ಕರಾವಳಿ

ಕೊರೋನ ಎಫೆಕ್ಟ್ : “ಪಟ್ಲ ಸಂಭ್ರಮ 2020” ರದ್ದು – ಬದಲಿಗೆ 1163 ಕಲಾವಿದರಿಗೆ ಅಕ್ಕಿ, ದಿನಸಿ ಸಾಮಾಗ್ರಿ ವಿತರಣೆ

Pinterest LinkedIn Tumblr

ಮಂಗಳೂರು : ಪ್ರತಿ ವರ್ಷ ಮೇ ತಿಂಗಳಲ್ಲಿ ಪಟ್ಲ ಸಂಭ್ರಮವನ್ನು ಆಯೋಜಿಸಿಕೊಂಡು ಬರುತ್ತಿದ್ದು ನಿರಂತರ ನಾಲ್ಕು ವರ್ಷಗಳ ಕಾಲ ಈ ಸಂದರ್ಭದಲ್ಲಿ ವಿವಿಧ ಸೇವಾ ಯೋಜನೆಗಳನ್ನು ಜಾರಿಗೊಳಿಸುತ್ತೇವೆ.

ಪ್ರಸಕ್ತ ವರ್ಷದಲ್ಲಿ ಜಗತ್ತಿನಾದ್ಯಂತ ವ್ಯಾಪಿಸಿರುವ ಕೊರೋನ ಮಹಾಮಾರಿಯಿಂದಾಗಿ “ಪಟ್ಲ ಸಂಭ್ರಮ 2020” ರದ್ದುಮಾಡಿ ಅದರ ಬದಲಾಗಿ ಕೊರೊನ ವೈರಸ್‌ ನಿಂದಾಗಿ ಯಕ್ಷಗಾನ ಪ್ರದರ್ಶನಗಳು ಇಲ್ಲದೆ ಕಂಗೆಟ್ಟ 1163 ಕಲಾವಿದರಿಗೆ ಸುಮಾರು 20 -25 ದಿನಗಳಿಗೆ ಬೇಕಾದ ಅಕ್ಕಿ ಮತ್ತು ದಿನಸಿ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಕಲಾವಿದರ ಸಂಕಷ್ಟದಲ್ಲಿ ಕೈಜೋಡಿಸಿದ ಸಂತೃಪ್ತಿ ಭಾವನೆ ನಮಗಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ (ರಿ) ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾದ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಾಸರಗೋಡು, ದ.ಕ, ಉಡುಪಿ, ಶಿವಮೊಗ್ಗ ,ಉ.ಕ,ಚಿಕ್ಕಮಗಳೂರು ಜಿಲ್ಲೆಗಳಲ್ಲಿರುವ ಯಕ್ಷಗಾನ ಕಲಾವಿದರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ ಎಂದು ತಿಳಿಸಿದರು.

ಕಳೆದ 5 ವರ್ಷಗಳ ಅವಧಿಯಲ್ಲಿ 5 ಕೋಟಿ ರೂಪಾಯಿಗಳಿಗೂ ಮಿಕ್ಕಿದ ಮೊತ್ತವನ್ನು ವಿವಿಧ ಸೇವಾಯೋಜನೆಗಳಿಗೆ ವಿನಿಯೋಗಿಸಲಾಗಿದೆ. ಟ್ರಸ್ಟ್‌ನ ಪ್ರಮುಖವಾದ ಯೋಜನೆಗಳ ಲ್ಲಿ ಒಂದಾಗಿರುವ ಅಪಘಾತ ವಿಮಾ ಯೋಜನೆಯಲ್ಲಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯ ಸಹಯೋಗದಲ್ಲಿ ಅಪಘಾತದಿಂದ ಸಂಕಷ್ಟಕ್ಕೆ ಒಳಗಾದ ಮತ್ತು ಮೃತಪಟ್ಟ ಓರ್ವ ಯಕ್ಷಕಲಾವಿದರೂ ಸೇರಿದಂತೆ ಸುಮಾರು 20 ರಿಂದ 25 ಲಕ್ಷ ರೂಪಾಯಿವರೆಗಿನ ಮೊತ್ತದ ವಿಮಾ ಪರಿಹಾರ ದೊರೆತಿದೆ.

