ಮಂಗಳೂರುಜನವರಿ.27: ಬಿಜೆಪಿ ದೇಶದ ರಕ್ಷಣೆಗೆ ಕೆಲಸ ಮಾಡುತ್ತಿದೆ.ಆದರೆ ಸಿಎಎ ಕಾಯ್ದೆಯ ಕುರಿತಂತೆ ಕಾಂಗ್ರೆಸ್ ಗೊಂದಲದ ವಾತಾವರಣವನ್ನು ನಿರ್ಮಿಸಿದ್ದು, ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮಂಗಳೂರಿನ ಬಂಗ್ರಕೂಳೂರಿನ ಗೋಲ್ಡ್ಪಿಂಚ್ ಮೈದಾನದಲ್ಲಿ ಇಂದು ಹಮ್ಮಿಕೊಳ್ಳಲಾದ ಕೇಂದ್ರ ಸರಕಾರದ ಸಿಎಎ ಪರ ಬೃಹತ್ ಜಾಗೃತಿ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಯಾವುದೇ ವಿಪಕ್ಷಗಳು ತಮ್ಮ ಪಕ್ಷ ಧರ್ಮವನ್ನು ನಿಭಾಯಿಸುವುದಕ್ಕಾಗಿ ರಾಷ್ಟ್ರ ಧರ್ಮವನ್ನು ಮರೆಯಬಾರದು. ಮಹಾತ್ಮ ಗಾಂಧಿಯವರೇ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಹಾಗೂ ಕಾಂಗ್ರೆಸ್ ನಾಯಕರಿಗೆ, ಪಾಕಿಸ್ತಾನದ ಅಲ್ಪಸಂಖ್ಯಾತರು ದೌರ್ಜನ್ಯಕ್ಕೊಳಗಾಗಿ ಆಶ್ರಯ ಕೋರಿದಾಗ ಅವರಿಗೆ ಪೌರತ್ವ ನೀಡುವಂತೆ ಹೇಳಿದ್ದರು. ಅದನ್ನೇ ನಾವು ಮಾಡಿದ್ದೇವೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯದ ಸಂದರ್ಭ ದೇಶ ವಿಭಜನೆಗೊಂಡಾಗ ಪೂರ್ವ ಪಾಕಿಸ್ತಾನದ ಹಿಂದೂಗಳು ಕಾರಣಾಂತರಗಳಿಂದ ಅಲ್ಲೇ ಉಳಿಯಬೇಕಾಯಿತು. ವಾಜಪೇಯಿಯವರು ಪ್ರಧಾನಿ ಆಗಿದ್ದ ವೇಳೆ ಅಡ್ವಾಣಿಯವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಡಾ. ಮನಮೋಹನ್ ಸಿಂಗ್ ಅವರು ಕೂಡಾ ರಾಜ್ಯ ಸಭೆಯಲ್ಲಿ ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನದ ಅಲ್ಪಸಂಖ್ಯಾತರ ಬಗ್ಗೆ ಸಂವೇದನಶೀಲತೆಯಿಂದ ವರ್ತಿಸುವ ಅಗತ್ಯವಿದೆ ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಮಹಾತ್ಮ ಗಾಂಧಿಯವರು ಹೇಳಿದ್ದನ್ನೇ ಪ್ರಧಾನಿ ನರೇಂದ್ರ ಮೋದಿ ಸರಕಾರ ಮಾಡಿದ್ದು, ನಮ್ಮ ಮೇಲೆ ಬೆರಳು ತೋರಿಸುವುದೇಕೆ ಎಂದವರು ವಿಪಕ್ಷವನ್ನು ಪ್ರಶ್ನಿಸಿದರು.
