
ದುಬೈ : “ಕನ್ನಡ ಮಿತ್ರರು ಯು ಎ ಇ” ವತಿಯಿಂದ ಕನ್ನಡೋತ್ಸವ- ೨೦೨೦, ಕನ್ನಡ ಪಾಠ ಶಾಲೆ -ಕನ್ನಡ ಕಲಿಕಾ ಆರೋಭವತ್ಸವ ಸುಗ್ಗಿ-7, ಯುಎಇ ದುಬೈಯಲ್ಲಿ ನವೆಂಬರ್ 6, ಶುಕ್ರವಾರದಂದು ಆರಂಭಗೊಳ್ಳಲಿದೆ.
ಕನ್ನಡ ಕಲಿಕಾ ಆರೋಭವತ್ಸವ ಸುಗ್ಗಿ-7ನ್ನು ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ನವೆಂಬರ್ 6ರಂದು ಝುಮ್ ಆಪ್ ವೆಬಿನರ್ ಮೂಲಕ ಉದ್ಘಾಟಿಸಲಿರುವರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕಾರ್ಯದರ್ಶಿ ಡಾ.ಮುರಳಿಧರ್ ಹಾಗೂ ಖ್ಯಾತ ವಾಗ್ಮಿ ಪ್ರೋ. ಕೃಷ್ಣೇಗೌಡ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿರುವರು.

ಇಂದು ಅನಿವಾಸಿ ಕನ್ನಡಿಗರು ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿ ನೆಲಸಿದ್ದು, ವಿದೇಶದಲ್ಲಿಯೇ ಹುಟ್ಟಿ ಬೆಳೆಯುವ ನಮ್ಮ ಮಕ್ಕಳು ಪ್ರಮುಖವಾಗಿ ಆಂಗ್ಲ ಭಾಷೆಯಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಕನ್ನಡ ಭಾಷೆಯಲ್ಲಿ ಓದಲು ಅಥವಾ ಬರೆಯಲು ಅವಕಾಶವಿಲ್ಲದೆ ಮಾತೃಭಾಷೆಯಲ್ಲಿ ಅನಕ್ಷರಸ್ಥ ರಾಗುತ್ತಿರುವುದು ಶೋಚನೀಯ.
ಆದ್ದರಿಂದ, “ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು” ಎಂದು ಸಾರಿ ವಿದೇಶದಲ್ಲಿನ ಯುವ ಪೀಳಿಗೆಗೆ ಸಾಮೂಹಿಕ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸಲು ಉದಯವಾದದ್ದೇ “ಕನ್ನಡ ಮಿತ್ರರು ಯು ಎ ಇ” ಸಂಘಟನೆ ಮತ್ತು ಅದರ ಕನ್ನಡ ಕಲಿಕಾ ವೇದಿಕೆಯೇ ” ಕನ್ನಡ ಪಾಠಶಾಲೆ ದುಬೈ”. 2014ರಲ್ಲಿ ಶಶಿಧರ್ ನಾಗರಾಜಪ್ಪ ನವರೊಂದಿಗೆ ಕೈಗೂಡಿಸಿದ ೫೦ ಜನ ಸ್ವಯಂಪ್ರೇರಿತ ಸದಸ್ಯರು ಪ್ರತಿಫಲಾಪೇಕ್ಷೆ ಇಲ್ಲದೆ ಕನ್ನಡ ಭಾಷೆ ಹಾಗು ನಾಡಿನ ಸಂಸ್ಕೃತಿಯನ್ನು ಮುಂದಿನ ನವಪೀಳಿಗೆಗೆ ವರ್ಗಾಹಿಸಲು ಸೇವೆಸಲ್ಲಿಸುತ್ತಿದ್ದಾರೆ.

ಕನ್ನಡ ಪಾಠಶಾಲೆ ದುಬೈ, ಯು ಎ ಇ ಯಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರ ಮಕ್ಕಳಿಗೆ ಉಚಿತವಾಗಿ ಕನ್ನಡ ಕಲಿಸುತಿದ್ದು ಒಂದು ಸ್ವಯಂ ಸೇವೆಯ ಮಾಧರಿಯನ್ನು ಅನುಸರಿಸಲಾಗುತ್ತಿದೆ.
ಪಾಠ ಕಲಿಸಲು ಬೇಕಾಗುವ ಸ್ಥಳಾವಕಾಶವನ್ನು ಮೊಟ್ಟಮೊದಲಿಗೆ ಸುತ್ತೂರು ಸಂಸ್ಥಾನ ಮಠದ ಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಆಶೀರ್ವಾದದಿಂದ ಪಡೆದು, ದುಬೈನ ಜೆ. ಎಸ್. ಎಸ್. ಶಾಲೆಯಲ್ಲಿ ಆರಂಭಿಸಲಾಯಿತು.

ಪ್ರಸ್ತುತವಾಗಿ ಶ್ರೀ ಓಂಪ್ರಕಾಶ ರವರ ಅಸಾಪ್ ಟ್ಯುಟರ್ಸ್ ನ ಸಹಕಾರದೊಂದಿಗೆ ನಡೆಸಲಾಗುತ್ತಿದೆ. ಹತ್ತು ಜನ ಶಿಕ್ಷಕಿಯರು ಸ್ವಯಂಪ್ರೇರಣೆಯಿಂದ ವೇತನರಹಿತ ಸೇವೆಸಲ್ಲಿಸಿ ಅನಿವಾಸಿ ಕನ್ನಡಿಗರ ಸಾಕ್ಷರತಾ ಆಂದೋಲನದಲ್ಲಿ ಭಾಗಿಯಾಗಿದ್ದಾರೆ.
Comments are closed.