ಮಂಗಳೂರು / ಮೂಡುಬಿದಿರೆ, ನವೆಂಬರ್.25: ಮೂಡುಬಿದಿರೆಯ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆಯ ಶಾಂಭವಿ ನದಿಯಲ್ಲಿ ಮಂಗಳವಾರ ಬೆಳಿಗ್ಗೆ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ನಾಲ್ವರಲ್ಲಿ ಮತ್ತೆ ಇಬ್ಬರ ಶವ ಇಂದು ಪತ್ತೆಯಾಗಿದೆ.
ಮದುವೆ ಸಮಾರಂಭಕ್ಕೆಂದು ಬಂದಿದ್ದವರು ಈಜಲೆಂದು ನದಿಗೆ ಇಳಿದಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಪಾಲಡ್ಕ ಗ್ರಾಮದ ಕಡಂದಲೆಯಲ್ಲಿ ಮಂಗಳವಾರ ನಡೆದಿತ್ತು.
ಘಟನೆಯಲ್ಲಿ ವಾಮಂಜೂರು ಮೂಡುಶೆಡ್ಡೆಯ ಹರ್ಷಿತಾ (20), ಆಕೆಯ ಸಹೋದರ ನಿಖೀಲ್ (18), ಸಂಬಂಧಿಕರಾದ ವೇಣೂರಿನ ಸುಭಾಸ್ (19), ಬಜಪೆ ಕೊಳಂಬೆ ಹೊಗೆಪದವು ರವಿರಾಜ್ (29) ಮೃತಪಟ್ಟಿದ್ದರು. ಇವರಲ್ಲಿ ಹರ್ಷಿತಾ ಮತ್ತು ಸುಭಾಸ್ ಮೃತದೇಹ ಮಂಗಳವಾರ ಸಂಜೆಯೇ ಪತ್ತೆಯಾಗಿತ್ತು. ಆದರೆ ಕತ್ತಲಾದ ಕಾರಣ ಉಳಿದಿಬ್ಬರ ಮೃತ ದೇಹಗಳ ಶೋಧ ಕಾರ್ಯ ನಡೆಸಲು ಸಾಧ್ಯವಾಗಿರಲಿಲ್ಲ.
ಮೂಡುಬಿದಿರೆಯ ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಯಲ್ಲಿ ಆದಿತ್ಯವಾರ ವಿವಾಹ ಸಮಾರಂಭಕ್ಕೆ ಹರ್ಷಿತಾ ಆಕೆಯ ಸಹೋದರ ನಿಖೀಲ್ ಹಾಗೂ ಸಂಬಂಧಿಕರಾದ ವೇಣೂರಿನ ಸುಭಾಸ್ ಬಂದಿದ್ದರು.
ಈ ವೇಳೆ ಕಡಂದಲೆಯ ಶಾಂಭವಿ ನದಿಯ ಉಪನದಿಯತ್ತ ತೆರಳಿದ್ದರು. ಬಳಿಕ ತುಲೆಮುಗೆರ್ ಎಂಬ ಸ್ಥಳದಲ್ಲಿ ಹಲವರು ಗುಂಪಿನಲ್ಲಿ ನೀರಿಗಿಳಿದಿದ್ದರು. ಅಲ್ಲಿ ಭಾರೀ ಆಳ ಇರುವುದು ಅವರ ಗಮನಕ್ಕೆ ಬಾರದೆ ಈ ದುರ್ಘಟನೆ ಸಂಭವಿಸಿದೆ.
ಮೊದಲು ನೀರಿಗೆ ಇಳಿದವರು ಮುಳುಗುತ್ತಿರುವುದನ್ನು ಕಂಡ ಬಜಪೆಯ ಕೊಳಂಬೆ ಹೊಗೆ ಪದವು ನಿವಾಸಿ ರವಿರಾಜ್ ಕೂಡಲೇ ನೀರಿಗಿಳಿದು ಕೆಲವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ. ಈ ಮೂವರನ್ನು ರಕ್ಷಿಸುವ ಯತ್ನದಲ್ಲಿ ದೈಹಿಕವಾಗಿ ಬಳಲಿ ರವಿರಾಜ್ ಅವರು ಕೂಡ ಮುಳುಗಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಹರ್ಷಿತಾ ಮತ್ತು ಸುಭಾಸ್ ಮೃತದೇಹ ಮಂಗಳವಾರ ಸಂಜೆಯೇ ಪತ್ತೆಯಾಗಿದ್ದು,ಅವರ ಮರಣೋತ್ತರ ಪರೀಕ್ಷೆ ಮುಗಿದ್ದು, ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಗಿದೆ.
ನಿಖೀಲ್ ಮತ್ತು ರವಿರಾಜ್ ಅವರ ಮೃತದೇಹ ಇಂದು ಪತ್ತೆಯಾಗಿದ್ದು, ಮೃತದೇಹವನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಸತತ ಪರಿಶ್ರಮದಿಂದ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.