ಕರಾವಳಿ

ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿನಿವಾಸಕ್ಕೆ ಭೂಮಿ ಒದಗಿಸಲು ಯೋಗಿ ಆದಿತ್ಯನಾಥರಿಗೆ ಸಚಿವ ಕೋಟ ಮನವಿ

Pinterest LinkedIn Tumblr

ಮಂಗಳೂರು: ಕೇರಳದ ಕಾಸರಗೋಡಿಗೆ ಚುನಾವಣೆಯ ಪ್ರಚಾರ ನಿಮಿತ್ತ ಆಗಮಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಉತ್ತರಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ಮಂದಿರಕ್ಕೆ ಭವಿಷ್ಯದಲ್ಲಿ ಭೇಟಿ ನೀಡುವ ಕರ್ನಾಟಕದ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಸುಸಜ್ಜಿತ ಯಾತ್ರಿನಿವಾಸ ಒಂದನ್ನು ನಿರ್ಮಾಣ ಮಾಡಲು ಐದು ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಈ ಹಿಂದೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಲ್ಲಿಸಿದ ಮನವಿಯನ್ನು ಪುರಸ್ಕರಿಸುವಂತೆ ಮನವಿ ಮಾಡಿಕೊಂಡರು.

ಉತ್ತರ ಪ್ರದೇಶದ ಸರ್ಕಾರ ಕರ್ನಾಟಕದ ಯಾತ್ರೆ ನಿವಾಸಕ್ಕಾಗಿ ಶೀಘ್ರದಲ್ಲಿ ಭೂಮಿಯ ಮಂಜೂರು ಮಾಡಿದರೆ ಯಾತ್ರಿನಿವಾಸ ನಿರ್ಮಾಣಕ್ಕೆ ಅನುಕೂಲ ಆಗುವುದಾಗಿ ಸಚಿವ ಕೋಟ ಯೋಗಿ ಆದಿತ್ಯನಾಥರಲ್ಲಿ ತಿಳಿಸಿದರು. ಸಚಿವರ ಮನವಿಗೆ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥರು, ಕೂಡಲೇ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿ ಕರ್ನಾಟಕದಿಂದ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

Comments are closed.