ಎನ್ಆರ್ಸಿ ಬಗ್ಗೆ ಇವಾಗ ಏನೂ ಚರ್ಚೆಯಾಗಿಲ್ಲ. ಆದರೆ ದೇಶದ ಮುಸ್ಲಿಮರಲ್ಲಿ ಭಯ ಮೂಡಿಸಲಾಗುತ್ತಿದೆ. ಭಾರತದ ಮುಸ್ಲಿಮರಿಗೆ ಯಾರೂ ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಮುಸ್ಲಿಮರೇ ಕೇಂದ್ರ ಸರ್ಕಾರ ನಿಮಗೆ ರಕ್ಷಣೆ ನೀಡುತ್ತದೆ. ನಮ್ಮದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಆಗಿದೆ. ಪೌರತ್ವ ಕಾಯ್ದೆಯಿಂದ ದೇಶದ ಜನರಿಗೆ ಏನೂ ತೊಂದರೆ ಆಗುವುದಿಲ್ಲ. ಉತ್ತಮ ಕೆಲಸ ಮಾಡುವುದನ್ನು ಯಾರಿಂದಲೂ ತಡೆಯಲಾಗದು. ನಮಗೆ ಜಯ ಸಿಗಲಿದೆ. ವಿಶ್ವದ ಯಾವುದೇ ತಾಕತ್ತಿನಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಹಿಂದೂ – ಮುಸಲ್ಮಾನರ ನಡುವೆ ಬೇಧಭಾವ ಸೃಷ್ಟಿಸುವ ಕೆಲಸವನ್ನು ಕೆಲ ಶಕ್ತಿಗಳಿಂದ ನಡೆಸುತ್ತಿವೆ. ಇದರಲ್ಲಿ ವಿದೇಶಿಯರ ಕೈವಾಡವೂ ಇರಬಹುದು. ಸ್ವಾತಂತ್ರಕ್ಕಾಗಿ ನಾವು ಒಗ್ಗಟ್ಟಾಗಿ ಹೋರಾಡಿದ್ದೇವೆ. ಭಾರತ ಜಾತ್ಯತೀತ, ಧರ್ಮ ನಿರಾಪೇಕ್ಷ ರಾಷ್ಟ್ರ. ಇದನ್ನು ಸ್ವಾಮಿ ವಿವೇಕಾನಂದರು 1893ರಲ್ಲಿ ಚಿಕಾಗೋ ವಿಶ್ವ ಸಮ್ಮೇಳನದಲ್ಲಿ ಸ್ಪಷ್ಟಪಡಿಸಿದ್ದಾರೆ. ನಮ್ಮ ಯಾವುದೇ ಮುಸಲ್ಮಾನರಿಗೆ ಈ ಕಾನೂನಿನಿಂದ ತೊಂದರೆ ಆಗುತ್ತದೆ ಎಂದಾದರೆ ಬಿಜೆಪಿ ಪಕ್ಷ ಅವರ ಜತೆಗೆ ನಿಲ್ಲಲಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ಧ್ವಜ ಇರಬಾರದು. ಭಾರತಕ್ಕೆ ಇರುವುದು ಒಂದೇ ತ್ರಿವರ್ಣ ಧ್ವಜ. ಪೌರತ್ವ ತಿದ್ದುಪಡಿ ಕಾಯ್ದೆ ಮಹಾತ್ಮ ಗಾಂಧಿ ಕನಸಾಗಿತ್ತು. ಗಾಂಧಿ ಕನಸನ್ನು ಬಿಜೆಪಿ ಪೂರೈಸಿದೆ.ನಾವು ಪ್ರಣಾಳಿಕೆಯಲ್ಲಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ರಾಮಮಂದಿರ ನಿರ್ಮಾಣ, ಜಮ್ಮು ಕಾಶ್ಮೀರದ 370 ವಿಧಿ ರದ್ದತಿ ಮಾಡಿದ್ದೇವೆ. ಶೀಘ್ರವೇ ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಿಸಲಿದ್ದೇವೆ, ನೀವು ಇನ್ನು ಪ್ರಾರ್ಥನೆ ಸಲ್ಲಿಸಬಹುದು. ಈ ಹಿಂದೆ ತಲಾಖ್ ಮೂಲಕ ಮುಸ್ಲಿಂ ಹೆಣ್ಮಕ್ಕಳು ತೊಂದರೆ ಅನುಭವಿಸುತ್ತಿದ್ದರು. ನಾವು ಅಧಿಕಾರಕ್ಕೆ ಬಂದ ನಂತರ ತ್ರಿಪಲ್ ತಲಾಖ್ ರದ್ದು ಮಾಡಿದ್ದೇವೆ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದರು.
