ಕರಾವಳಿ

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಮಳಲಿಯಲ್ಲಿ ಫೈನಾನ್ಸ್‌ರನ್ನು ದರೋಡೆಗೈದ ಮೂವರು ಆರೋಪಿಗಳ ಬಂಧನ – ನಗದು ಸೊತ್ತು ವಶ

Pinterest LinkedIn Tumblr

ಮಂಗಳೂರು, ಜುಲೈ.19: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿಯಲ್ಲಿ ಮೂರು ದಿನಗಳ ಹಿಂದೆ ನಡೆದ ಹಗಲು ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಜ್ಪೆ ಠಾಣಾ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಮೂಳೂರು ಗ್ರಾಮದ ಕಿನ್ನಿಕಂಬ್ಲ ಮಠದಗುಡ್ಡೆ ಸೈಟ್ ನಿವಾಸಿ ಅಬ್ದುಲ್ ಅಝೀಝ್ @ ನೌಷಾದ್ @ ಅಕಲ್ (19), ಗಂಜಿಮಠ ಬಡಗುಳಿಪ್ಪಾಡಿ ನಿವಾಸಿ, ಪ್ರಸ್ತುತ ಕೈಕಂಬ ನಿವಾಸಿ ಮಹಮ್ಮದ್ ಮುಸ್ತಾಫ @ ಮುಸ್ತಾಫ (23) ಹಾಗೂ ಉಳಾಯಿಬೆಟ್ಟು ಪಟ್ರಕೋಡಿ ನಿವಾಸಿ ಆಶ್ಲೇಷ್ ಎ. ಕೋಟ್ಯಾನ್ @ ಅಣ್ಣು (20) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ನಗದು ರೂ.21,800, ಒಂದು ಬೈಕ್, ಮೂರು ಮೊಬೈಲ್ ಫೋನ್, ಒಂದು ತಲವಾರು, ಒಂದು ಚೂರಿಯನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಮರೊಳಿಯ ಸೆಂಥಿಲ್ ಕುಮಾರ್ ಎಂಬವರು ಜು.14ರಂದು ಅಪರಾಹ್ನ ಕಲೆಕ್ಷನ್ ಗಾಗಿ ಮರೊಳಿಯಿಂದ ತನ್ನ ಬೈಕಿನಲ್ಲಿ ಹೊರಟು ಬಿ.ಸಿ.ರೋಡ್ ಮಾರ್ಗವಾಗಿ ಪೊಳಲಿ ಅಡ್ಡೂರಿನಿಂದ ಮರಳು ಯಾರ್ಡ್ ರಸ್ತೆಯಲ್ಲಿ ಮೊಗರು ಗ್ರಾಮದ ಮಳಲಿ ಸೈಟ್‌ಗೆ ಹೋಗುತ್ತಿದ್ದ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರ ತಂಡ ಅವರನ್ನು ಅಡ್ಡಗಟ್ಟಿ, ಮಾರಕಾಯುಧಗಳಿಂದ ಕೊಲೆ ಮಾಡುವುದಾಗಿ ಬೆದರಿಸಿ ಬೈಕಿನ ಬಾಕ್ಸನ್ನು ಹೊಡೆದು ಅದರಲ್ಲಿದ್ದ ನಗದು 2.05 ಲಕ್ಷ ರೂ. ದೋಚಿ ಪರಾರಿಯಾಗಿತ್ತು. ಈ ಬಗ್ಗೆ ಅವರು ನೀಡಿರುವ ದೂರಿನಂತೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಖಚಿತ ಮಾಹಿತಿಯಾಧಾರದಲ್ಲಿ ಗುರುಪುರ ಕುಕ್ಕುದಕಟ್ಟೆ ಎಂಬಲ್ಲಿ ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 60 ಸಾವಿರ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ಭಾಗಿಯಾಗಿರುವ ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ರವರ ಆದೇಶದಂತೆ ಹಾಗೂ ಉಪ ಪೊಲೀಸ್ ಆಯುಕ್ತರಾದ ಹನುಮಂತರಾಯ (ಕಾಮತ್ತುಸು) ಮತ್ತು ಲಕ್ಷ್ಮೀ ಗಣೇಶ್ (ಅ ಮತ್ತು ಸ) ರವರ ಹಾಗೂ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡ ಐ.ಪಿ.ಎಸ್ ರವರ ನಿರ್ದೇಶನದಂತೆ ನಡೆದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಜಪೆ ಠಾಣಾ ಪೊಲೀಸ್ ನಿರೀಕ್ಷಕರಾದ ಎಸ್. ಪರಶಿವ ಮೂರ್ತಿ. ಪಿ.ಎಸ್.ಐ ರವರುಗಳಾದ ಸತೀಶ್ ಎಂ.ಪಿ, ಶ್ರೀಮತಿ ಕಮಲ, ಸಹಾಯಕ ಉಪನಿರೀಕ್ಷಕರಾದ ರಾಮಚಂದ್ರ, ರಾಮ ಪೂಜಾರಿ, ಜನಾರ್ಧನಗೌಡ, ಹೆಚ್.ಸಿ. ಗಳಾದ ಚಂದ್ರಮೋಹನ್, ರಾಜೇಶ್, ಸುಧೀರ್ ಶೆಟ್ಟಿ, ಹೊನ್ನಪ್ಪ ಗೌಡ, ಸಂತೋಷ್ ಸುಳ್ಯ, ಪಿಸಿಗಳಾದ ಮಂಜುನಾಥ, ವಕೀಲ ಲಮಾಣಿ, ಕುಮಾರಸ್ವಾಮಿ, ಉಮೇಶ್, ಹೋಮ್ ಗಾರ್ಡ್ ಸತೀಶ್ ಮಹಿಳಾ ಪಿಸಿ ಶ್ರೀಮತಿ ಜಯಶ್ರೀ ಪಾಲ್ಗೊಂಡಿದ್ದರು.

Comments are closed.