ಮಂಗಳೂರು/ ಮೂಡುಬಿದಿರೆ, ಫೆಬ್ರವರಿ 12 : ತುಳುನಾಡಿನ ಸಮಸ್ತ ಬಿಲ್ಲವರು ಮಾತ್ರವಲ್ಲದೆ ವಿವಿಧ ಜಾತಿ ಮತಗಳ ಜನರು ಆರಾಧಿಸಿಕೊಂಡು ಬಂದಿರುವ ಕೋಟಿ ಚೆನ್ನಯ ಎಂಬ ವೀರ ಪುಣ್ಯಪುರುಷರ ಹಾಗು ಬಿಲ್ಲವ ಮುಖಂಡ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಅವರು ಗುರುವಾರ ಪುತ್ತೂರು ಪಡುಮಲೆಯಲ್ಲಿರುವ ಕೋಟಿ ಚೆನ್ನಯ ಜನ್ಮಸ್ಥಳಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ, ತಪ್ಪು ಕಾಣಿಕೆ ಹಾಕಿದ್ದಾರೆ.
ಪಡುಮಲೆಗೆ ತೆರಳಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿ, ಕೆಲವು ದಿನಗಳ ಹಿಂದೆ ನಾನು ಕೋಟಿ ಚೆನ್ನಯ ಹಾಗೂ ಬಿಲ್ಲವರ ಬಗ್ಗೆ ಮಾತನಾಡಿದ್ದು, ಆ ಸಮಾಜದ ಬಂಧುಗಳಿಗೆ ನೋವಾಗಿದೆ. ನಾನು ಆತ್ಮವಿಮರ್ಶೆ ಮಾಡಿಕೊಂಡಿದ್ದು, ನನ್ನಿಂದ ತಪ್ಪಾಗಿದೆ.
ಬಿಲ್ಲವ ಸಮಾಜದವರಲ್ಲಿ ನಾನು ಕ್ಷಮೆಯಾಚಿಸಿ, ನನ್ನಿಂದ ಆದ ತಪ್ಪಿಗೆ ಕೋಟಿ ಚೆನ್ನಯ, ದೇಯಿ ಬೈದತಿಗೆ ತಪ್ಪು ಕಾಣಿಕೆ ಹಾಕಿದ್ದೇನೆ. ಕಾರಣಿಕ ಪುರುಷರಾದ ಅವಳಿ ಪುರುಷರ ಅನುಗ್ರಹದಿಂದ ನಾವೆಲ್ಲರೂ ಸೌಹಾರ್ದತೆಯಿಂದ ಬದುಕುವಂತಾಗಲಿ ಎಂದು ತಿಳಿಸಿದ್ದಾರೆ.
ಗೆಜ್ಜೆಗಿರಿಯಲ್ಲಿ ತಪ್ಪು ಕಾಣಿಕೆ ಹಾಕುತ್ತೇನೆ ಎಂದು ಹೇಳಿ ಪಡುಮಲೆಯಲ್ಲಿ ತಪ್ಪು ಕಾಣಿಕೆ ಹಾಕಿದ ಅಧಿಕಾರಿ :
ಈ ಹಿಂದೆ ಸಮಸ್ತ ಬಿಲ್ಲವರ ಸಮಾಜದ ಬಗ್ಗೆ ತಾನಾಡಿದ ಮಾತಿನ ಬಗ್ಗೆ ಕ್ಷಮೆ ಯಾಚನೆ ಮಾಡುವಂತೆ ಒತ್ತಡ ಬಂದ ಹಿನ್ನೆಲೆಯಲ್ಲಿ ಮೊದಲಿಗೆ ಮೂಡಬಿದ್ರೆಯ ಗರಡಿಯಲ್ಲಿ ತಪ್ಪುಕಾಣಿಕೆ ಹಾಕಿದ ಅಧಿಕಾರಿ ಬಳಿಕ ಕಾರಣಿಕದ ಅವಳಿ ಪುರುಷರಾದ ಕೋಟಿ ಚೆನ್ನಯ ಅವರ ತಾಯಿ ಭೇಟಿ ನೀಡಿದ ಗೆಜ್ಜೆ ಗಿರಿಯಲ್ಲಿ ತಪ್ಪು ಕಾಣಿಕೆ ಹಾಕುವುದಾಗಿ ಹೇಳಿಕೆ ನೀಡಿದ್ದರು.
ಆದರೆ ಇಲ್ಲಿ ಕೂಡ ರಾಜಕೀಯ ಪ್ರವೇಶ ಮಾಡಿದ್ದು, ಕೊನೆ ಕ್ಷಣದಲ್ಲಿ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ನೇತ್ರತ್ವದಲ್ಲಿ ನವೀಕರಣಕ್ಕೆ ತಯಾರಾಗಿರುವ ಪಡುಮಲೆಯಲ್ಲಿರುವ ಕೋಟಿ ಚೆನ್ನಯ ಜನ್ಮಸ್ಥಳಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ, ತಪ್ಪು ಕಾಣಿಕೆ ಹಾಕಿದ್ದಾರೆ.
Comments are closed.