ಮಂಗಳೂರು / ಮುಲ್ಕಿ, ಡಿಸೆಂಬರ್.15: ಪತಿ, ಪತ್ನಿ ಹಾಗೂ ಎಂಟು ವರ್ಷದ ಬಾಲಕ ಸಹಿತಾ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿರುವ ಪ್ರಕರಣದ ಕಾರಣ ಇನ್ನು ನಿಗುಢವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಬೇರೆ ಬೇರೆ ಮೂಲಗಳಿಂದ ತನಿಖೆ ಮುಂದುವರಿಸಿದ್ದಾರೆ.
ವಿವಿಧ ಮಜಲುಗಳಲ್ಲಿ ತನಿಖೆ ನಡೆಸುವ ಮೂಲಕ ಕಗ್ಗಂಟಾಗಿರುವ ಈ ಪ್ರಕರಣದ ನಿಗೂಢತೆ ಭೇದಿಸಲು ಪೊಲೀಸರ ಹರಸಾಹಸಪಡುತ್ತಿದ್ದಾರೆ.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಕಲ್ಲಾಪು ಬಳಿ ಒಂದೇ ಕುಟುಂಬದ ಮೂವರ ಮೃತದೇಹಗಳು ಸೋಮವಾರ ಮನೆಯೊಳಗೆ ಪತ್ತೆಯಾಗಿದೆ. ವಿನೋದ್ ಸಾಲ್ಯಾನ್ (38), ಪತ್ನಿ ರಚನಾ (38), ಪುತ್ರ ಸಾಧ್ಯ (8) ಮೃತಪಟ್ಟವರು.
ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶನಿವಾರ ರಾತ್ರಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಸೋಮವಾರ ಮಧ್ಯಾಹ್ನ ಕೃತ್ಯ ಬೆಳಕಿಗೆ ಬಂದಿದೆ.
ಮುಂಬೈನ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತಿದ್ದ ವಿನೋದ್, ಪತ್ನಿ ಹಾಗೂ ಮಗುವಿನೊಂದಿಗೆ ಒಂದು ವರ್ಷದ ಹಿಂದೆ ಊರಿಗೆ ಹಿಂದಿರುಗಿದ್ದರು. ಬಳಿಕ ಬೆಳ್ಳಾಯೂರು ಕಲ್ಲಾಪು ಬಳಿಯ ಇಂದಿರಾ ಎಂಬುವರ ಮನೆಯಲ್ಲಿ ಬಾಡಿಗೆಗೆ ನೆಲೆಸಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು ಎಲಾಗುತ್ತಿದೆ.
ಎರಡು ದಿನಗಳಿಂದ ವಿನೋದ್ ಸಾಲ್ಯಾನ್ ಹಾಗೂ ಪತ್ನಿ, ಮಗ ಮನೆಯಿಂದ ಹೊರಗೆ ಬರದೇ ಇದ್ದುದನ್ನು ಕಂಡು ಸಂಶಯಗೊಂಡು ಸ್ಥಳೀಯರು ಮನೆಯ ಕಿಟಕಿ ಒಡೆದು ನೋಡಿದಾಗ ಮೃತದೇಹ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶನಿವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಲಗಿದ್ದ ಸ್ಥಿತಿಯಲ್ಲಿಯೇ ಚಾಪೆ ಮೇಲೆ ಮೃತದೇಹಗಳು ಪತ್ತೆಯಾಗಿವೆ. ಸ್ಥಳದಲ್ಲಿ ವಿಷದ ಬಾಟಲಿಯೂ ಸಿಕ್ಕಿದೆ. ಆರ್ಥಿಕ ಸಂಕಷ್ಟಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಮಾತುಗಳೂ ಕೇಳಿಬಂದಿವೆ.
ಮೃತ ವಿನೋದ್ ಸಾಲ್ಯಾನ್ ಕುತ್ತಿಗೆಯಲ್ಲಿ ಬಟ್ಟೆ ಸಹಿತ ಮೊಬೈಲ್ ಚಾರ್ಜರ್ನ ವಯರ್ ಕಂಡುಬಂದಿದೆ. ಪತ್ನಿ ಹಾಗೂ ಪುತ್ರನಿಗೆ ವಿಷ ನೀಡಿ ತಾನು ಕೂಡಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಎಸಿಪಿ ಬೆಳ್ಳಿಯಪ್ಪ, ಮುಲ್ಕಿ ಸರ್ಕಲ್ ಇನ್ಸ್ಪೆಕ್ಟರ್ ಕುಸುಮೋಧರ್, ಎಸ್ಸೈ ವಿನಾಯಕ ತೋರಗಲ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.