ಬೆಂಗಳೂರು, ನವೆಂಬರ್.12 : ಸ್ಯಾಂಡಲ್ವುಡ್ ನ ಖ್ಯಾತ ನಟ ದಿವಂಗತ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿಯ ಪುತ್ರನಿಗೆ ಇಂದು(ಗುರುವಾರ) ತೊಟ್ಟಿಲ ಶಾಸ್ತ್ರ ನಡೆದಿದೆ.
ಹಿರಿಯರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಜೂನಿಯರ್ ಚಿರುಗೆ ತೊಟ್ಟಿಲು ಶಾಸ್ತ್ರ ನೇರವೇರಿದೆ. ಜೆ.ಪಿ. ನಗರದ ಮೇಘನಾ ರಾಜ್ರ ಮನೆಯಲ್ಲಿ ತೊಟ್ಟಿಲು ಶಾಸ್ತ್ರ ನಡೆದಿದ್ದು, ಕೇವಲ ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಸರಳವಾಗಿ ನಡೆಸಲಾಗಿದೆ. ತೊಟ್ಟಿಲು ಶಾಸ್ತ್ರಕ್ಕೆ ಮೇಘನಾ ಮನೆಗೆ ಚಿರಂಜೀವಿ ಸರ್ಜಾರ ಅಜ್ಜಿ ಲಕ್ಷ್ಮೀ ದೇವಮ್ಮ ಹಾಗು ತಾಯಿ ಅಮ್ಮಾಜಿ ಕೂಡ ಆಗಮಿಸಿದ್ದರು. ಈ ಶಾಸ್ತ್ರಕ್ಕೆ ಗದಗದಿಂದ ವನಿತಾ ಅವರು ಕೊಟ್ಟಿರುವ ತೊಟ್ಟಿಲನ್ನು ಬಳಸಲಾಯಿತು.
ಪತಿಯ ನಿಧನದ ಬಳಿಕ ಮಾಧ್ಯಮಗಳಿಂದ ದೂರವೇ ಉಳಿದಿದ್ದ ಮೇಘನಾ ಅವರು ಜೂ.ಚಿರು ತೊಟ್ಟಿಲ ಶಾಸ್ತ್ರದ ಶುಭದಿನದಂದು ಮನಬಿಚ್ಚಿ ಮಾತನಾಡಿದ್ದಾರೆ.
ಚಿರು ನೆನೆದು ಕಣ್ಣೀರಿಟ್ಟ ಮೇಘನಾ, ತುಂಬಾ ದಿನಗಳ ನಂತರ ಮಾಧ್ಯಮದ ಮುಂದೆ ಬರ್ತಾ ಇದೀನಿ. ನನಗೆ ನನ್ನ ಮಗನೇ ಶಕ್ತಿ, ಸ್ಪೂರ್ತಿ. ಚಿರು ಎಲ್ಲಾ ನನ್ನ ಕೈಯಿಂದ ಮಾಡಿಸಿದ್ದಾರೆ. ಚಿರು ಅಗಲಿಕೆಯ ನೋವು ಮರೆಯೋದು ಅಸಾಧ್ಯ. ಮಗನನ್ನು ನೋಡಿದರೆ ಚಿರು ರೀತಿಯೇ ಕಾಣಿಸುತ್ತಿದ್ದಾರೆಂದು ಹೇಳಿದ್ದಾರೆ.
ಇಂದು ನನ್ನ ಮಗನಿಗೆ ತೊಟ್ಟಿಲು ಶಾಸ್ತ್ರ. ಹೊಸ ಸಂತಸ ಮನೆ ಮಾಡಿದೆ. ಚಿರು ಅಗಲಿಕೆಯ ನೋವಿನಲ್ಲಿದ್ದ ಎರಡೂ ಕುಟುಂಬದ ಮೊಗದಲ್ಲಿ ಜೂನಿಯರ್ ಚಿರು ಆಗಮನ ಖುಷಿಯ ಬುತ್ತಿ ತಂದಿದ್ದಾನೆ. ಕಷ್ಟದ ಸಮಯವನ್ನು ಹೇಗೆ ಎದುರಿಸಬೇಕೆಂಬುದನ್ನು ನಾನು ಚಿರುವಿನಿಂದ ಕಲಿತೆ. ಚಿರು ಅಂದರೆ, ನನ್ನ ಹ್ಯಾಪಿನೆಸ್. ಮಗನ ಆಗಮನ ಡಬಲ್ ಸಂಭ್ರಮ ಬಂದಿದೆ ಎಂದು ಹೇಳಿದ್ದಾರೆ.
