ಕರಾವಳಿ

ಗುಂಡು ಹಾರಿಸಿ ವ್ಯಕ್ತಿಯ ಕೊಲೆ; ಉಡುಪಿಯ ಬಾರ್ಕೂರು ಸಮೀಪದ ಹನೆಹಳ್ಳಿಯಲ್ಲಿ ಘಟನೆ; ಕಾರಣ ನಿಗೂಢ..!

Pinterest LinkedIn Tumblr

ಉಡುಪಿ: ವ್ಯಕ್ತಿಯೋರ್ವನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದ ಘಟನೆ ಬ್ರಹ್ಮಾವರ ಸಮೀಪದ ಬಾರ್ಕೂರಿನ ಹನೆಹಳ್ಳಿಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಕೃಷ್ಣ (36) ಕೊಲೆಯಾದವರು. ನಾಲ್ಕು ಸುತ್ತು ಗುಂಡು ಹಾರಿಸಿ ಕೊಲೆಗೈಯಲಾಗಿದೆ ಎನ್ನಲಾಗಿದು ಮೇಲ್ನೋಟಕ್ಕೆ ಪಿಸ್ತೂಲ್ ನಿಂದ ಶೂಟ್ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು ಫಾರೆನ್ಸಿಕ್ ವರದಿಯಿಂದ ಮಾಹಿತಿ ತಿಳಿಯಬೇಕಿದೆ.

ಕೃಷ್ಣ ಅವರು ಸೆಂಟ್ರಿಂಗ್ ಮೊದಲಾದ ಕೆಲಸ ಮಾಡುತ್ತಿದ್ದು ಎಂದಿನಂತೆ ಮಾ.2 ಶನಿವಾರ ರಾತ್ರಿ ಮನೆಗೆ ಬಂದು ಸುಮಾರು 9.30 ರ ಸುಮಾರಿಗೆ ಊಟ ಮಾಡುತ್ತಿರುವಾಗ ದುಷ್ಕರ್ಮಿಗಳು ಆಗಮಿಸಿ ಶೂಟೌಟ್ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಸ್ಥಳೀಯರಿಗೆ ರಾತ್ರಿ ಯಾವುದೋ ಶಬ್ದ ಕೇಳಿದ್ದು ಪಟಾಕಿ ಶಬ್ದ ಎಂದು ಸುಮ್ಮನಾಗಿದ್ದರು. ಮುಂಜಾನೆ ಘಟನೆ ಬೆಳಕಿಗೆ ಬಂದಿದೆ. ಕೃಷ್ಣ ವಿವಾಹಿತರಾಗಿದ್ದು ಮನೆಯಲ್ಲಿ ಒಬ್ಬರೇ ವಾಸವಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಬ್ರಹ್ಮಾವರ ಸಿಪಿಐ ಹಾಗೂ ಪೊಲೀಸರ ತಂಡ ಭೇಟಿ ನೀಡಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.

Comments are closed.