ಕರಾವಳಿ

ಅಸಾಮಾನ್ಯ ವೇಷಧಾರಿ ‘ಯಕ್ಷ ಕಲಾವಿದ ವಾ.ಸಾಮಗರಿಗೆ ಅವರೇ ಸಾಟಿ’: ನುಡಿ ನಮನ ಸಭೆಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ

Pinterest LinkedIn Tumblr

ಮಂಗಳೂರು: ‘ ಎಂ.ಆರ್. ವಾಸುದೇವ ಸಾಮಗರು ಯಕ್ಷಗಾನ ಆಟ – ಕೂಟಗಳ ಅತ್ಯದ್ಭುತ ಕಲಾಕಾರ. ಅವರು ತಮ್ಮ ಅಪಾರ ಕಲ್ಪನಾ ಸಾಮರ್ಥ್ಯದಿಂದ ಚಿತ್ರಿಸಿದ ಯಾವತ್ತೂ ಪಾತ್ರಗಳು ಇತರರ ಅಳವಿಗೆ ನಿಲುಕದ್ದು. ವಾ.ಸಾಮಗರಿಗೆ ಅವರೇ ಸಾಟಿ. ಅವರ ಸ್ಥಾನವನ್ನು ತುಂಬಬಲ್ಲ ವಿಕ್ಷಿಪ್ತ ಪ್ರತಿಭೆಗಳು ಬೇರೆಡೆ ಇಲ್ಲ ಎನ್ನಬಹುದು. ಯಕ್ಷರಂಗದಲ್ಲಿ ಬಹುದೊಡ್ಡ ನಿರ್ವಾತವನ್ನು ಸೃಷ್ಟಿಸಿ ಅವರು ನಿರ್ಗಮಿಸಿದ್ದಾರೆ’ ಎಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ಇತ್ತೀಚೆಗೆ ನಿಧನರಾದ ಪ್ರಸಿದ್ಧ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗರ ಸ್ಮರಣಾರ್ಥ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿ ಮಾತನಾಡಿದರು.

‘ತೆಂಕು – ಬಡಗು ಉಭಯ ತಿಟ್ಟುಗಳ ಅಸಾಮಾನ್ಯ ವೇಷಧಾರಿಯಾಗಿ, ವಿಶಿಷ್ಟ ಶೈಲಿಯ ಅರ್ಥಧಾರಿಯಾಗಿ, ಹಲವು ಪ್ರಸಂಗಗಳ ಸಂಗ್ರಾಹಕರಾಗಿ ಮತ್ತು ಸಂಯಮಮ್ ಸಂಚಾರಿ ತಾಳಮದ್ದಳೆ ಮೇಳದ ಸಂಘಟಕರಾಗಿ ವಾಸುದೇವ ಸಾಮಗರು ಕಲಾಭಿಮಾನಿಗಳ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುತ್ತಾರೆ’ ಎಂದು ಅವರು ನುಡಿದರು.

ಯಕ್ಷಗಾನ ಸಂಘಟಕ ಮತ್ತು ಉದ್ಯಮಿ ಕರುಣಾಕರ ಶೆಟ್ಟಿ ಪಣಿಯೂರು ಅವರು ಮಾತನಾಡಿ ದಿ.ಕಾಳಿಂಗ ನಾವಡ ಮತ್ತು ವಾಸುದೇವ ಸಾಮಗರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿ ಶ್ರದ್ಧಾಂಜಲಿ ಸಮರ್ಪಿಸಿದರು. ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸಂತಾಪಸೂಚಕ ಠರಾವು ಮಂಡಿಸಿದರು.

ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಉಪಾಧ್ಯಕ್ಷ ಸುಂದರ ಶೆಟ್ಟಿ ಬೆಟ್ಟಂಪಾಡಿ, ಕಾರ್ಯದರ್ಶಿಗಳಾದ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಉಮೇಶ ಆಚಾರ್ಯ ಗೇರುಕಟ್ಟೆ ಮೌನ ಪ್ರಾರ್ಥನೆ ಸಲ್ಲಿಸಿ ಅಗಲಿದ ಯಕ್ಷ ಚೇತನಕ್ಕೆ ಸದ್ಗತಿ ಕೋರಿದರು.

ರಾಜ್ಯೋತ್ಸವ ಕಲಾ ಸಂಭ್ರಮ:

ನಗರದ ಕದ್ರಿಕಂಬಳ ಗ್ರಹ ಕಚೇರಿಯಲ್ಲಿ ಜರಗಿದ ಯಕ್ಷಾಂಗಣ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ವಹಿಸಿದ್ದರು. ಕಳೆದ ಎಂಟು ವರ್ಷಗಳಿಂದ ಯಕ್ಷಾಂಗಣ ಆಯೋಜಿಸುತ್ತಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಯಕ್ಷಗಾನ ತಾಳಮದ್ದಲೆ ಸಪ್ತಾಹ’ ವನ್ನು ಕೋವಿಡ್ – 19 ಹಿನ್ನೆಲೆಯಲ್ಲಿ ರದ್ದುಪಡಿಸಿದ್ದು, ಸರಕಾರದ ನಿಯಮಾವಳಿಗೊಳಪಟ್ಟು ಒಂದು ದಿನದ ಸಾಂಕೇತಿಕ ಕಲಾ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಇದೇ ನವೆಂಬರ್ 29ರಂದು ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಸಭಾಂಗಣದಲ್ಲಿ ಜರಗುವ ‘ರಾಜ್ಯೋತ್ಸವ ಕಲಾ ಸಂಭ್ರಮ – ೨೦೨೦’ ಕಾರ್ಯಕ್ರಮದಲ್ಲಿ ಯಕ್ಷಾಂಗಣ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆಯನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

Comments are closed.