ಚಿರು ಅಗಲಿಕೆ ನೋವು ಮರೆಯೋಕೆ ಅಸಾಧ್ಯ. ನನ್ನ ಮಗನನ್ನ ನೋಡಿದಾಗ ಚಿರು ಹೇಗೆ ನೋಡಿಕೊಳ್ತಾ ಇದ್ರು ಅನ್ನೋದು ನನಗೆ ಕಾಣುತ್ತೆ. ಚಿರು ಅಂದ್ರೆ ನಗು ಮುಖ ಕಣ್ ಮುಂದೆ ಬರುತ್ತೆ. ಅವರ ಸೆಲೆಬ್ರೇಷನ್ ಅನ್ನು ನಾನು ಮುಂದುವರಿಸಬೇಕು. ನನ್ನ ಮನೆಯಲ್ಲಿ ಚಿರುಗೆ ಸಂಬಂಧಿಸಿದ ವಸ್ತು ಏನೇ ಇದ್ದರೂ ಸೆಲೆಬ್ರೇಷನ್ ಮಾಡ್ತೀವಿ ಎಂದು ಮೇಘನಾ ಹೇಳಿದರು.
ಜನರು ನನ್ನನ್ನು, ಚಿರು ಹಾಗೂ ನಮ್ಮ ಕುಟುಂಬವನ್ನು ಮನೆಯವರಂತೆಯೇ ನೋಡಿಕೊಂಡಿದ್ದಾರೆ. ಇದೀಗ ನಾನು ಸ್ಟ್ರಾಂಗ್ ಇದ್ದೀನೋ, ಇಲ್ಲವೋ ಗೊತ್ತಿಲ್ಲ. ಆದರೆ, ಎಲ್ಲರೂ ಸ್ಟ್ರಾಂಗ್ ಆಗಿದ್ದೀನಿ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಶೀಘ್ರದಲ್ಲೇ ಮಗುವಿನ ನಾಮಕರಣವನ್ನು ಮಾಡ್ತೀವಿ. ಚಿರು ಮಗ ಆಗಿರೋದ್ರಿಂದ ಜಾತಕ ನೋಡಿಕೊಂಡು ಸ್ಪೆಷಲ್ ಹೆಸರು ಇಡ್ಬೇಕು ಅಂತ ಆಸೆ ಇದೆ. ಹೆಸರನ್ನು ಇನ್ನೂ ನಿರ್ಧಾರ ಮಾಡಿಲ್ಲ. ಕೆಲ ಅಕ್ಷರಗಳು ಬಂದಿದ್ದು, ಹುಡುಕಾಟ ನಡೆಸಲಾಗುತ್ತಿದೆ. ವಿಶೇಷವಾದ ಹೆಸರಿಗಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ಮೇಘನಾ ಹೇಳಿದರು.
ನನ್ನ ಮಗ ಹುಟ್ಟಿದಾಗ ಚಿರು ಫೋಟೋ ಮುಂದೆ ಮಗುವನ್ನು ಇಟ್ಟದ್ದು ನೋಡಿ ಖುಷಿಯಾಯ್ತು. ಇಂಥ ಪ್ರಯತ್ನ ಮಾಡಿದವರಿಗೆ ಧನ್ಯವಾದ ಅರ್ಪಿಸಿವೆ. ಈಗಲೂ ನನ್ನ ಪಿಲ್ಲರ್ ಆಫ್ ಸ್ಟ್ರೆಂತ್ ಅಂದ್ರೆ ನನ್ನ ತಾಯಿ-ತಂದೆ. ಐದು ತಿಂಗಳಿನಿಂದ ಮನೆಯಲ್ಲಿ ನನ್ನ ಸ್ನೇಹಿತರೂ ಇರುತ್ತಿದ್ದರು. ಮಾಧ್ಯಮ ಸೇರಿದಂತೆ ಎಲ್ಲರಿಗೂ ಧನ್ಯವಾದ ಅರ್ಪಿಸುವೆ ಎನ್ನುತ್ತಾ ಮೇಘನಾ ರಾಜ್ ಭಾವುಕರಾದರು.
Comments are closed.