ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಮಧುರ ಪಟ್ಟಣ ಬಸದಿ ಬಳಿ ಅನಧಿಕೃತವಾಗಿ ಮರಳುಗಾರಿಕೆ ನಡೆಯುತಿದ್ದ ಪ್ರದೇಶಕ್ಕೆ ಅನಿರೀಕ್ಷಿತ ದಾಳಿ ಮಾಡಿ ಮರಳು ಮತ್ತು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನಿರ್ದೇಶನದಂತೆ ಕುಂದಾಪುರದ ಸಹಾಯಕ ಕಮಿಷನರ್ ಕೆ. ರಾಜು ಹಾಗೂ ಇತರ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ಸುವರ್ಣ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಬಗ್ಗೆ ದೂರುಗಳಿದ್ದು ಖಚಿತ ಮಾಹಿತಿ ಬಂದ ಹಿನ್ನೆಲೆ ಡಿಸಿಯವರ ಸೂಚನೆಯಂತೆ ಈ ದಿಡೀರ್ ದಾಳಿ ನಡೆಸಲಾಗಿದೆ.
ಅಕ್ರಮ ಮರಳು ತೆಗೆಯಲು ಬಳಸುತ್ತಿದ್ದ ಪಂಪು ಅಳವಡಿಸಿದ ಡ್ರೆಜ್ಜಿಂಗ್ ಬೋಟ್, ಒಂದು ಟಿಪ್ಪರ್ ಹಾಗೂ 10 ಟನ್ ಮರಳು ವಶಕ್ಕೆ ಪಡೆಯಲಾಗಿದ್ದು ಅಜೆಕಾರು ಠಾಣೆ ಮತ್ತು ಗಣಿ, ಭೂ ವಿಜ್ಞಾನ ಇಲಾಖೆ ಅಧಿಕಾರಿಯವರಿಗೆ ಹಸ್ತಾಂತರಿಸಲಾಗಿದೆ.
ಅಜೆಕಾರು ಹೋಬಳಿ, ಕಾರ್ಕಳ ಹೋಬಳಿಯ ಕಂದಾಯ ನಿರೀಕ್ಷಕರು, ಮರ್ಣೆ ಗ್ರಾಮದ ಗ್ರಾಮ ಕರಣಿಕರು ಹಾಗೂ ಪಿಡಿಒ ಈ ಹಠಾತ್ ದಾಳಿ ವೇಳೆ ಇದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.