ಕುಂದಾಪುರ: ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಉಡುಪಿ ಡಿಸಿಐಬಿ ಇನ್ಸ್ಪೆಕ್ಟರ್ ಮಂಜಪ್ಪ ಡಿ.ಆರ್. ಅವರಿಗೆ ಸಿಕ್ಕ ಖಚಿತ ವರ್ತಮಾನದಂತೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕುಂದಾಪುರ ತಾಲೂಕಿನ ವಕ್ವಾಡಿ ಜನತಾ ಕಾಲನಿಯಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ.
ವಕ್ವಾಡಿ ಜನತಾ ಕಾಲನಿ ನಿವಾಸಿಗಳಾದ ಮೊಹಮ್ಮದ್ ಹನೀಪ್ (45), ಅಶ್ರಪ್ (29), ಬಂಧಿತ ಆರೋಪಿಗಳು. ಮೊಹಮ್ಮದ್ ಆಸೀಪ್ ಹಾಗು ಇಲಿಯಾಸ್ ಎಂಬಿಬ್ಬರು ಪರಾರಿಯಾಗಿದ್ದಾರೆ.
ವಕ್ವಾಡಿ ಗ್ರಾಮದ ಜನತಾ ಕಾಲನಿ ಮೊಹಮ್ಮದ್ ಹನೀಪ್ ಎಂಬುವವರ ಮನೆಯ ಬಳಿ ಇರುವ ಶೆಡ್ ನಲ್ಲಿ ಮೊಹಮ್ಮದ್ ಹನೀಪ್ರು ಬೇರೆಯವರೊಂದಿಗೆ ಸೇರಿಕೊಂಡು ಗಾಂಜಾ ಸೇವನೆ ಮಾಡುತ್ತಿರುವುದಾಗಿ ಹಾಗೂ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಡಿಸಿಐಬಿ ಇನ್ಸ್ಪೆಕ್ಟರ್ ಮತ್ತು ತಂಡ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. ಹನೀಪ್ ಮನೆಯ ಬಳಿ ಹಾಳು ಬಿದ್ದಿರುವ ಮೇಲ್ಚಾವಣೆ ಇಲ್ಲದ ಖಾಲಿ ಶೆಡ್ ಒಳಗಡೆ 4 ಜನರು ಸುತ್ತುವರಿದು ಕುಳಿತುಕೊಂಡಿದ್ದು ಹನೀಪ್ ಮತ್ತು ಅಶ್ರಪ್ ಎನ್ನುವರನ್ನು ಬಂಧಿಸಲಾಗಿದೆ. ಇಬ್ಬರು ಪರಾರಿಯಾಗಿದ್ದಾರೆ. ಆರೋಪಿಗಳೆಲ್ಲರೂ ಗಾಂಜಾ ಸೇವನೆ ಮಾಡಿದ್ದಲ್ಲದೇ ಗಾಂಜಾವನ್ನು ಮಾರಾಟ ಮಾಡುತ್ತಿರುವುದು ತಿಳಿದುಬಂದಿದ್ದು ಗಾಂಜಾವನ್ನು ಮೊಹಮ್ಮದ್ ಆಸೀಪ್ ಮತ್ತು ಇಲಿಯಾಸ್ರವರು ತೆಗೆದುಕೊಂಡು ಬಂದಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಬಂಧಿತ ಆರೋಪಿಗಳಿಂದ 610 ಗ್ರಾಂ ತೂಕದ ಗಾಂಜಾವನ್ನು ಸ್ವಾಧಿನಪಡಿಸಿಕೊಂಡಿದ್ದು ಗಾಂಜಾದ ಮೌಲ್ಯ 20 ಸಾವಿರ ರೂ. ಆಗಿದೆ. ಅಲ್ಲದೇ ಸ್ಯಾಮ್ ಸಂಗ್ ಕಂಪೆನಿಯ ಮೊಬೈಲ್-1, ಕಂದು ಬಣ್ಣದ ಬ್ಯಾಗ್, ಅದರೊಳಗಿದ್ದ 80 ಚಿಕ್ಕ ಚಿಕ್ಕ ಪ್ಲಾಸ್ಟಿಕ್ ತೊಟ್ಟೆ, ಮ್ಯಾಜಿಕ್ ಪೋರ್ಟ್ ವೈನ್ ಬಾಟಲಿ ಹಾಗೂ ಅದಕ್ಕೆ ಅಳವಡಿಸಿದ ಪೈಪ್ನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿದೆ.
Comments are closed.