ಕರಾವಳಿ

ಮಾಸ್ಕ್ ಧಾರಣೆ, ಅಂತರ ಪಾಲನೆ, ವಾಕ್ಸಿನೇಶನ್, ಟೆಸ್ಟಿಂಗ್ ಬಗ್ಗೆ ಸಾರ್ವಜನಿಕರು ಗಮನಹರಿಸಬೇಕು: ಡಿಸಿ ಕೂರ್ಮಾರಾವ್ ಎಂ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆ ಎಲ್ಲಾ ನಾಗರಿಕರ ಜವಬ್ದಾರಿಯಾಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ, ಅಂತರ ಪಾಲನೆ ಮಾಡಬೇಕೆಂದು ಸೋಮವಾರ ಹೊಸ ನಿರ್ದೇಶನ ನೀಡಿದ್ದು ಎಲ್ಲರೂ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.

ಕುಂದಾಪುರ ತಾಲೂಕು ಪಂಚಾಯತ್ ಎದುರು‌ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೊಸ ನಿರ್ದೇಶನದ ಹಿನ್ನೆಲೆ ಸ್ಥಳೀಯಾಡಳಿತ ತಂಡದ ಜೊತೆಗೆ ಈ ಆದೇಶ ಪಾಲನೆಯಲ್ಲಿ ತೊಡಗಿಸಿಕೊಳ್ಳಲಿದೆ. ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಇದನ್ನು ಮೈಗೂಡಿಸಿಕೊಳ್ಳಬೇಕು. ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣ ಉತ್ತಮವಾಗಿ ನಡೆದಿದೆ. ಮೊದಲನೇ ಡೋಸ್ ಪಡೆದವರು ನೂರಕ್ಕೆ ನೂರು‌ಪ್ರತಿಶತವಾಗಿದ್ದು, 98.5% ಜನರು ಎರಡನೇ ಡೋಸ್ ಪಡೆದಿದ್ದಾರೆ. ಉಳಿದವರು ಕೂಡ ಲಸಿಕೆ‌ ಪಡೆಯಬೇಕು ಹಾಗೂ ಅರ್ಹರು ಮುನ್ನೆಚ್ಚರಿಕಾ ಡೋಸ್ ಕೂಡ ಪಡೆಯಲು ಪ್ರಚಾರ ಮಾಡಲಾಗುತ್ತದೆ. ಖಾಸಗಿ‌ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಜೊತೆ ವಿಡಿಯೋ ಕಾನ್ಪರೆನ್ಸ್ ನಡೆಸಿ ಲಸಿಕೆ ಲಭ್ಯತೆಯ ಬಗ್ಗೆ ಗಮನಹರಿಸಲು ಸೂಚನೆ ನೀಡಲಾಗಿದೆ. ಕೋವಿಡ್ ವಿರುದ್ಧ ಹೋರಾಟಕ್ಕೆ ವ್ಯಾಕ್ಸಿನ್ ಅತ್ಯಗತ್ಯವಾಗಿದೆ ಎಂದವರು ಹೇಳಿದರು.

ಇನ್ನು ಕೊರೋನಾ ಲಕ್ಷಣಗಳಿದ್ದವರು ಪರೀಕ್ಷೆ ಮಾಡಿಸಿಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು, ಐಸೋಲೇಶನ್ ಮೊದಲಾದ ಪ್ರಕ್ರಿಯೆಗಳಿಗೆ ಒಳಪಡಬೇಕು. ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆಯಬಹುದು ಹಾಗೂ ಹರಡುವಿಕೆ ತಡೆಯಬಹುದು ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ‌ ಅಪರ ಜಿಲ್ಲಾಧಿಕಾರಿ ವೀಣಾ, ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ತಹಶಿಲ್ದಾರ್ ಕಿರಣ್ ಗೌರಯ್ಯ ಮೊದಲಾದವರು ಇದ್ದರು.

Comments are closed.