ಮಂಗಳೂರು, ಅಕ್ಟೋಬರ್.14: ಶುಕ್ರವಾರ ಮುಂಜಾನೆ ನಿಧನರಾದ ಹಿರಿಯ ಸಂಗೀತ ಕಲಾವಿದ,ವಿಶ್ವ ಪ್ರಸಿದ್ದ ಸ್ಯಾಕ್ಸೋಪೋನ್ ವಾದಕ, ಪದ್ಮಶ್ರೀ ಪುರಸ್ಕೃತ ಡಾ. ಕದ್ರಿ ಗೋಪಾಲ್ನಾಥ್ರವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರಕ್ಕೂ ಮೊದಲು ಸಾರ್ವಜನಿಕ ಅಂತಿಮ ದರ್ಶನ ಇಂದು ಬೆಳಿಗ್ಗೆ 10ರಿಂದ ಮಧ್ನಾಹ್ನ 2 ಗಂಟೆಯವರೆಗೆ ಮಂಗಳೂರು ಮಿನಿ ಪುರಭವನದಲ್ಲಿ ನಡೆಯಿತು.
ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಮನಪಾ ಅಯುಕ್ತ ಶಾನಾಡಿ ಅಜಿತ್ ಹೆಗ್ಡೆ, ಪೊಲೀಸ್ ಕಮಿಷನರ್ ಡಾ. ಪಿ.ಎಸ್. ಹರ್ಷ, ಮಾಜಿ ಶಾಸಕ ಜೆ.ಆರ್.ಲೋಬೋ, ಮಾಜೀ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯ್ಲಿ, ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕಲ್ಕೂರಾ ಸೇರಿದಂತೆ. ಕಲಾವಿದರು, ಜನಪ್ರತಿನಿಧಿಗಳು, ಚೆನ್ನೈ ನಿಂದ ಬಂದಿದ್ದ ಶಿಷ್ಯರು ಅಗಲಿದ ಮಹಾನ್ ಕಲಾವಿದನ ಅಂತಿಮ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.
ಇದೇ ವೇಳೆ ಮಿನಿ ಪುರಭವನದ ವೇದಿಕೆಯಲ್ಲಿ ವಾದ್ಯ ಹಾಗೂ ಸಂಗೀತಗೋಷ್ಠಿಯ ಸ್ವರಾಂಜಲಿ ಕಾರ್ಯಕ್ರಮ ಕದ್ರಿ ಗೋಪಾಲನಾಥರ ಶಿಷ್ಯರು ಹಾಗೂ ಇತರರಿಂದ ನಡೆಯಿತು..ಅಂತಿಮ ದರ್ಶನಕ್ಕೆ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ಹುಟ್ಟೂರಿನಲ್ಲಿ ಕದ್ರಿ ಗೋಪಾಲನಾಥ್ ಅಂತ್ಯಸಂಸ್ಕಾರ:
ವಿಶ್ವ ಪ್ರಸಿದ್ದ ಸ್ಯಾಕ್ಸೋಫೋನ್ ವಾದಕ ಕದ್ರಿ ಶ್ರೀಗೋಪಾಲನಾಥ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ಇಂದು ಸಂಜೆ ಮೃತರ ಹುಟ್ಟೂರು ಬಂಟ್ವಾಳದ ಸಜಿಪ ಮಿತ್ತಮಜಲಿನಲ್ಲಿ ಸಕಲ ಸರಕಾರಿ ಮಾರ್ಯದೆಯೊಂದಿಗೆ ನಡೆಯಿತು. ಅಂತಿಮ ವಿಧಿವಿಧಾನವನ್ನು ಜೋಗಿ ಸಮುದಾಯದ ಸಂಪ್ರದಾಯದಂತೆಯೇ ನಡೆಸಲಾಯಿತು.
ಪದವಿನಂಗಡಿಯಿಂದ ಪುರಭವನಕ್ಕೆ ಅಂತಿಮ ಯಾತ್ರೆ:
ಇದಕ್ಕೂ ಮೊದಲು ಕದ್ರಿ ಗೋಪಾಲನಾಥ್ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ಮಂಗಳೂರಿನ ಪದವಿನಂಗಡಿ ದೇವಿಕಟ್ಟೆಯ ನಿವಾಸದಿಂದ ಸೋಮವಾರ ಬೆಳಿಗ್ಗೆ 9ಕ್ಕೆ ಹೊರಟು 9:45ಕ್ಕೆ ಮಿನಿ ಪುರಭವನದ ತಲುಪಿತು.
Comments are closed.