ಮಂಗಳೂರು ಎಪ್ರಿಲ್ 12: ಮಂಗಳೂರು ಮಂಗಳೂರು ಸೇರಿದಂತೆ ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಗಳಲ್ಲಿ ರಾತ್ರಿ ವೇಳೆಯಲ್ಲಿ ಹೆದ್ದಾರಿಯಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದ ಕುಖ್ಯಾತ ಟಿ.ಬಿ ಗ್ಯಾಂಗ್ನ 8 ಮಂದಿಯನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ
ಬಜಾಲ್ ಪಡ್ಪು ನಿವಾಸಿ ತೌಸೀರ್ ಯಾನೆ ಪತ್ತೊಂಜಿ ತೌಸಿರ್ (26), ಫರಂಗಿಪೇಟೆಯ ಮುಹಮ್ಮದ್ ಅರಾಫತ್ ಯಾನೆ ಅರಫಾ (29), ತುಂಬೆ ಹೌಸ್ನ ನಾಸಿರ್ ಹುಸೇನ್ (29), ಮುಹಮ್ಮದ್ ಸಫ್ವಾನ್ (25), ಮುಹಮ್ಮದ್ ಝೈನುದ್ದೀನ್ (24), ಉನೈಝ್ ಯಾನೆ ಮುಹಮ್ಮದ್ ಉನೈಝ್ (26), ಬಂಟ್ವಾಳ ಅಮ್ಮೆಮಾರ್ನ ತಸ್ಲಿಂ (27), ಪುದು ಗ್ರಾಮದ ಮುಹಮ್ಮದ್ ರಫೀಕ್ (37) ಬಂಧಿತ ಆರೋಪಿಗಳು.
ನಗರದಲ್ಲಿ ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಇಂದು ಮುಂಜಾನೆ ಕೊರೋನ ನೈಟ್ ಕರ್ಫ್ಯೂನಲ್ಲಿದ್ದಾಗ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಲಾಯಿಬೆಟ್ಟು ಗ್ರಾಮದ ಪರಾರಿ ಎಂಬಲ್ಲಿ ಆರೋಪಿಗಳು ಮಾರಕಾಯುಧಗಳೊಂದಿಗೆ ಇನ್ನೋವಾ ಕಾರಿನಲ್ಲಿ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಲು ಪ್ರಯತ್ನಿಸುತ್ತಿದ್ದರು ಈ ವೇಳೆ ಆರೋಪಿಗಳ ತಂಡವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳಿಂದ ಎರಡು ತಲವಾರು, ಎರಡು ಚೂರಿ, ಒಂದು ಡ್ರಾಗ್ ಚೂರಿ, 8 ಮೊಬೈಲ್ ಫೋನ್ಗಳು, 5 ಮಂಕಿ ಕ್ಯಾಪ್, 3 ಮೆಣಸಿನ ಹುಡಿ ಪ್ಯಾಕೆಟ್, ಇನ್ನೋವಾ ಕಾರು ಸೇರಿ ಒಟ್ಟು 10.89 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು ಪೊಲೀಸ್ ಅಯುಕ್ತರು ತಿಳಿಸಿದರು.
ಈ ಗ್ಯಾಂಗ್ ಅನ್ನು ತೌಸಿರ್ ಮತ್ತು ವಿದೇಶದಲ್ಲಿ ತಲೆಮರೆಸಿಕೊಂಡಿರುವ ರೌಡಿ ಬಾತಿಸ್ ಇಬ್ಬರು ಸೇರಿ ಕಟ್ಟಿಕೊಂಡಿದ್ದು, ಇದಕ್ಕೆ ಟಿ.ಬಿ (ತೌಶೀರ್ ಮತ್ತು ಬಾತಿಶ್) ಹೆಸರಿಸಿ ಸಹಚರರನ್ನು ಸೇರಿಸಿ, ಹಣಕಾಸಿನ ಸೆಟ್ಲ್ ಮೆಂಟ್ ವ್ಯವಹಾರ, ಹಣ ವಸೂಲಿ ಮಾಡುತ್ತಿದ್ದರು.
ವಿದೇಶದಲ್ಲಿರುವ ಬಾತಿಶ್ ಯಾನೆ ಬಾಶಿತ್ ಎಂಬಾತನ ಸೂಚನೆಯಂತೆ ಮಂಗಳೂರಿನ ಹಲವಾರು ವ್ಯಕ್ತಿಗಳ ಹಣಕಾಸಿನ ವ್ಯವಹಾರದ ಸೆಟ್ಲ್ಮೆಂಟನ್ನು ತೌಸಿರ್ ಯಾನೆ ತೌಸಿ ಹಾಗೂ ಇತರರು ಮಾಡುತ್ತಿದ್ದರು ಎಂದವರು ಹೇಳಿದರು.
ಹಣಕಾಸಿನ ಸೆಟ್ಲ್ಮೆಂಟ್ ವ್ಯವಹಾರ ನಡೆಸುತ್ತಿದ್ದ ಈ ಗ್ಯಾಂಗ್, ಬಿ.ಸಿ.ರೋಡ್ ಮೆಲ್ಕಾರ್ ಮೂಲಕ ಪ್ರಸ್ತುತ ಬೆಂಗಳೂರಿನಲ್ಲಿ ವ್ಯವಹಾರ ಮಾಡುತ್ತಿರುವ ಜಾವಿದ್ ಎಂಬಾತನಿಗೆ ತೌಸಿರ್ ಗ್ಯಾಂಗ್ನ ಸಫ್ವಾನ್ ಎಂಬಾತ 12 ಲಕ್ಷ ರೂ. ವ್ಯವಹಾರಕ್ಕಾಗಿ ನೀಡಿದ್ದು, ಇದನ್ನು ನೀಡದಿದ್ದಾಗ ಝಿಯಾದ್ನನ್ನು ಬೆಂಗಳೂರಿನಿಂದ ಕಿಡ್ನಾಪ್ ಮಾಡಿ ಕೊಲೆ ಮಾಡಲು ಗ್ಯಾಂಗ್ ಸಂಚು ರೂಪಿಸಿತ್ತು. ಅದರಂತೆ ಬೆಂಗಳೂರಿಗೆ ಹೋಗಿ ಅಲ್ಲಿ ಅವರಿಗೆ ಜಾವಿದ್ ಸಿಗದೇ ಇದ್ದಾಗ ವಾಪಾಸು ಮಂಗಳೂರಿಗೆ ಬಂದು ಹೆದ್ದಾರಿ ದರೋಡೆಗೆ ಹೊಂಚು ಹಾಕಿದ್ದರು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.
ಬಂಧಿತ ಆರೋಪಿಗಳ ವಿರುದ್ದ ವಿವಿಧ ಠಾಣೆಯಲ್ಲಿ ದರೋಡೆ, ಕೊಲೆ ಯತ್ನ ಮುಂತಾದ ಪ್ರಕರಣಗಳು ದಾಖಲಾಗಿವೆ. ಈ ಗ್ಯಾಂಗ್ನ ಇನ್ನಷ್ಟು ಆರೋಪಿಗಳು ಪತ್ತೆಯಾಗಬೇಕಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್, ಎಸಿಪಿ ರಂಜಿತ್ ಬಂಡಾರು ಉಪಸ್ಥಿತರಿದ್ದರು.
Comments are closed.