ಮುಸ್ಲಿಮ್ ಒಕ್ಕೂಟ ಅಧ್ಷಕ್ಷ ಕೆ. ಅಶ್ರಫ್
ಮಂಗಳೂರು, ಡಿಸೆಂಬರ್.17 : ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಹರಿತವಾದ ಅಯುಧದಿಂದ ಹಲ್ಲೆ ನಡೆಸಿರುವುದನ್ನು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಷಕ್ಷ ಕೆ. ಅಶ್ರಫ್ ತಿಳಿಸಿದ್ದಾರೆ.
ಬುಧವಾರದಂದು ಮಂಗಳೂರು ರಥಬೀದಿಯಲ್ಲಿ ಕರ್ತವ್ಯ ನಿರತರಾಗಿದ್ದ ಬಂದರ್ ಠಾಣೆಯ ಹೆಡ್ಕಾನ್ಸ್ಟೇಬಲ್ ಗಣೇಶ ಕಾಮತ್ ಅವರ ಮೇಲೆ ದುಷ್ಕರ್ಮಿಗಳು ಆಯುಧಗಳಿಂದ ದೈಹಿಕ ಹಲ್ಲೆ ನಡೆಸಿದ್ದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ದುಷ್ಕರ್ಮಿಗಳ ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ.
ಪೊಲೀಸರು ಸಮಾಜದ ರಕ್ಷಕರು, ಅವರ ಮೇಲೆ ಹಲ್ಲೆ ಗಂಭೀರ ಅಪರಾಧವಾಗುತ್ತದೆ. ಇಂತಹ ಕೃತ್ಯ ತಪ್ಪು. ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆದರೆ ಈ ಕೃತ್ಯವನ್ನು ಮಂಗಳೂರಿನ ಕಳೆದ ವರ್ಷದ ಎನ್ಆರ್ಸಿ ಗೋಲಿಬಾರ್ ಕ್ರಮಕ್ಕೆ ಪ್ರತೀಕಾರವೆಂದು ಬಿಂಬಿಸಿ ಸಮಾಜಕ್ಕೆ ತಪ್ಪು ಮಾಹಿತಿಯನ್ನು ರವಾನಿಸುವುದು ತಪ್ಪು. ಹಲ್ಲೆ ಕೃತ್ಯವನ್ನು ಸಮಗ್ರವಾಗಿ ತನಿಖೆ ನಡೆಸಿ ಹಿರಿಯ ಪೊಲೀಸರು ಈ ಬಗ್ಗೆ ಸಮಾಜಕ್ಕೆ ವಿವರಣೆ ನೀಡಬೇಕು ಎಂದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಅವರು ತಮ್ಮ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಘಟನೆ ವಿವರ :
ಬುಧವಾರ ಅಪರಾಹ್ನ ಹೆಡ್ಕಾನ್ಸ್ಟೇಬಲ್ ಗಣೇಶ ಕಾಮತ್ ಅವರು ಇಬ್ಬರು ಸಿಬ್ಬಂದಿ ಜೊತೆ ರಥಬೀದಿ ಸನೀಪದ ನ್ಯೂಚಿತ್ರ ಮುಂಭಾಗ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಬೈಕನ್ನು ಸ್ವಲ್ಪ ದೂರ ನಿಲ್ಲಿಸಿ ಬೈಕಿನಲ್ಲಿದ್ದ ಓರ್ವ ದುಷ್ಕರ್ಮಿ ಮುಖ್ಯ ಪೇದೆ ಗಣೇಶ ಕಾಮತ್ ರಿಗೆ ಹರಿತವಾದ ಅಯುಧದಿಂದ ಹಲ್ಲೆಗೈದು ಪರಾರಿಯಾಗಿದ್ದಾನೆ.
ಹೆಡ್ಕಾನ್ಸ್ಟೇಬಲ್ ಗಣೇಶ ಕಾಮತ್ ಅವರ ಕೈಗೆ ಬಲವಾದ ಏಟು ಬಿದ್ದಿದ್ದು, ಕೂಡಲೇ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗಣೇಶ ಕಾಮಾತ್ ನೀಡಿದ ದೂರಿನಂತೆ ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ವ್ಯಾಪಕ ಬೀಸಿದ್ದಾರೆ.
Comments are closed.