ಕರಾವಳಿ

ಮಲ್ಪೆಯ ಮೀನುಗಾರರ ಅಪಹರಣ ಪ್ರಕರಣ: ಭಟ್ಕಳದ ಏಳು ಮಂದಿಯನ್ನು ಬಂಧಿಸಿದ ಪೊಲೀಸರು

Pinterest LinkedIn Tumblr

ಉಡುಪಿ: ಮಲ್ಪೆ ಮೀನುಗಾರರನ್ನು ಭಟ್ಕಳದಲ್ಲಿ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಭಟ್ಕಳದ ಸುಬ್ರಹ್ಮಣ್ಯ ಖಾರ್ವಿ (34), ರಾಘವೇಂದ್ರ ಖಾರ್ವಿ (38), ಹರೀಶ್‌ ನಾರಾಯಣ ಖಾರ್ವಿ (40), ನಾಗೇಶ್‌ ನಾರಾಯಣ (42), ಗೋಪಾಲ್‌ ಮಾಧವ್‌(38), ಸಂತೋಷ್‌ ದೇವಯ್ಯ (43), ಲಕ್ಷಣ್‌ (50) ಬಂಧಿತರು.

ಫೆ. 26ರಂದು ಮಲ್ಪೆಯ ಚೇತನ್‌ ಸಾಲ್ಯಾನ್‌ ಅವರಿಗೆ ಸೇರಿದ ಕೃಷ್ಣ ನಂದನ ಆಳಸಮುದ್ರ ಬೋಟಿನಲ್ಲಿ ಈ ಘಟನೆ ನಡೆದಿತ್ತು. ಮೀನುಗಾರಿಕೆ ಮುಗಿಸಿ ವಾಪಸ್‌ ಬರುತ್ತಿರುವಾಗ ಆಳಸಮುದ್ರ ಬೋಟಿಗೆ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಈ ವೇಳೆ ಭಟ್ಕಳದ ಮೀನುಗಾರರ ತಂಡ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನು, ಡೀಸೆಲ್‌ ಸಹಿತ 7 ಮಂದಿ ಮೀನುಗಾರರನ್ನು25 ಜನರ ತಂಡ ಭಟ್ಕಳದ ಮಾವಿನ ಕುರ್ವೆ ಬಂದರಿನಲ್ಲಿ ಅಪಹರಿಸಿತ್ತು. ಅಪಹರಣಕಾರರು ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಳನ್ನು ಕಸಿದು ಮಾರಾಟ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Comments are closed.