ಕುಂದಾಪುರ: 2023 ಜೂನ್ 10 ರಂದು ಕುಂದಾಪುರದ ಖಾಸಗಿ ಲಾಡ್ಜ್ ಒಂದರಲ್ಲಿ ರಾತ್ರಿ ಚಿನ್ನದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಓರ್ವನಿಂದ ಸುಮಾರು ಇಪ್ಪತ್ತೆರಡೂವರೆ ಲಕ್ಷ ಮೌಲ್ಯದ ಚಿನ್ನಾಭರಣ ಕಳುವುಗೈದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಅಂದಾಜು 10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕುಂದಾಪುರ ಪೊಲೀಸರು ಮುಂಬೈನಲ್ಲಿ ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನದ ಪಾಲಿ ಜಿಲ್ಲೆಯ ಖೋರ್ ಗ್ರಾಮದ ರಾಮ್ ರಾಯಲ್ ಯಾನೆ ಬಾಳು ರಾಮ್(21) ಹಾಗೂ ಸೇವಾರಿ ಗ್ರಾಮ ಬರ್ಲಾಬೆರಾ ಗ್ರಾಮದ ಪ್ರವೀಣ್ ಕುಮಾರ್ (25) ಬಂಧಿತರು.
ಹಾಜಿ ಗೋಲ್ಡ್ ಎಂಡ್ ಡೈಮೆಂಡ್ ಎಂಬ ಜ್ಯುವೆಲ್ಲರಿಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಓರ್ವರು ಜೂನ್ 10ರಂದು ವ್ಯಾಪಾರಕ್ಕೆಂದು ಬಂದಿದ್ದು ಉಪ್ಪುಂದಕ್ಕೆ ತೆರಳಿದ್ದರು. ಅಲ್ಲಿಂದ ಸಂಜೆ ವಾಪಸಾಗಿ ರಾತ್ರಿಬಕುಂದಾಪುರದ ಖಾಸಗಿ ಹೊಟೇಲೊಂದರಲ್ಲಿ ಸ್ನೇಹಿತ ರಾಜಸ್ಥಾನ ಮೂಲದ ರಾಮ್ ಎಂಬಾತನ ಜತೆ 421 ಗ್ರಾಂ. ತೂಕದ ಚಿನ್ನಾಭರಣವನ್ನು ಮಂಚದ ಕೆಳಗಿಟ್ಟು ಮಲಗಿದ್ದರು. ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಎದ್ದು ನೋಡಿದಾಗ ರಾಮ್ ನಾಪತ್ತೆಯಾಗಿದ್ದು, ಚಿನ್ನಾಭರಣದ ಬ್ಯಾಗ್ ಕೂಡ ಇರಲಿಲ್ಲ. ಹೊರಗಿನಿಂದ ಬಾಗಿಲು ಹಾಕಲಾಗಿತ್ತು.
ಚಿನ್ನದ ಸಾನಿಯಾ ಬಾಲಿ 43 ಜತೆ (52 ಗ್ರಾಂ.), ಚಿನ್ನದ ಮೂಗುತಿ 153 ಫೀಸ್ (61 ಗ್ರಾಂ.), ಚಿನ್ನದ ಜೆ ಬಾಲಿ 44 ಫೀಸ್ (61 ಗ್ರಾಂ.), ಚಿನ್ನದ ಕಿವಿಯೋಲೆ-158 ಜತೆ (150 ಗ್ರಾಂ.), ಕಿವಿಯ ಚಿನ್ನದ ಟಾಪ್ಸ್ 60 ಜತೆ (81 ಗ್ರಾಂ.), 14 ಗ್ರಾಂ ಚಿನ್ನದ ಗಟ್ಟಿ ಸಹಿತ ಒಟ್ಟು 420 ಗ್ರಾಂ. ಚಿನ್ನಾಭರಣ ಕಳವಾಗಿತ್ತು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ ನಿರ್ದೇಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಯು.ಬಿ.ನಂದಕುಮಾರ್ ಮಾರ್ಗದರ್ಶನದಲ್ಲಿ ಎಸ್ಐಗಳಾದ ವಿನಯ ಎಂ. ಕೊರ್ಲಹಳ್ಳಿ, ಪ್ರಸಾದ ಕುಮಾರ್ ಕೆ., ಸಿಬಂದಿಗಳಾದ ಸಂತೋಷ ಕುಮಾರ್, ಶ್ರೀಧರ್, ರಾಮ ಪೂಜಾರಿಯವರ ತಂಡ ನಿರಂತರ ಶ್ರಮಿಸಿದೆ. ತಾಂತ್ರಿಕ ಮಾಹಿತಿ ಮೂಲಕ ಆರೋಪಿಗಳು ಮುಂಬಯಿಯಲ್ಲಿರುವುದಾಗಿ ಪತ್ತೆ ಹಚ್ಚಿ, ಅವರಲ್ಲಿದ್ದ 10 ಲಕ್ಷ ರೂ. ಮೌಲ್ಯದ 175 ಗ್ರಾಂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
Comments are closed.