ಕರಾವಳಿ

ಸಿಸಿಬಿ ಪೊಲೀಸರಿಂದ ಆರೋಪಿಗಳ ಐಷಾರಾಮಿ ಕಾರು ಮಾರಾಟ ಆರೋಪ : ಸಿಐಡಿ ಪೊಲೀಸರಿಂದ ತನಿಖೆ

Pinterest LinkedIn Tumblr

ಮಂಗಳೂರು : ಆರೋಪಿಗಳ ಕಾರನ್ನು ಸಿಸಿಬಿ ಪೊಲೀಸರು ಮಾರಾಟ ಮಾಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಸಿಐಡಿ ತಂಡ ಪ್ರಕರಣದ ತನಿಖೆಗಾಗಿ ಮಂಗಳೂರಿಗೆ ಆಗಮಿಸಿ ಮಾಹಿತಿ ಸಂಗ್ರಹಿಸಿದೆ.

ಜನರಿಗೆ ಹಣ ದ್ವಿಗುಣ ಮಾಡಿಕೊಡುವ ಆಮಿಷವೊಡ್ಡಿ 30 ಕೋಟಿ ರೂಪಾಯಿ ವಂಚಿಸಿದ್ದ ಕನ್ಸ್‌ಸ್ಟ್ರಕ್ಷನ್ ಆಯಂಡ್ ಬಿಲ್ಡರ್ ಪ್ರೈ.ಲಿ. ಸಂಸ್ಥೆಯೊಂದರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು, ವಂಚನೆ ಆರೋಪದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಿಂದ ಜಾಗ್ವಾರ್, ಬಿಎಂಡಬ್ಲೂ, ಪೋರ್ಷ್ ಸೇರಿ ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಇದೀಗ ತನಿಖೆಯನ್ನು ಸಿಐಡಿ ಎಸ್‌ಪಿ ರೋಹಿಣಿ ಕಟ್ಟೋಚ್‌‌ ಅವರ ನೇತೃತ್ವದ ತಂಡ ಪ್ರಾರಂಭಿಸಿದ್ದು, ವರದಿಯನ್ನು ಸಿಐಡಿ ಡಿಜಿಗೆ ಸಲ್ಲಿಸಿದೆ. ಬಳಿಕ ಈ ವರದಿಯು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸಲ್ಲಿಕೆಯಾಗಲಿದೆ.

ತಮ್ಮ ವಶದಲ್ಲಿದ್ದ ಜಾಗ್ವಾರ್ ಕಾರನ್ನು ಮಂಗಳೂರಿನ ಸಿಸಿಬಿ ಅಧಿಕಾರಿಗಳು ಮಾರಾಟ ಮಾಡಿದ್ದಾರೆ. ಪೋರ್ಷ್ ಹಾಗೂ ಬಿಎಂಡಬ್ಲೂ ಕಾರನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪೊಲೀಸ್‌ ಅಧಿಕಾರಿ ಹಾಗೂ ಸಿಬಂದಿಗೆ ಈಗಾಗಲೆ ನೋಟಿಸ್‌ ನೀಡಲಾಗಿದೆ. ಪ್ರಾಥಮಿಕ ಹಂತದ ತನಿಖೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್‌ ಗಾಂವ್ಕರ್‌ ಅವರು ನಡೆಸಿದ್ದು, ಅದರ ವರದಿಯಲ್ಲಿ ಕಮಿಷನರ್‌ಗೆ ಸಲ್ಲಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಅಪರಾಧ ಪತ್ತೆದಳ ಹಿಂದಿನ ಎಸ್‌ಐ ಕಬ್ಬಳ್‌ರಾಜ್‌, ಸಿಸಿಬಿಯ ಆಶಿತ್‌, ರಾಜ ಹಾಗೂ ನಾರ್ಕೊಟಿಕ್‌ ಆಯಂಡ್‌ ಎಕನಾಮಿಕ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ರಾಮಕೃಷ್ಣ ಅವರ ಹೆಸರು ಹಾಗೂ ಬ್ರೋಕರ್‌ ದಿವ್ಯದರ್ಶನ್‌ ಹೆಸರನ್ನು ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಣ ದ್ವಿಗುಣಗೊಳಿಸಿ ವ್ಯವಹಾರ ನಡೆಸುತ್ತಿದ್ದ ಎಲಿಯಾ ಸಂಸ್ಥೆ ನಡೆಸಿದ ವಂಚನೆ ಪ್ರಕರಣವನ್ನು ಕೂಡ ಸಿಐಡಿಗೆ ವಹಿಸಲಾಗಿದೆ.

Comments are closed.