ಮಂಗಳೂರು ನವೆಂಬರ್ 12 : ಡಾ. ದಯಾನಂದ ಪೈ – ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಹೆತ್ತವರಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬ್ರಾಹ್ಮಣರ ಪರಿಷತ್ತಿನ ಸಹಾಯಕ ಆರ್ಚಕರಿಗೆ ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆ ಕಾರ್ಯ ಯೋಜನೆಯಲ್ಲಿ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ರಾಜಶೇಖರ್ ಹೆಬ್ಬಾರ್ರವರು ಮಾತನಾಡಿ, ಬಡವರಿಗೆ ಅನ್ನದ ಕೊರತೆಗಳು ಉಂಟಾಗಬಾರದು, ಅವರ ಆರೋಗ್ಯವನ್ನು ಕಾಪಾಡುವಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಇದರ ಪ್ರತಿಫಲವನ್ನು ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 87 ವಿದ್ಯಾರ್ಥಿಗಳಿಗೆ ಹಾಗೂ 38 ಸಹಾಯಕ ಆರ್ಚಕರಿಗೆ ಪರಿಹಾರ ಕಿಟ್ಟನ್ನು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜು ಶಿಕ್ಷಣ ಇಲಾಖೆ ಇ-ಕಂಟೆಟ್ನ, ಕಲಿಕೆಯ ವಿಶೇಷಾಧಿಕಾರಿ ಪ್ರೊ. ಸ್ಟಿವನ್ ಕ್ವಾಡ್ರಸ್ರವರು ಮಾತಾನಾಡಿ, ಹಸಿವನ್ನು ನೀಗಿಸುವ ಸೇವಾ ಕಾರ್ಯ ಮೆಚ್ಚುವಂತಹದ್ದು. ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆಯ ಸೇವೆಯು ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪ್ರೋ.ರಾಜಶೇಖರ್ ಹೆಬ್ಬಾರ್ ಮತ್ತು ಇಸ್ಕಾನ್ ಸಂಸ್ಥೆಯ ಸ್ವಾಮೀಜಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಶೇಷಪ್ಪ ಅಮೀನ್, ಕಾಲೇಜು ಸಿಬ್ಬಂದಿಗಳಾದ ಗೋಪಿನಾಥ್ ಬಾಳಿಗ, ನಾಗೇಂದ್ರ ಆಚಾರ್ಯ ಹಾಗೂ ತುಷಾರ್.ಕೆ.ಕೋಟೆಕಾರ್ ಉಪಸ್ಥಿತರಿದ್ದರು.
Comments are closed.