ಕರಾವಳಿ

ಧೈರ್ಯಕ್ಕೆ ಮತ್ತೊಂದು ಹೆಸರು ಛತ್ರಪತಿ ಶಿವಾಜಿ -ಇವರ ದೇಶಪ್ರೇಮ ಯುವಜನತೆಯಲ್ಲಿ ಮೂಡಬೇಕು: ಜಿಲ್ಲಾಧಿಕಾರಿ

Pinterest LinkedIn Tumblr

ಮಂಗಳೂರು, ಫೆಬ್ರವರಿ 20 : ಧೈರ್ಯಕ್ಕೆ ಮತ್ತೊಂದು ಹೆಸರು ಛತ್ರಪತಿ ಶಿವಾಜಿಯವರದ್ದು, ಇವರು ಒಬ್ಬ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಇವರ ದೇಶಪ್ರೇಮ ಯುವಜನತೆಯಲ್ಲಿ ಮೂಡಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ. ವಿ ತಿಳಿಸಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಛತ್ರಪತಿ ಶಿವಾಜಿ ಮತ್ತು ಸವಿತಾ ಮಹರ್ಷಿ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶಪ್ರೇಮ, ತ್ಯಾಗ, ಬಲಿದಾನಕ್ಕೆ ಛತ್ರಪತಿ ಶಿವಾಜಿಯವರು ಹೆಸರುವಾಸಿಯಾಗಿದ್ದು, ಇಂದಿಗೂ ಭಾರತ ಅವರನ್ನು ಸ್ಮರಿಸಿಕೊಳ್ಳುತ್ತಿದೆ. ಭಾರತದ ಚರಿತ್ರೆಯಲ್ಲಿಯೇ ನಿಲ್ಲುವಂತಹ ಕಾರ್ಯಗಳನ್ನು ಮಾಡಿದ್ದಾರೆ. ಮೊಘಲರ ವಿರುದ್ಧ ಹೋರಾಡಿದ ಧೈರ್ಯಶಾಲಿಯಾಗಿದ್ದರು ಎಂದರು.

ಶಿವಾಜಿಯವರು ಅನೇಕ ಯುದ್ದಗಳನ್ನು ಮಾಡಿದ ಪ್ರಮುಖರಲ್ಲಿ ಒಬ್ಬರಾಗಿದ್ದರು ಅಲ್ಲದೇ ಅವರ ದೇಶಪ್ರೇಮ, ಸಮಾನತೆಯ ಮನೋಭಾವ, ಪರಕೀಯರ ಜೊತೆಗಿನ ಹೋರಾಟಗಳು ಇಂದಿನ ಯುವಜನರಿಗೆ ಸ್ಪೂರ್ತಿಯಾಗಬೇಕು ಹಾಗೂ ಸಮಾಜದಲ್ಲಿ ಅವರ ಬಗ್ಗೆ ಹೆಚ್ಚಿನ ಮಟ್ಟದಲ್ಲ್ಲಿ ತಿಳಿಸುವ ಕಾರ್ಯಗಳು ನಡೆಯಬೇಕು ಎಂದರು.

ಸವಿತಾ ಮಹರ್ಷಿಯವರು ಕೂಡ ಸಮಾಜದಲ್ಲಿ ಬೆಳೆದು ದಾರಿ ದೀಪವಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿಗಳನ್ನು ಆಚರಿಸುವ ಮೂಲಕ ಸರ್ಕಾರ ಇವರ ಆದರ್ಶಗಳ ಹಾದಿಯಲ್ಲಿ ನಡೆಯಲು ನಮಗೆ ಬೆಳಕು ತೋರಿಸಿದೆ. ಸವಿತಾ ಸಮಾಜದವರು ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ತಿಳಿಸಿದರು.

ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ಎ. ವಿ. ಸುರೇಶ್ ಮಾತನಾಡಿ, ಶಿವಾಜಿ ಮಹಾರಾಜರು ಅವರ ಆಡಳಿತದ ಅವಧಿಯಲ್ಲಿ ಹಿಂದುಗಳಿಗೆ ದೇವಾಲಯವನ್ನು ನಿರ್ಮಿಸಲು ಸಹಕಾರವನ್ನು ನೀಡುತ್ತಿದ್ದರು, ಅಷ್ಟೇ ಸಹಕಾರವನ್ನು ಮುಸ್ಲಿಂರಿಗೆ ಮಸೀದಿಯನ್ನು ನಿರ್ಮಿಸಲು ನೀಡುತ್ತಿದ್ದರು ಎಂದ ಅವರು, ಸಾಂಪ್ರದಾಯಿಕ ಹಿಂದೂ ಮೌಲ್ಯಗಳಿಗೆ ಹಾಗೂ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದರು ಎಂದರು.

ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ್ ಭಂಡಾರಿ ಮಾತನಾಡಿ, ಧಾರ್ಮಿಕವಾಗಿ ಸವಿತಾ ಮಹರ್ಷಿಯವರನ್ನು ಸೂರ್ಯನಿಗೆ ಹೋಲಿಸಲಾಗುತ್ತದೆ. ಶಿವನ ಬಲಗಣ್ಣಿನಿಂದ ಸವಿತಾ ಮಹರ್ಷಿ ಜನಿಸಿದವರು ಎಂದು ಪ್ರತೀತಿ ಇದೆ. ಅಪಾರ ಜ್ಞಾನಭಂಡಾರವನ್ನು ಹೊಂದಿದ ಸವಿತಾ ಮಹರ್ಷಿಗಳು ನಾಲ್ಕನೇ ವೇದವಾದ ಸಾಮವೇಧ ಕೃತಿಯನ್ನು ರಚಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಂ. ಜೆ. ರೂಪಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್. ಜೆ. ಆರ್ಯ ಯಾನೆ ಮರಾಠ ಸಮಾಜ ಸೇವಾ ಸಂಘದ ಅಧ್ಯಕ್ಷ ಯತೀಂದ್ರ ಬಹುಮಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.