ಕರಾವಳಿ

ನಾರಾಯಣಾಸ್ತ್ರ – ಕೊರೊನಾಸ್ತ್ರ : ಕೊರೊನಾ ವಿರುದ್ಧ ಜನಜಾಗೃತಿ ಯಕ್ಷಗಾನ ತಾಳಮದ್ದಳೆ

Pinterest LinkedIn Tumblr

ಮಂಗಳೂರು: ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಸೋಂಕಿನಿಂದ ಪಾರಾಗಲು ಮುನ್ನೆಚ್ಚರಿಕೆಯ ಸಂದೇಶಗಳು ವಿವಿಧ ಮಾಧ್ಯಮಗಳಲ್ಲಿ ನಿರಂತರ ಹರಿದಾಡುತ್ತಿವೆ.

ಇದಕ್ಕೆ ಯಕ್ಷಗಾನವೂ ಹೊರತಾಗಿಲ್ಲ. ಈ ಹಿಂದೆ ಘೋರ ಮಾರಕ, ಗುನ್ಯಾಸುರ ವಧೆ, ಸಾವಯವ ವಿಜಯ ಮೊದಲಾದ ಜನಜಾಗೃತಿ ಯಕ್ಷಗಾನಗಳನ್ನು ನೀಡಿದ ಕಲಾವಿದರ ತಂಡ ಇದೀಗ ಕೋವಿಡ್-19 ‘ಕೊರೊನಾ’ ಸಾಂಕ್ರಾಮಿಕ ರೋಗದ ವಿರುದ್ಧ ಜಾಗೃತಿ ಸಂದೇಶ ನೀಡುವ ವಿಶೇಷ ಯಕ್ಷಗಾನ ತಾಳಮದ್ದಳೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸುತ್ತಿದೆ.

ಮಹಾಭಾರತ ಯುದ್ಧದಲ್ಲಿ ದ್ರೋಣ ವಧೆಯಾದ ಬಳಿಕ ಕುಪಿತನಾದ ಅಶ್ವತ್ಥಾಮನು ಮಾರಣಾಂತಿಕ ನಾರಾಯಣಾಸ್ತ್ರ ಪ್ರಯೋಗ ಮಾಡಿದಾಗ ಶ್ರೀಕೃಷ್ಣನ ಮುನ್ನೆಚ್ಚರಿಕೆಯಂತೆ ಪಾಂಡವರು ಆ ಮಹಾಸ್ತ್ರಕ್ಕೆ ಶರಣಾಗಿ ಜೀವ ಉಳಿಸಿಕೊಂಡ ಘಟನೆಗೆ ಸಂವಾದಿಯಾಗಿ *’ನಾರಾಯಣಾಸ್ತ್ರ – ಕೊರೊನಾಸ್ತ್ರ’* ಎಂಬ ಪ್ರಸಂಗವನ್ನು ಹೆಣೆಯಲಾಗಿದೆ.

ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಕಥಾ ಸಂಯೋಜನೆಗೆ ಡಾ.ದಿನಕರ ಎಸ್. ಪಚ್ಚನಾಡಿ ಹಾಡುಗಳನ್ನು ರಚಿಸಿದ್ದಾರೆ. ಕಾರ್ಯಕ್ರಮವನ್ನು ನಿರ್ಮಿಸಿ ಪ್ರಸ್ತುತ ಪಡಿಸಿದವರು ಪೊಸಕುರಲ್ ಸುದ್ದಿ ಮಾಧ್ಯಮದ ವಿದ್ಯಾಧರ ಶೆಟ್ಟಿ.

ಈ ಜನಜಾಗೃತಿ ಯಕ್ಷಗಾನ ತಾಳಮದ್ದಳೆಯಲ್ಲಿ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಲೇಖಕ – ಅರ್ಥದಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಪ್ರಮುಖ ಪಾತ್ರವಹಿಸಿದ್ದಾರೆ.

ಅಲ್ಲದೆ ಡಾ.ದಿನಕರ ಎಸ್. ಪಚ್ಚನಾಡಿ, ಸದಾಶಿವ ಆಳ್ವ ತಲಪಾಡಿ, ವಿದ್ಯಾಧರ ಶೆಟ್ಟಿ, ಪ್ರಶಾಂತ ಸಿ.ಕೆ. ಅವರೂ ಅರ್ಥಧಾರಿಗಳಾಗಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ದೇವಿಪ್ರಸಾದ ಆಳ್ವ ತಲಪಾಡಿ ಹಾಗೂ ಚಂಡೆ-ಮದ್ದಳೆಯಲ್ಲಿ ರೋಹಿತ್ ಉಚ್ಚಿಲ್ ಮತ್ತು ರಾಜೇಶ್ ಜೆಪ್ಪು ಕುಡುಪಾಡಿ ಸಹಕರಿಸಿದ್ದಾರೆ. ಚಿತ್ರೀಕರಣ ಶಿವಶಂಕರ್ ಮತ್ತು ಧನುಶ್ ಪೊಸಕುರಲ್. ಧ್ವನಿ-ಬೆಳಕು ಎಡ್ವರ್ಡ್ ಲೋಬೋ ತೊಕ್ಕೊಟ್ಟು ಮತ್ತು ಕೃತಿ ಸೌಂಡ್ಸ್ ; ಸ್ಥಳಾವಕಾಶ ಬಾಲಕೃಷ್ಣ ಮಂದಿರ ಕುಂಪಲ.

ಲಾಕ್ಡೌನ್ ಅವಧಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ನಿರ್ಮಿಸಲಾಗಿರುವ ಈ ಕಾರ್ಯಕ್ರಮ ತೊಕ್ಕೊಟ್ಟಿನ ಪೊಸಕುರಲ್ ಸುದ್ದಿವಾಹಿನಿ, ಮಂಗಳೂರಿನ ರೇಡಿಯೋ ಸಾರಂಗ್ ಸಮುದಾಯ ಬಾನುಲಿ ಹಾಗೂ ಯೂಟ್ಯೂಬ್ ,ಫೇಸ್ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿದೆ.

Comments are closed.