ಕರಾವಳಿ

ಕಡಿಮೆ ಹಣಕ್ಕೆ ಹೆಚ್ಚು ಮಾಂಸ ನೀಡಲಿಲ್ಲ ಎಂದು ಬೀಫ್ ಸ್ಟಾಲ್‌ಗಳಿಗೆ ಬೆಂಕಿ ಹಚ್ಚಿದ ಯುವಕ

Pinterest LinkedIn Tumblr

ಮಂಗಳೂರು, ಜನವರಿ.16: ಉಳ್ಳಾಲ ಸಮೀಪದ ತೊಕ್ಕೊಟ್ಟು ಮಾರ್ಕೇಟ್ ನ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಶನಿವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.

ತಾಯಿಯೊಂದಿಗೆ ತೊಕ್ಕೊಟ್ಟು ಒಳಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿರುವ ನಾಗರಾಜ (37) ಎಂಬಾತ ಬಂಧಿತ ಆರೋಪಿ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಆರೋಪಿ ನಾಗರಾಜ ತೊಕ್ಕೊಟ್ಟಿನ ಇದೇ ಬೀಫ್ ಸ್ಟಾಲ್‌ನಿಂದ ಹಲವು ಬಾರಿ ಮಾಂಸ ಖರೀದಿಸಿ ತನ್ನ ಸ್ನೇಹಿತನ ಮನೆಯಲ್ಲಿ ಅಡುಗೆ ಮಾಡಿ ಸೇವಿಸಿದ್ದ.

ಈ ಹಿಂದೆ ಮಾಂಸದಂಗಡಿ ಮಾಲಕರಲ್ಲಿ ನಿಗದಿತ ಬೆಲೆಗಿಂತ ಅಧಿಕ ಮಾಂಸ ನೀಡುವಂತೆ ಒತ್ತಾಯಿಸಿದ್ದನು. ಈ ವೇಳೆ ಹಣ ಕೊಟ್ಟಷ್ಟೇ ಮಾಂಸ ನೀಡುವುದು, ಹೆಚ್ಚುವರಿ ನೀಡಲಾಗದು ಎಂದು ಅಂಗಡಿಯಾತ ಹೇಳಿದ್ದಾನೆ. ಇದರಿಂದ ಕೋಪಗೊಂಡು ಆರೋಪಿ ಕಳೆದ ವಾರ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಸಿದರು.

ಆರೋಪಿಯು ಅದೇದಿನ ಸೀಮೆಎಣ್ಣೆ ಹಾಗೂ ಬೆಂಕಿ ಪೊಟ್ಟಣ ಖರೀದಿಸಿದ್ದನು. ಜ.9ರಂದು ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಮಾಂಸದಂಗಡಿ ಬಳಿ ತೆರಳಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಲು ವಿಶೇಷ ತಂಡ ರಚಿಸಿದ್ದರು.

ಮಾಂಸದಂಗಡಿ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾ ಫೂಟೇಜ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದ ಸಂದರ್ಭ ಓರ್ವ ವ್ಯಕ್ತಿ ರಾತ್ರಿ ಸಮಯದಲ್ಲಿ ಸಂಶಯಾಸ್ಪದವಾಗಿ ಪರಿಸರದಲ್ಲಿ ಸಂಚಾರಿಸಿರುವುದು ಕಂಡು ಬಂದಿದೆ.

ಆರೋಪಿಯೇ ಕೃತ್ಯ ನಡೆಸಿರುವುದು ಸಿಸಿಟಿವಿ ಫೂಟೇಜ್‌ನಲ್ಲಿ ಖಚಿತವಾಗಿದೆ. ಪೂರಕ ದಾಖಲೆಗಳ ಸಂಗ್ರಹದ ಬಳಿಕವೇ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಈತನ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಕೃತ್ಯ ನಡೆಸಿರುವುದನ್ನು ವಿಚಾರಣೆಯ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ. ತನಿಖೆ ಮುಂದುವರಿದಿದೆ ಎಂದು ಆಯುಕ್ತರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು.

Comments are closed.