ಸಿಎಎ ನೆರೆಯ ಮುಸ್ಲಿಂ ಧರ್ಮಾಧಾರಿತ ರಾಷ್ಟ್ರಗಳಲ್ಲಿ ಸಂಕಷ್ಟವನ್ನು ಅನುಭವಿಸಿರುವ ಅಲ್ಪಸಂಖ್ಯಾತರಿಗೆ ಧಾರ್ಮಿಕ ಭಾವನೆಯ ಸುರಕ್ಷೆಯನ್ನು ನೀಡುವುದಾಗಿದೆಯೇ ಹೊರತು ಯಾವುದೇ ಧರ್ಮದ ಬಗ್ಗೆ ದ್ವೇಷ ಸಾಧಿಸುವುದಲ್ಲ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಪೀಡನೆ ಅನುಭವಿಸಿ ಭಾರತಕ್ಕೆ ಬಂದಾಗ ಅವರಿಗೆ ಗೌರವದ ಬದುಕನ್ನು ನೀಡಬೇಕೆಂಬ ನಿಟ್ಟಿನಲ್ಲಿ ಈ ಕಾನೂನು ಮಾಡಲಾಗಿದೆ. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನದ ಮುಸ್ಲಿಮರಿಗೆ ಯಾಕೆ ಪೌರತ್ವ ನೀಡುವುದಿಲ್ಲ ಎಂದು ಕೇಳಲಾಗುತ್ತಿದೆ. ಅದಕ್ಕೆ ಕಾರಣ ಅದು ಜಾತ್ಯತೀತ ರಾಷ್ಟ್ರಗಳಲ್ಲ. ಅವುಗಳು ಮುಸ್ಲಿಂ ಧರ್ಮವನ್ನು ಪಾಲಿಸುವ ರಾಷ್ಟ್ರಗಳು. ಹಾಗಾಗಿ ಅಲ್ಲಿ ಮುಸ್ಲಿಮರಿಗೆ ದೌರ್ಜನ್ಯ ಆಗಲು ಸಾಧ್ಯವಿಲ್ಲ. ಹಾಗಿದ್ದರೂ ಅಲ್ಲಿಂದ ವೀಸಾ ಹೊಂದಿರುವ ಮುಸ್ಲಿಮರಿಗೂ ಪೌರತ್ವ ಸಿಗಲಿದೆ. ಕಳೆದ ಆರು ವರ್ಷಗಳಲ್ಲಿ 600 ಮಂದಿ ಮುಸ್ಲಿಮರಿಗೆ ಪೌರತ್ವ ನೀಡಲಾಗಿದೆ ಎಂದು ರಾಜನಾಥ್ ಸಿಂಗ್ ಉಲ್ಲೇಖಿಸಿದರು.
ಸಮವೇಶದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಹಾಗೂ ದ.ಕ.ಜಿಲ್ಲೆಯ ಒಂದು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಪೊಲೀಸರು ವಿಶೇಷ ಬಂದೋಬಸ್ತ್ ಕೈಗೊಂಡಿದ್ದರು. ಕಾರ್ಯಕ್ರಮ ನಿಗದಿಯಾದ ಸಮಯದಲ್ಲಿ ಶಾಂತಿಯುತವಾಗಿ ನಡೆಯಿತು.
Comments are closed.