ಕರಾವಳಿ

ವಿವಾದದ ಬೆನ್ನಲ್ಲೇ ನಾಳೆಯಿಂದ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿಯೇ ವ್ಯಾಪಾರ ಆರಂಭಿಸಲು ತೀರ್ಮಾನ

Pinterest LinkedIn Tumblr

ಮಂಗಳೂರು,ಜೂನ್..08: ಕಳೆದ ಎರಡು ತಿಂಗಳಿನಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ನಾಳೆಯಿಂದ ವ್ಯಾಪಾರ ಆರಂಭಿಸಲು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರು ಮುಂದೆ ಬಂದಿದ್ದಾರೆ.

ಕೋವಿಡ್ ಸೋಂಕು ಹರಡದಂತೆ ತಾತ್ಕಾಲಿಕವಾಗಿ ಬೈಕಂಪಾಡಿಲ್ಲಿರುವ ಎಪಿಎಂಸಿ ಯಾರ್ಡ್​ಗೆ ಸೆಂಟ್ರಲ್ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿತ್ತು. ಬಳಿಕ ಕೆಲವೇ ದಿನಗಳಲ್ಲಿ ಸೆಂಟ್ರಲ್ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಕೆಡವಿ ನೂತನ ಮಾರುಕಟ್ಟೆ ನಿರ್ಮಿಸುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಹೇಳಿಕೆ ನೀಡಿತ್ತು.

ಈ ಸಂದರ್ಭ ವ್ಯಾಪಾರಸ್ಥರು ಹಾಗೂ ಕೆಲವು ಸಂಘಸ ಸ್ಥೆಗಳು ಈ ಬಗ್ಗೆ ಪರ ವಿರೋಧ ಹೇಳಿಕೆಗಳನ್ನು ನೀಡಿತ್ತು. ಬಳಿಕ ಈ ಪ್ರಕರಣ ನ್ಯಾಯಾಯಲಯದ ಮೆಟ್ಟಲು ಹತ್ತಿದ್ದು, ಅಲ್ಲಿ ತಾತ್ಕಾಲಿಕ ತಡೆ ನೀಡಲಾಯಿತು.

ಇದೀಗ ಲಾಕ್​ಡೌನ್ ಸಡಿಲಿಕೆಯಾಗಿರುವ ಹಿನ್ನೆಲೆಯಲ್ಲಿ ಸೆಂಟ್ರಲ್ ಮಾರುಕಟ್ಟೆಗೆ ಜಿಲ್ಲಾಡಳಿತವು ಹಾಕಿರುವ ಬೀಗವನ್ನು ತೆಗೆಯಲು ಮನವಿ ಮಾಡಲಾಗಿದ್ದು, ನಾಳೆಯಿಂದ ನಾವು ಸೆಂಟ್ರಲ್ ಮಾರುಕಟ್ಟೆಯಲ್ಲಿಯೇ ವ್ಯಾಪಾರ ಆರಂಭಿಸುವುದಾಗಿ ತೀರ್ಮಾನಿಸಿದ್ದೇವೆ ಎಂದು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಎಫ್.ಕೆ.ಮುಸ್ತಫಾ ಹೇಳಿದರು.

ನಗರದ ಪ್ರೆಸ್ ಕ್ಲಬ್​ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಳೆಯಿಂದ ಚಿಲ್ಲರೆ ವ್ಯಾಪಾರಸ್ಥರನ್ನು ಹೊರತುಪಡಿಸಿ ರಖಂ ಮಾರಾಟಗಾರರು ಸೆಂಟ್ರಲ್ ಮಾರುಕಟ್ಟೆಯಲ್ಲಿಯೇ ವ್ಯಾಪಾರ ಆರಂಭಿಸುವುದಾಗಿ ನಾವು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಎಂ.ಎಫ್.ಕೆ.ಮುಸ್ತಫಾರಾಜ್ಯಾದ್ಯಂತ ಎಲ್ಲಾ ಕಡೆಗಳಲ್ಲಿ ವ್ಯಾಪಾರ ಮೊದಲಿನಂತೆ ಆರಂಭವಾಗಿದ್ದು, ಸೆಂಟ್ರಲ್ ಮಾರುಕಟ್ಟೆಯನ್ನು ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕಾ ದೃಷ್ಟಿಯಿಂದ ಮುಚ್ಚಲಾಗಿತ್ತು‌. ಜಿಲ್ಲಾಡಳಿತದ ಎಲ್ಲಾ ನಿರ್ದೇಶನಗಳನ್ನು ನಾವು ಪಾಲಿಸಿದ್ದೇವೆ. ಈಗಲೂ ನಾವು ಸಾಮಾಜಿಕ ಅಂತರ ಕಾಯ್ದುಕೊಂಡು ನಮ್ಮ‌ ವ್ಯಾಪಾರವನ್ನು ನಾವು ಆರಂಭಿಸುತ್ತೇವೆ.

ಕೋವಿಡ್ ಸೋಂಕು ಇರುವ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಲಾಗುತ್ತಿದ್ದು, ಯಾವುದೇ ರೀತಿಯಿಂದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಬಾರದು ಎಂದು ತೀರ್ಮಾನ ಕೈಗೊಳ್ಳಲಾಗಿದೆ‌ ಎಂದರು.

ಈಗಾಗಲೇ ಜಿಲ್ಲಾಡಳಿತ ಚಿಲ್ಲರೆ ವ್ಯಾಪಾರಸ್ಥರಿಗೆ ತಾತ್ಕಾಲಿಕ ಶೆಡ್​​ಗಳನ್ನು ನಿರ್ಮಿಸುತ್ತಿದೆ. ಆದರೆ ತರಕಾರಿ ಹಾಗೂ ಹಣ್ಣಿನ ವ್ಯಾಪಾರ ಶೆಡ್​​ಗಳಲ್ಲಿ ಮಾಡಲು ಸಾಧ್ಯವಿಲ್ಲ. ಇಲೆಕ್ಟ್ರಾನಿಕ್ ತೂಕಕ್ಕೆ ವಿದ್ಯುತ್ ಅವಶ್ಯಕತೆ ಇದೆ. ಅಲ್ಲದೆ ಮಳೆಗಾಲದಲ್ಲಿ ಶೆಡ್​​ಗಳಲ್ಲಿ ತರಕಾರಿ ಹಣ್ಣುಗಳನ್ನು ವ್ಯಾಪಾರ ಮಾಡುವ ಹಾಗಿಲ್ಲ. ಚಿಲ್ಲರೆ ವ್ಯಾಪಾರಿಗಳಿಗೆ ಸರಿಯಾದ ವ್ಯವಸ್ಥಿತವಾದ ವ್ಯಾಪಾರ ಮಳಿಗೆ ಆರಂಭಿಸುವವರೆಗೆ ಜಿಲ್ಲಾಡಳಿತ ಸೆಂಟ್ರಲ್ ಮಾರುಕಟ್ಟೆಯಲ್ಲಿಯೇ ಅವರಿಗೆ ವ್ಯವಸ್ಥೆ ಮಾಡಿಕೊಡಲಿ‌. ಅಲ್ಲದೆ ಸೆಂಟ್ರಲ್ ಮಾರುಕಟ್ಟೆಗೆ ಜಿಲ್ಲಾಡಳಿತ ಬೀಗ ಹಾಕಿದ್ದು, ಅದನ್ನು ತೆಗೆಯಲು ನಾವು ಈಗಾಗಲೇ ಮನವಿ ಮಾಡಿದ್ದೇವೆ ಎಂದು ಮುಸ್ತಫಾ ಹೇಳಿದರು .

Comments are closed.