಲು ಸಾಧ್ಯವಿದೆ. ಡಾ. ಬಿ.ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಶಿಕ್ಷಣವೊಂದೇ ಧ್ಯೇಯ ವಾಕ್ಯ ಎಂಬುದನ್ನು ಮನಗಾಣಬೇಕು. ಹಿಂದುಳಿದವರು ಸದೃಢರಾಗಲು ವಿದ್ಯೆ ಎಂಬ ಪ್ರಬಲ ಅಸ್ತ್ರದಿಂದ ಸಾಧ್ಯವಿದೆ. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕವಾಗಿ ತಮ್ಮ ಹಕ್ಕನ್ನು ಪಡೆಯಬೇಕು ಎಂದ ಅವರು ಬಾಲ್ಯದಿಂದಲೂ ದಲಿತರೊಂದಿಗಿದ್ದ ಒಡನಾಟವನ್ನು ಮೆಲುಕು ಹಾಕಿದರು.

ಕರ್ನಾಟಕ ರಾಜ್ಯ ದಸಂಸ ಕೋಟ ಹೋಬಳಿ ಶಾಖೆ ಸಂಚಾಲಕ ನಾಗರಾಜ ಪಡುಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ಡಾ. ಕೆ. ಕೃಷ್ಣ ಕಾಂಚನ್, ದಸಂಸ ಮಹಿಳಾ ಘಟಕದ ರಾಜ್ಯ ಸಂಘಟನಾ ಸಂಚಾಲಕಿ ಉಷಾರಾಣಿ, ಕ.ರಾ.ದಸಂಸ ಉಡುಪಿ ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್, ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ ಕುಮಾರ್, ರಾಜ್ಯ ಸಮಿತಿ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ವಾಸುದೇವ ಮುದೂರು, ಎನ್.ಎ ನೇಜಾರು, ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ. ರಾಜು ಬೆಟ್ಟಿನಮನೆ, ಬೈಂದೂರು ತಾ. ಸಂಚಾಲಕ ನಾಗರಾಜ ಉಪ್ಪುಂದ, ಬ್ರಹ್ಮಾವರ ತಾ. ಸಂಚಾಲಕ ಶ್ರೀನಿವಾಸ ವಡ್ಡರ್ಸೆ ಮೊದಲಾದವರಿದ್ದರು.

ಜಿಲ್ಲಾ ಸಂಘಟನಾ ಸಂಚಾಲಕರಾದ ಟಿ. ಮಂಜುನಾಥ ಗಿಳಿಯಾರು ಪ್ರಸ್ತಾವನೆಗೈದು, ಶ್ಯಾಮಸುಂದರ್ ತೆಕ್ಕಟ್ಟೆ ಸ್ವಾಗತಿಸಿದರು. ರವಿ ಬನ್ನಾಡಿ, ಮಂಜುನಾಥ ಬಾಳ್ಕುದ್ರು ಹೋರಾಟದ ಗೀತೆ ಹಾಡಿದರು. ಉಪನ್ಯಾಸಕರಾದ ಮಂಜುನಾಥ ಕೆ.ಎಸ್, ನಾಗರಾಜ ಗುಳ್ಳಾಡಿ, ಅಧ್ಯಾಪಕ ಸಂತೋಷ ಕುಮಾರ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಕೋಟ ವಂದಿಸಿದರು.

