ಕರಾವಳಿ

ಉಪ್ಪುಂದದಲ್ಲಿ ಸ್ವರ್ಣೋದ್ಯಮಿಗಳ ದರೋಡೆ ಪ್ರಕರಣ: ಐವರಿಗೆ ತಲಾ 10 ವರ್ಷ ಕಾರಾಗೃಹ, ದಂಡ

Pinterest LinkedIn Tumblr

ಕುಂದಾಪುರ: ಉಪ್ಪುಂದ ಗ್ರಾಮದ ಸೋನರಕೇರಿಯಲ್ಲಿ ನಾಲ್ಕುವರೆ ವರ್ಷಗಳ ಹಿಂದೆ ಸ್ವರ್ಣೋದ್ಯಮಿಗಳಿಗೆ ಖಾರದ ಪುಡಿ ಎರಚಿ, ಮಾರಕಾಯುಧ ತೋರಿಸಿ ಚಿನ್ನಾಭರಣ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಪರಾಧಿಗಳಿಗೆ ತಲಾ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 20 ಸಾವಿರ ರೂ. ದಂಡ ವಿಧಿಸಿ ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲದ ನ್ಯಾಯಾಧಿಶ ಪ್ರಕಾಶ ಖಂಡೇರಿ ಶುಕ್ರವಾರ ತೀರ್ಪು ನೀಡಿದ್ದಾರೆ. ರವಿ ಜತ್ತನ್, ಶಿವ ಪ್ರಕಾಶ್, ಚಂದ್ರಹಾಸ, ಪ್ರದೀಪ ಪೂಜಾರಿ ಹಾಗೂ ದುರ್ಗಾಪ್ರಸಾದ್ ಶಿಕ್ಷೆಗೊಳಗಾದವರು.

 

2014 ರ ಅ.7ರಂದು ಸೋನರಕೇರಿಯ ಗದ್ದೆಯಲ್ಲಿ ಈ ಐವರು ಚಿನ್ನದ ಅಂಗಡಿ ಮಾಲಕ ಸುಧೀಂದ್ರ ಶೇಟ್, ಅವರ ತಂದೆ ಗಣೇಶ್ ಶೇಟ್ ಹಾಗೂ ತಂಗಿಯನ್ನು ಅಡ್ಡಗಟ್ಟಿ ಚೂರಿ ತೋರಿಸಿ ಬೆದರಿಸಿ ಮುಖಕ್ಕೆ ಖಾರದ ಪುಡಿ ಎರಚಿ ಅವರೊಂದಿಗಿದ್ದ ಚಿನ್ನದ ಬೆಂಡೋಲೆ, ವಿವಿಧ ಮಾದರಿಯ ಚಿನ್ನದ ಉಂಗುರಗಳು ಹಾಗೂ ಸುಮಾರು 12 ಲ. ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಇರಿತಕ್ಕೊಳಗಾದವರ ಬೊಬ್ಬೆ ಕೇಳಿ ಅಲ್ಲಿಗೆ ಬಂದಿದ್ದ ಸ್ಥಳೀಯರಾದ ಅನಿಲ್ ಶೇಟ್ ಅವರಿಗೆ ಚೂರಿಯಿಂದ ಇರಿಯಲಾಗಿತ್ತು.

ಈ ಸಂಬಂಧ ಬೈಂದೂರು ಠಾಣೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಕಲಂ 395 ಹಾಗೂ 397 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ವೃತ್ತ ನಿರೀಕ್ಷಕ ಸುದರ್ಶನ್ ಹಾಗೂ ಪಿಎಸ್‌ಐ ಸಂತೋಷ ಕಾಯ್ಕಿಣಿ ನೇತೃತ್ವದ ಪೊಲೀಸರ ತಂಡ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿತ್ತು. ಸುದರ್ಶನ್ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, 42 ಮಂದಿ ಸಾಕ್ಷಿಗಳ ವಿಚಾರಣೆ ನಡೆದಿತ್ತು.

ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

Comments are closed.