ಕರಾವಳಿ

ಡೆಂಗ್ಯೂ ಜ್ವರ ಭೀತಿ ಹಿನ್ನೆಲೆ : ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಲಾರ್ವಾ ಕರ್ಟೂನ್ ಸ್ಪರ್ಧೆ

Pinterest LinkedIn Tumblr

ಮಂಗಳೂರು ಆಗಸ್ಟ್ 7 : ಮಂಗಳೂರು ಪರಿಸರದಲ್ಲಿ ಡೆಂಗ್ಯೂ ಜ್ವರದ ಹರಡುವಿಕೆಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ವಿದ್ಯಾರ್ಥಿಗಳ ಮೂಲಕ ಸಾರ್ವಜನಿಕರಲ್ಲಿ ಅಗತ್ಯ ಅರಿವು ಮೂಡಿಸುವ ನಿಟ್ಟಿನಲ್ಲಿ ಮಂಗಳೂರು ದಕ್ಷಿಣ ವಲಯದ ಎಲ್ಲ ಶಾಲೆಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಂಗಳೂರು ದಕ್ಷಿಣ ವಲಯದ 114 ಪ್ರಾಥಮಿಕ ಶಾಲೆಗಳು ಹಾಗೂ 77 ಪ್ರೌಢಶಾಲೆಗಲ್ಲಿ ಲಾರ್ವಾ ಕರ್ಟೂನ್ ಸ್ಪರ್ಧೆಯನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಂದ ಸೃಜನಶೀಲ ಚಿತ್ರಗಳು ಮೂಡಿಬಂದವು. ಹೆಚ್ಚಿನ ವಿದ್ಯಾರ್ಥಿಗಳ ಆಗಮಿಸುವಿಕೆ ಲಾರ್ವಾದ ಬಗ್ಗೆ ಅವರಲ್ಲಿ ಅರಿವು ಮೂಡಿಸುವಲ್ಲಿ ಸಹಕಾರಿಯಾಗಿದೆ.

ಕಾರ್ಟೂನ್ ರಚನಾ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಕರು ವಿದ್ಯಾರ್ಥಿಗಳಿಗೆ ಲಾರ್ವಾದ ಹರಡುವಿಕೆಯನ್ನು ತಡೆಗಟ್ಟುವ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಪ್ರತಿ ಶಾಲೆಯಿಂದ ಆಯ್ಕೆಯಾದ ಒಂದು ಕರ್ಟೂನ್‍ನನ್ನು ಸಂಗ್ರಹಿಸಿ ಬ್ಲಾಕ್ ಹಂತದಲ್ಲಿ ಮೂರು ಬಹುಮಾನಗಳನ್ನು ನೀಡಲು ನಿರ್ಧರಿಸಿದ್ದು ಪರಿಸರ ತಜ್ಞ ಪಾವೂರು ಶಂಕರನಾಂದ ಇಳವಳ್ಳಿಯವರು ಬಹುಮಾನದ ಪ್ರಯೋಜಕತ್ವವನ್ನು ವಹಿಸಿರುತ್ತಾರೆ.

ಆಗಸ್ಟ್ 10 ರಂದು ಲಾರ್ವಾ ಬಗ್ಗೆ ಸೃಜನಶೀಲ ಚುಟುಕು ರಚನಾ ಸ್ಪರ್ಧೆ, ಆಗಸ್ಟ್ 13 ರಿಂದ ವಿದ್ಯಾರ್ಥಿಗಳಿಂದ ಪತ್ರ ಚಳುವಳಿ ನಡೆಸುವ ಮೂಲಕ ಜಾಗೃತಿ ಮೂಡಿಸಲು ಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತೆ ಗಾಯತ್ರಿ ನಾಯಕ್‍ರವರ ಮಾರ್ಗದರ್ಶನದಲ್ಲಿ ನಡೆಸಲು ಯೋಜಿಸಲಾಗಿದೆ ಎಂದು ಸರ್ವ ಶಿಕ್ಷಣ ಅಭಿಯಾನ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖ್ಯಸ್ಥರು ತಿಳಿಸಿದ್ದಾರೆ.

Comments are closed.