ಕರಾವಳಿ

ಡಿಸಿಪಿಯವರ ನೇತ್ರತ್ವದಲ್ಲಿ ಖಾಸಗಿ ಬಸ್‌ಗಳಿಗೆ “ಡಾ.ಬಿ.ಆರ್.ಅಂಬೇಡ್ಕರ್ ವೃತ್ತ” ಸ್ಟಿಕ್ಕರ್ ಅಳವಡಿಕೆ

Pinterest LinkedIn Tumblr

ಮಂಗಳೂರು: ಎಸ್‌ಸಿ, ಎಸ್‌ಟಿ ಸಮುದಾಯದ ಆಗ್ರಹದ ಮೇರೆಗೆ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಅವರ ನಿರ್ದೇಶನದಂತೆ ನಗರದ ಎಲ್ಲ ಖಾಸಗಿ ಬಸ್ ಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಸ್ಟಿಕ್ಕರ್ ಅಳವಡಿಕೆ ಮಾಡಲಾಗಿದೆ.

ಸಾಕಷ್ಟು ವರ್ಷಗಳ ಹಿಂದೆಯೇ ಜ್ಯೋತಿ ಸಿನಿಮಾ ಟಾಕೀಸ್ ಬಳಿಯ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತವೆಂದು ನಾಮಕರಣ ಮಾಡಲಾಗಿದ್ದರೂ, ಬಸ್ ಗಳಲ್ಲಿ ಈಗಲೂ ‘ಜ್ಯೋತಿ’ ಎಂಬ ಸ್ಟಿಕ್ಕರ್ ಅಳವಡಿಕೆ ಮಾಡಲಾಗಿತ್ತು.

ಇತ್ತೀಚೆಗೆ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಎಸ್ಸಿ- ಎಸ್ಟಿ ಕುಂದುಕೊರತೆಗಳ ಸಭೆಯಲ್ಲಿ ಈ ಬಗ್ಗೆ ದೂರು ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಡಿಸಿಪಿ ಹರಿರಾಂ ಶಂಕರ್, ಮುಂದಿನ ಕುಂದುಕೊರತೆ ಸಭೆಯೊಳಗೆ ಇದನ್ನು ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು.

ಇದೀಗ ಮಂಗಳೂರು ನಗರ ಸಂಚಾರ ಪೊಲೀಸ್, ಖಾಸಗಿ ಬಸ್ ಅಸೋಸಿಯೇಶನ್, ಆರ್‌ಟಿಒ ಮತ್ತು ಡಿಎಸ್‌ಎಸ್ ಸೇರಿದಂತೆ ವಿವಿಧ ಎಸ್‌ಸಿ- ಎಸ್‌ಟಿ ಸಂಘಟನೆಗಳ ಜಂಟಿ ಪ್ರಯತ್ನದಿಂದ ನಗರದ ಎಲ್ಲ ಬಸ್‌ಗಳಲ್ಲಿ ಅಂಬೇಡ್ಕರ್ ಸರ್ಕಲ್ ಸ್ಟಿಕ್ಕರ್‌ಗಳನ್ನು ಅಳವಡಿಕೆ ಮಾಡಲಾಗಿದೆ.

Comments are closed.