ಕರಾವಳಿ

ಮದುವೆಯಂದೇ ವಧು ನಾಪತ್ತೆ: ಮುರಿದು ಬಿದ್ದ ಮದುವೆ; ಪ್ರಿಯಕರನೊಂದಿಗೆ ಮದುವೆಯಾಗಿ ಬಂದ ಯುವತಿ!

Pinterest LinkedIn Tumblr

ಕುಂದಾಪುರ: ಎರಡು ಕುಟುಂಬದವರು ಸೇರಿ ನಿಶ್ಚಯ ಮಾಡಿದ ಮದುವೆ ದಿಕ್ಕರಿಸಿ ಮದುವೆ ದಿನವೇ ಮನೆಯಿಂದ ಯುವತಿಯೊಬ್ಬಳು ನಾಪತ್ತೆಯಾದ್ದರಿಂದ ಮದುವೆ ಮುರಿದು ಬಿದ್ದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಮದುವೆ ಧಿಕ್ಕರಿಸಿ ನಾಪತ್ತೆಯಾದ ಮರವಂತೆಯ ಯುವತಿಯೋರ್ವಳು ಪ್ರಿಯಕರನ ಕೈಹಿಡಿದು ಪ್ರತ್ಯಕ್ಷವಾಗಿದ್ದಾಳೆ.

ತ್ರಾಸಿಯ ಸಭಾಭವನದಲ್ಲಿ ಮರವಂತೆಯ ಯುವತಿ ಹಾಗೂ ತ್ರಾಸಿ ಮೂಲದ ಯುವಕನ ಹೆತ್ತವರು ಹಾಗೂ ಸಂಬಂಧಿಕರೆಲ್ಲ ಸೇರಿ ಗೊತ್ತುಪಡಿಸಿದ ಹುಡುಗನೊಂದಿಗೆ ಹಸೆಮಣೆ ಏರಬೇಕಿದ್ದ ವಧುವೊಬ್ಬಳು ಬೆಳ್ಳಂಬೆಳ್ಳಗ್ಗೆ ಗಂಗೊಳ್ಳಿ ಮೂಲದ ಸದ್ಯ ತೆಕ್ಕಟ್ಟೆ ಆಸುಪಾಸಿನ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಇದನ್ನರಿಯದ ವಧುವಾಗಬೇಕಿದ್ದ ‌ಯುವಕ ಹಾಗೂ‌ ಮನೆಯವರು ದಿಬ್ಬಣ ಸಮೇತ ಮದುವೆ ಮಂಟಪಕ್ಕೆ ಬಂದಿದ್ದು ಇತ್ತ ವಧು‌‌ ಮಾತ್ರ ಮನೆಯಲ್ಲೇ ಇರಲಿಲ್ಲ. ಏನೋ‌ ಆಗಬಾರದ್ದಾಗಿದೆ ಎಂದು ತಿಳಿಯುತ್ತಲೇ ಯುವತಿ ಪೋಷಕರು ಗಂಗೊಳ್ಳಿ ಪೊಲೀಸ್ ಠಾಣೆಗೆ ದೌಡಾಯಿಸಿ‌ ಮಗಳ ನಾಪತ್ತೆ ಬಗ್ಗೆ ದೂರು ನೀಡಿದ್ದಾರೆ.

ಮದುವೆಯಾಗಿ ಪ್ರತ್ಯಕ್ಷವಾದ ವಧು!
ಗಂಗೊಳ್ಳಿ‌ ಠಾಣೆಗೆ ಯುವತಿಯು ಮದುವೆಯಾಗಿ ತನ್ನ ಪತಿಯ ಜೊತೆ ಬಂದಿದ್ದಾರೆ. ನಾಪತ್ತೆ ಪ್ರಕರಣದ ದೂರಿಗೆ ಹೇಳಿಕೆ ನೀಡಿದ ಆಕೆಯು, ತಾನು ಪ್ರೀತಿಸುತ್ತಿದ್ದ ಯುವಕನ ಜೊತೆಗೆ ಮದುವೆಯಾಗಿದ್ದೇನೆ. ಇದು ನಮ್ಮಿಬ್ಬರ ಸ್ವ ಇಚ್ಚೆ ಮದುವೆ. ನಾವು ವಿವಾಹ ನೋಂದಣಿ ಮಾಡಿಸಿದ್ದೇವೆಂದು ತಿಳಿಸಿದ್ದಾರೆ.

ಇನ್ನು ಇಂದು‌ ಮದುವೆಯಾಗಬೇಕಿದ್ದ ಯುವತಿ ಹಾಗೂ ಯುವಕನಿಗೆ ಈ ಹಿಂದೆ ಪರಿಚಯವೂ ಇದ್ದಿದ್ದು ಈ ಹಿನ್ನೆಲೆಯೇ ಇಬ್ಬರ ಕುಟುಂಬಿಕರು ಮದುವೆ ನಿಶ್ಚಯ ಮಾಡಿದ್ದರು ಎನ್ನಲಾಗುತ್ತಿದೆ. ಆದರೆ ತನಗೆ ಇನ್ನೊಬ್ಬನ ಮೇಲೆ ಪ್ರೀತಿಯಿದ್ದು ಆತನನ್ನೇ ವರಿಸುತ್ತೇನೆಂದು ಯುವತಿ ಕೊನೆಯ ಕ್ಷಣದವರೆಗೂ ಹೇಳದೆ ಮದುವೆ ‌ದಿನ ನಾಪತ್ತೆಯಾಗಿ ಸಮಸ್ಯೆ ಸೃಷ್ಟಿಸಿದ್ದು ಎಷ್ಟು ಸರಿ‌ ಎಂಬುದು ಜನರ ಪ್ರಶ್ನೆಯಾಗಿದೆ.

Comments are closed.