ಈ ವಿಮಾ ಯೋಜನೆಯಲ್ಲಿ ಸುಮಾರು 850 ಕ್ಕೂ ಮಿಕ್ಕಿ ಹೆಸರು ನೊಂದಾಯಿಸಿದ್ದು 31-5-2020ಕ್ಕೆ ಇದರ ಅವಧಿ ಮುಗಿಯಲಿದ್ದು,ಮರು ನೊಂದಾವಣೆ ಮಾಡಬೇಕಾಗಿದೆ. ಆದುದರಿಂದ 30-5-2020 ನೇ ಶನಿವಾರ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಪಕ್ಕದ ಕರಂಗಲ್ಪಾಡಿ ಮಾರ್ಕೆಟಿನ ಎದುರುಗಡೆಯಿರುವ ಎಸ್.ಎಲ್. ಚೇಂಬರ್ ನಲ್ಲಿರುವ ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪೆನೆಯ ಕಚೇರಿಯಲ್ಲಿ ತೆಂಕು ತಿಟ್ಟಿನ ಕಲಾವಿದರಿಗೆ ಬೆಳಿಗ್ಗೆ 9.00 ರಿಂದ 2.00 ರ ತನಕ ಮತ್ತು ಬಡಗು ತಿಟ್ಟಿನ ಯಕ್ಷ ಕಲಾವಿದರಿಗಾಗಿ 01-06-2020 ನೇ ಸೋಮವಾರ ಕುಂದಾಪುರದ ಹೋಟೆಲ್ ಪಾರಿಜಾತದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಖುದ್ದಾಗಿ ಅಥವ ಪ್ರತಿನಿಧಿಗಳ ಮುಖಾಂತರ ರಿನೀವಲ್ ಮಾಡಿಕೊಳ್ಳಬಹುದು.ಮತ್ತು ಹೊಸದಾಗಿ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ವರು ಒಂದು ಭಾವಚಿತ್ರ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಖುದ್ದಾಗಿ ಬಂದು ಹೆಸರು ನೊಂದಾಯಿಸಿ ಕೊಳ್ಳತಕ್ಕದ್ದು. ಈ ಮೇಲಿನ ಎರಡೂ ದಿನಗಳಲ್ಲಿಯೂ ಬರಲು ಅನಾನುಕೂಲವಾದವರು ಜೂನ್ 10 ರ ಒಳಗೆ ಟ್ರಸ್ಟ್‌ ನ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸತೀಶ್ ಶೆಟ್ಟಿ ತಿಳಿಸಿದರು.

ಮಾರ್ಚ್ ತಿಂಗಳಿನಿಂದ ಯಾವುದೇ ಯಕ್ಷಗಾನ, ತಾಳಮದ್ದಳೆಗಳ ಪ್ರದರ್ಶನಗಳು ಇಲ್ಲದೆ ಬೇಸರಗೊಂಡಿರುವ ಯಕ್ಷಾಭಿಮಾನಿಗಳನ್ನು ಸಂತೋಷಪಡಿಸುವ ಸಲುವಾಗಿ ದಿನಾಂಕವನ್ನು 25-05-2020 ರಿಂದಲೂ 30-05-2020 ರ ವರೆಗೆ ಏಳು ದಿನಗಳ ” ಯಕ್ಷಗಾನ -ತಾಳಮದ್ದಳೆ ಸಪ್ತಾಹ” ವನ್ನು ಹಮ್ಮಿ ಕೊಂಡಿದ್ದು ಸುಮಾರು ನಲುವತ್ತು ಮಂದಿ ಹೆಸರಾಂತ ಯಕ್ಷ ಕಲಾವಿದರು, ಸುಪ್ರಸಿದ್ಧ ಭಾಗವತರು ಮತ್ತು ಹಿಮ್ಮೇಳ ಕಲಾವಿದರು ಭಾಗವಹಿಸಲಿದ್ದಾರೆ ಮತ್ತು ಈ ಪ್ರದರ್ಶನಗಳನ್ನು ಫೇಸ್ ಬುಕ್ ಮತ್ತು ಯುಟ್ಯೂಬ್ ನಲ್ಲಿ ನೇರಪ್ರಸಾರ ಮಾಡುವ ವ್ಯವಸ್ಥೆ ಯನ್ನು ಮಾಡಿರುವುದಾಗಿ ತಿಳಿಸಿದರು.

ಮಳೆಗಾಲವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಯಕ್ಷಕಲಾವಿದರು ಇನ್ನಷ್ಟು ಸಂಕಷ್ಟಗಳನ್ನು ಎದುರಿಸುವ ಸಂದರ್ಭಗಳಲ್ಲಿ ದಾನಿಗಳ ನೆರವಿನಿಂದ ಇನ್ನುಮುಂದೆಯೂ ಸಹಾಯ ಹಸ್ತ ನೀಡುವಬಗ್ಗೆ ಯೋಚಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್.ಕೆ.ಭಂಡಾರಿ,ಕೋಶಾಧಿಕಾರಿ ಸಿ.ಎ.ಸುದೇಶ್ ರೈ ಯವರು ಉಪಸ್ಥಿತರಿದ್ದರು .

Comments are closed.