ಕರಾವಳಿ

ವಿಧಾನಸಭಾ ಚುನಾವಣೆಯ ಎಲ್ಲ 15 ಸ್ಥಾನಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು

Pinterest LinkedIn Tumblr

ಮಂಗಳೂರು: ರಾಜ್ಯದಲ್ಲಿ ಪರಿವರ್ತನೆ ಗಾಳಿ ಬೀಸುತ್ತಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾಜನತೆ ಅಭೂತಪೂರ್ವ ಆಶೀರ್ವಾದ ಮಾಡಿದ್ದಾರೆ. ಪಕ್ಷದ ಮೇಲೆ ಇನ್ನಷ್ಟು ಜವಾಬ್ದಾರಿಯನ್ನು ಹೊರಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಎಲ್ಲ 15 ಸ್ಥಾನಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ. ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರ ಇನ್ನಷ್ಟು ಭದ್ರವಾಗುತ್ತದೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ಕಟೀಲು ಹೇಳಿದರು.

ನಗರದ ಕದ್ರಿ ಮೈದಾನದಲ್ಲಿ ಶನಿವಾರ ಸಂಜೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಗಳಿಸಿದ ಪಕ್ಷದ ಜನಪ್ರತಿ ನಿಧಿಗಳ ಅಭಿನಂದನೆ ಸಭೆ ಹಾಗೂ ವಿಜಯೋತ್ಸವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮುಂದಿನ ಐದು ವರ್ಷಗಳಿಗೆ ಬಿಜೆಪಿ ಆಡಳಿತ ನಡೆಸುವ ನಿಟ್ಟಿನಲ್ಲಿ ಜನತೆ ಅಭೂತಪೂರ್ವವಾದ ಆಶೀರ್ವಾದ ಮಾಡಿದ್ದಾರೆ.ಜನತೆಯ ಈ ಆಶೀರ್ವಾದವನ್ನು ಜನಪರ ಆಡಳಿತವಾಗಿ ಪರಿವರ್ತಿಸುತ್ತೇವೆ. ಜನತೆ ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯವೆಸಗುತ್ತೇವೆ. ಇಂದು ಆಯೋಜನೆಗೊಂಡಿರುವುದು ಅಭಿನಂದನಾ ಸಮಾರಂಭವಲ್ಲ. ಚುನಾಯಿತರು ಮುಂದಿನ ಅಭಿವೃದ್ಧಿಗೆ ಪ್ರತಿಜ್ಞೆ ಕೈಗೊಳ್ಳುವ ಸಭೆ ಎಂದು ಹೇಳಿದರು.

ಕಾಂಗ್ರೆಸ್‌ನ ಕೆಟ್ಟ ರಾಜಕಾರಣಕ್ಕೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್‌ ಮೀಸಲಾತಿಯಲ್ಲಿ ರಾಜಕಾರಣ ಮಾಡಿತು. ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಹಾಗೂ ಅದರಲ್ಲಿ ದುಡಿದವರನ್ನು ಕೆಟ್ಟದಾಗಿ ನಡೆಸಿಕೊಂಡಿತು. ಪೂಜಾರಿ ಅವರ ಶಾಪ ನಮಗೆ ವರದಾನವಾಗಿ ಪರಿಣಮಿಸಿತು ಎಂದು ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಜಿಲ್ಲಾ ಉಸ್ತವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಪಕ್ಷ ಸಂಘಟಿಸುವಲ್ಲಿ ಯಡಿಯೂರಪ್ಪ-ನಳಿನ್‌ ಕುಮಾರ್‌ ಜೋಡೆತ್ತುಗಳಂತೆ ಕೆಲಸ ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ವೇದವ್ಯಾಸ ಕಾಮತ್ ಹಾಗೂ ಡಾ| ಭರತ್‌ ಶೆಟ್ಟಿ ಜೋಡೆತ್ತುಗಳಂತೆ ಕಾರ್ಯನಿರ್ವಹಿಸಿ ಮನಪಾದಲ್ಲಿ ಪಕ್ಷಕ್ಕೆ ಭಾರೀ ಗೆಲುವು ದೊರಕಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಶಾಸಕ ವೇದವ್ಯಾಸ ಕಾಮತ್‌ ಪ್ರಸ್ತಾವನೆಗೈದು ಮನಪಾದ ಇತಿಹಾಸದಲ್ಲಿ ಹಿಂದೆಂದೂ ಯಾವುದೇ ಪಕ್ಷಕ್ಕೆ ದೊರಕದ ಅಭೂತಪೂರ್ವ ಗೆಲುವು ಬಿಜೆಪಿಗೆ ಲಭಿಸಿದೆ. ಇದಕ್ಕೆ ಕಾರಣರಾದ ಮತದಾರರು ಹಾಗೂ ಕಾರ್ಯಕರ್ತ ದೇವರುಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.ಜನತೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮನಪಾ ಚುನಾವಣೆಯಲ್ಲಿ ಅಯ್ಕೆಯಾದ ನೂತನ ಸದಸ್ಯರನ್ನು ಹಾಗೂ ಚುನಾವಣೆಯಲ್ಲಿ ಪರಭವಗೊಂಡ ಅಭ್ಯರ್ಥಿಗಳನ್ನು ಗೌರವಿಸಲಾಯಿತು. ಇದೇ ವೇಳೆ ಕಾಂಗ್ರೆಸ್‌ನ ನಿಕಟಪೂರ್ವ ಕಾರ್ಪೊರೇಟರ್ ರಾಧಾಕೃಷ್ಣ, ಮಾಜಿ ಮೇಯರ್ ಪುರಂದರ ದಾಸ್, ಹಾಗೂ ಯುವ ಕಾಂಗ್ರೆಸ್ ನ ಮಾಜಿ ಜಿಲ್ಲಾಧ್ಯಕ್ಷ ಅರುಣ್ ಕುವೆಲ್ಲೋ ಬಿಜೆಪಿ ಸೇರ್ಪಡೆಗೊಂಡರು.

ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು.

ಶಾಸಕರಾದ ರಾಜೇಶ್‌ ನ್ಯಾಕ್‌, ಉಮಾನಾಥ ಕೋಟ್ಯಾನ್‌, ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿ , ಕೃಷ್ಣ ಪಾಲೆಮಾರ್‌, ಮಾಜಿ ಶಾಸಕರಾದ ಎನ್‌. ಯೋಗೀಶ್‌ ಭಟ್‌, ಪದ್ಮನಾಭ ಕೊಟ್ಟಾರಿ, ವಿಧಾನಪರಿಷತ್‌ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ, ಬಾಲಕೃಷ್ಣ ಭಟ್‌, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಪ್ರಭಾರಿಗಳಾದ ಉದಯ ಕುಮಾರ್‌ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಮುಖಂಡರಾದ ನಿತಿನ್‌ ಕುಮಾರ್‌, ರವಿಶಂಕರ ಮಿಜಾರು, ಕಿಶೋರ್‌ ರೈ, ಕ್ಯಾ| ಬೃಜೇಶ್‌ ಚೌಟ, ಭಾಸ್ಕರಚಂದ್ರ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಸಕ ಡಾ| ಭರತ್‌ ಶೆಟ್ಟಿ ಸ್ವಾಗತಿಸಿದರು., ಸುದರ್ಶನ್‌ ಎಂ. ನಿರೂಪಿಸಿದರು.

Comments are closed.