ಕುಂದಾಪುರ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಬೈಂದೂರು ವೃತ್ತ ಕಚೇರಿ ವ್ಯಾಪ್ತಿಯಲ್ಲಿ ಗೋ ರಕ್ಷಣೆ ಮಾಡಿದ್ದು ಮತ್ತೊಂದು ಕಡೆ ಗೋ ಮಾಂಸ ಸಹಿತ ಆರೋಪಿಯನ್ನು ಬಂಧಿಸಲಾಗಿದೆ. ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಬೈಂದೂರು ಪಿಎಸ್ಐ ಸಂಗೀತಾ, ಗಂಗೊಳ್ಳಿ ಠಾಣೆ ಪಿಎಸ್ಐ ಭೀಮಾಶಂಕರ್, ಕೊಲ್ಲೂರು ಪಿಎಸ್ಐ ಮಹಾದೇವ ಬೋಸ್ಲೆ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಬೈಂದೂರು ಪ್ರಕರಣ…
ನಾವುಂದ ಕಡೆಯಿಂದ ಭಟ್ಕಳದತ್ತ ಇನ್ಸುಲೆಟರ್ ವಾಹನದಲ್ಲಿ ಜಾನುವಾರುಗಳ ಸಾಗಾಟವಾಗುತ್ತಿದೆಯೆಂಬ ಬಗ್ಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಬೈಂದೂರು ಪೊಲೀಸರಿಗೆ ಮಾಹಿತಿ ನೀಡಿದ್ದು ಅದರಂತೆ ಬೈಂದೂರು ಸಮೀಪದ ಶಿರೂರು ಟೋಲ್ ಗೇಟಿನಲ್ಲಿ ವಾಹನದ ಮಾಹಿತಿ ಕಲೆಹಾಕಿದ ಪೊಲೀಸರು ಇನ್ಸುಲೆಟರ್ ಬೆನ್ನತ್ತಿ ಭಟ್ಕಳದಲ್ಲಿ 14 ಜಾನುವಾರು ಸಹಿತ ವಾಹನ ವಶಕ್ಕೆ ಪಡೆದಿದ್ದಾರೆ. ಜಲೀಲ್ ಎಂಬಾತ ಈ ಅಕ್ರಮ ಗೋ ಸಾಗಾಟಕ್ಕೆ ಬೈಕ್ ಮೂಲಕ ಎಸ್ಕಾರ್ಟ್ ಮಾಡುತ್ತಿದ್ದ ಎನ್ನಲಾಗಿದೆ.
ಕೊಲ್ಲೂರು ಪ್ರಕರಣ…
ಕೊಲ್ಲೂರಿನಲ್ಲಿ 1 ಕೆ.ಜಿ ಗೋ ಮಾಂಸ ಸಹಿತ ಆರೋಪಿ ಶಾಜು ಎಂಬಾತನನ್ನು ಬಂಧಿಸಲಾಗಿದೆ. ಶಾಜು ತನ್ನ ಬೈಕಿನಲ್ಲಿ ಗೋ ಮಾಂಸ ಕೊಂಡೊಯ್ಯುವಾಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದು ಮಾಂಸ ಕಂಡ ಸ್ಥಳಿಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದು ಪ್ರಕರಣ ಬೆಳಕಿಗೆ ಬಂದಿದೆ. ಬೈಕ್ ಸಹಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಗಂಗೊಳ್ಳಿಯಲ್ಲಿ…
ಗಂಗೊಳ್ಳಿಯಲ್ಲಿ ವಧೆಗೆ ಕಟ್ಟಿಹಾಕಿದ್ದ 2 ಜಾನುವಾರು ರಕ್ಷಿಸಿದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.
Comments are closed.