ಕರಾವಳಿ

ಬ್ರಹ್ಮಕಲಶೋತ್ಸವ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವೈಭವದ ರಥೋತ್ಸವ

Pinterest LinkedIn Tumblr

ಮಂಗಳೂರು, ಜನವರಿ.31 : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ರಾತ್ರಿ ರಥೋತ್ಸವ ನಡೆಯಿತು.

ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವ ಮಹಾಮಾತೆ, ಜಗವನ್ನೇ ಪೊರೆಯುವ ಮಹಾಮಾತೆ, ಶಿಷ್ಟರ ರಕ್ಷಕಿ- ದುಷ್ಟ ಸಂಹಾರಿ, ಬೇಡಿದ ಭಕ್ತರ ಮನದಾಸೆ ಪೂರೈ ಸುವ ಕಾರುಣ್ಯನಿಧಿ; ನಂದಿನಿ ನದಿಯ ಮಡಿಲಲ್ಲಿ ಪವಡಿಸಿದ ಸಾವಿರ ಸೀಮೆಯ ಆದಿಮಾಯೆ, ಭ್ರಾಮರಿ ಅವತಾರಿಣಿ ಕಟೀಲಿನ ಶ್ರೀ ದುರ್ಗಾಪರಮೇಶ್ವರಿಗೆ ಗುರುವಾರ ಪರಮ ಪವಿತ್ರ ಬ್ರಹ್ಮ ಕಲಶೋತ್ಸವ ವೈಭವದಿಂದ ನೆರವೇರಿತು.

ಸಾವಿರ ಸೀಮೆಯ ಆದಿ ಮಾಯೆಗೆ ನಡೆದ ಬ್ರಹ್ಮಕಲಶದ ಪುಣ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಸೇರಿದ ಭ್ರಮರಾಂಬಿಕೆಯ ಭಕ್ತ ಸಮೂಹ ಭಕ್ತಿಭಾವದಿಂದ ಪುನೀತರಾದರು. ಸೂರ್ಯೋದಯಕ್ಕೆ ಮುನ್ನವೇ ವೈದಿಕ ವಿಧಿ ವಿಧಾನಗಳು ಆರಂಭವಾದವು. ಹಲವು ಭಕ್ತರು ನೇರವಾಗಿ ವೀಕ್ಷಿಸಿದರೆ, ಲಕ್ಷಾಂತರ ಮಂದಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಎಲ್‌ಇಡಿ ಪರದೆ ಮೂಲಕ ಕಣ್ತುಂಬಿಕೊಂಡರು.

ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ಆಚಾರ್ಯತ್ವ, ಶಿಬರೂರು ಕೃಷ್ಣರಾಜ ತಂತ್ರಿಗಳ ಸಹಯೋಗದೊಂದಿಗೆ ವಿಧಿವಿಧಾನಗಳು ನೆರವೇರಿದವು. ಬ್ರಹ್ಮಕಲಶೋತ್ಸವದ ಬಳಿಕ ಸಾವಿರಾರು ಭಕ್ತರು ಸರತಿಯಲ್ಲಿ ನಿಂತು ಶ್ರೀ ದೇವಿಯ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ರಾತ್ರಿ ರಥೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಸಹಸ್ರರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ನಾಳೆ ನಾಗಮಂಡಲ; ರವಿವಾರ ಕೋಟಿ ಜಪ ಯಜ್ಞ

ಕಟೀಲಿನಲ್ಲಿ ಜ.31ರಂದು ವಿವಿಧ ವೈದಿಕ-ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.1ರಂದು ಭ್ರಾಮರೀ ವನದಲ್ಲಿ ಸಂಜೆ 7ರಿಂದ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ, ಮದ್ದೂರು ಶ್ರೀ ಕೃಷ್ಣಪ್ರಸಾದ ವೈದ್ಯ ಬಳಗದವರ ಸಹಭಾಗಿತ್ವದಲ್ಲಿ ನಾಗಮಂಡಲೋತ್ಸವ ನಡೆಯಲಿದೆ.

ಫೆ. 2ರಂದು ಭ್ರಾಮರಿ ವನದಲ್ಲಿ ಬೆಳಗ್ಗೆ ಕೋಟಿ ಜಪಯಜ್ಞ ಆರಂಭವಾಗಿ ಸಂಜೆ ಪರಿಸಮಾಪ್ತಿಯಾಗಲಿದೆ. ಫೆ.3ರಂದು ಭ್ರಾಮರಿ ವನದಲ್ಲಿ ಮುಂಜಾನೆ 7ರಿಂದ ಸಹಸ್ರಚಂಡಿಕಾಯಾಗ ನಡೆಯಲಿದೆ.

Comments are closed.