ಮಂಗಳೂರು, ಡಿಸೆಂಬರ್.17 : ಬಂಟ್ವಾಳದ ಕಲ್ಮಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಾಗರಾಜ ಖಾರ್ವಿ ಕಂಚುಗೋಡು ಅವರು ನಾಳೆ (ಡಿ.18 ರಂದು) ಬೆಳಿಗ್ಗೆ 8ಕ್ಕೆ ಮಂಗಳೂರಿನ ತಣ್ಣೀರು ಬಾವಿ ಬಳಿ ಅರಬ್ಬಿಸಮುದ್ರದಲ್ಲಿ ಒಂದು ಕಿ.ಮೀ. ದೂರ ಪದ್ಮಾಸನ ಹಾಕಿ, ಕಾಲಿಗೆ ಸರಪಳಿ ಬಿಗಿದು ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಈಜಲಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಹಾಗೂ ಈಜು ಮತ್ತು ಯೋಗದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಇವರು ಅರಬ್ಬಿ ಸಮುದ್ರದಲ್ಲಿ ಒಂದು ಕಿ.ಮೀ. ದೂರವನ್ನು ಪದ್ಮಾಸನ ಹಾಕಿ, ಕಾಲಿಗೆ ಸರಪಳಿ ಬಿಗಿದು ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಈಜಲಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಹಾಗೂ ಈಜು ಮತ್ತು ಯೋಗದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸಮುದ್ರದ ಬಗೆಗಿನ ಭಯ ಹಾಗೂ ತಪ್ಪು ಕಲ್ಪನೆ ದೂರ ಮಾಡುವ ಸಲುವಾಗಿ ಈ ಒಂದು ಈಜು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ಕುಂದಾಪುರ ಕಂಚುಗೋಡು ಮೀನುಗಾರ ಕುಟುಂಬದಿಂದ ಬಂದ ನಾನು ಬಾಲ್ಯದಲ್ಲೇ ಸಮುದ್ರದಲ್ಲಿ ಈಜುತ್ತಿದ್ದೆನು. ಆದರೆ, ಈಜಿನ ವಿವಿಧ ಶೈಲಿಗಳನ್ನು ತರಬೇತುದಾರ ಬಿ. ಕೆ. ನಾಯ್ಕ್ ಕಲಿಸಿದರು. ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಮೂಲಕ ಯೋಗ ಕಲಿತುಕೊಂಡೆ. ಕಳೆದ ಜನವರಿಯಲ್ಲಿ ಗುಜರಾತ್ನ ವಡೋದರಾದಲ್ಲಿ ನಡೆದ ರಾಷ್ಟ್ರ ಮಟ್ಟದ ಈಜುಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ, ಒಂದು ಕಂಚಿನ ಪದಕ ಗೆದ್ದಿದ್ದೆ. ಇದೇ ರಾಷ್ಟ್ರೀಯ ದಾಖಲೆ ನಿರ್ಮಿಸಲು ಪ್ರೇರಣೆಯಾಯಿತು’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈಜು ಗುರು ಬಿ. ಕೆ. ನಾಯ್ಕ್, ತರಬೇತುದಾರರಾದ ಶಿವಾನಂದ ಗಟ್ಟಿ, ಲೋಕರಾಜ್, ಈಜುಪಟು ಅಶೋಕ್ ಉಪಸ್ಥಿತರಿದ್ದರು.