ಸನ್ಮಾನ-ಪ್ರೋತ್ಸಾಹ: ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ 10 ಮಂದಿ, ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ನಾಲ್ಕು ಮಂದಿಯನ್ನು ಗೌರವಿಸಲಾಯಿತು. ದಸಂಸ ಮುಖಂಡ ಮಾವಳ್ಳಿ ಶಂಕರ್, ಉದ್ಯಮಿ ಆನಂದ್ ಸಿ. ಕುಂದರ್,
ಸಿಎ ಬ್ಯಾಂಕ್ ಅಧ್ಯಕ್ಷ ಡಾ. ಕೆ. ಕೃಷ್ಣ ಕಾಂಚನ್, ಯೋಗಪಟು ನಿರೀಕ್ಷಾ ದಿನಕರ್ ಶೆಟ್ಟಿ , ಸಮುದಾಯದ ‌ಸಾಧಕರಾದ ನೀಲಾವರ ಮೇಳದ ಪ್ರಧಾನ ಭಾಗವತ ನವೀನ್ ಕೋಟ, ಬಾಲ ಪ್ರತಿಭೆ ಲಿಖಿತಾ ಅವರನ್ನು ಸನ್ಮಾನಿಸಲಾಯಿತು.

ದೇವಸ್ಥಾನದ ಘಂಟೆಗಿಂತ ಹೆಚ್ಚಾಗಿ ಶಾಲೆಗಳ ಘಂಟೆಗಳು‌ ಮೊಳಗಿದರೆ ವೈಚಾರಿಕತೆಯ ಜಾಗೃತಿ ಮೂಡುತ್ತದೆ. ಮಕ್ಕಳಿಗೆ ಗುಡಿ-ಗೋಪುರಗಳನ್ನು ಸುತ್ತಿಸುವುದನ್ನು ಪೋಷಕರು ಬಿಡಬೇಕು. ಮಹಾನ್ ವ್ಯಕ್ತಿಗಳ ಚಿಂತನೆ ಅಳವಡಿಸಿಕೊಳ್ಳುವಲ್ಲಿ ಮಕ್ಕಳಿಗೆ ಸ್ಪೂರ್ತಿ ತುಂಬಬೇಕು.ದಲಿತ ಸಮಾಜದಲ್ಲಿ ಶಿಕ್ಷಣ ಓದಬಾರದು, ಸಂಸ್ಕೃತ ಲಓದಬಾರದು-ನೋಡಬಾರದೆಂದು ಮನುಧರ್ಮ ಶಾಸ್ತ್ರದಲ್ಲಿ ಬರೆದಿದ್ದು ಸಾವಿರಾರು ವರ್ಷಗಳ ಕಾಲ ಈ ದೇಶದ ಬಹು ದೊಡ್ಡ ಸಮುದಾಯವನ್ನು ಶಿಕ್ಷಣ ವಂಚಿತರಾಗಿ ಮಾಡಲಾಗಿತ್ತು. ನಂತರ ವೈಚಾರಿಕ ಕ್ರಾಂತಿ ಮಾಡಿದವರಲ್ಲಿ ಬುದ್ಧ, ಚಕ್ರವರ್ತಿ‌ ಅಶೋಕ, ಮಹಾತ್ಮ ಜ್ಯೋತಿ ಬಾಪುಲೆ, ಸಾವಿತ್ರಿ ಬಾಯಿ ಪುಲೆ, ಕುದ್ಮುಲ್ ರಂಗರಾವ್, ಪೆರಿಯಾರ್, ಅಂಬೇಡ್ಕರ್ ಪ್ರಮುಖರು. ಇವರುಗಳ ವ್ಯಕ್ತಿತ್ವ ನಮಗೆ ಮಾದರಿಯಾಗಬೇಕು. ಮಕ್ಕಳು ಉನ್ನತ ಹಾಗೂ ಉದತ್ತವಾದ ಕನಸು ಕಟ್ಟಿಕೊಂಡು ಬಾಬಾ ಸಾಹೇಬರ ಕುಡಿಗಳು ಶಕ್ತಿವಂತರೆಂದು ಸಾಭೀತು ಮಾಡಬೇಕು. ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುತ್ತಿರುವ ಕೋಟ ಹೋಬಳಿಯ ಚಳುವಳಿ ದೇಶಕ್ಕೆ ಮಾದರಿ.
-ಮಾವಳ್ಳಿ ಶಂಕರ್ (ಕರ್ನಾಟಕ ದಸಂಸ ರಾಜ್ಯ ಸಂಚಾಲಕರು)

Comments are closed.