ಕರಾವಳಿ

ತಾಯಿಯ ಋಣವನ್ನು ಯಾವತ್ತೂ ತೀರಿಸಲು ಸಾಧ್ಯವಿಲ್ಲ : ಕಾಶೀ ಮಠಾಧೀಶರು 

Pinterest LinkedIn Tumblr

ಮಂಗಳೂರು : ಭೂಮಿ, ಗೋವು, ನದಿ ಮತ್ತು ಜನ್ಮ ಕೊಟ್ಟ ತಾಯಿಯ ಋಣವನ್ನು ಯಾವತ್ತೂ ತೀರಿಸಲು ಸಾಧ್ಯವಿಲ್ಲ ಎಂದು ಕಾಶೀ ಮಠಾಧೀಶರಾದ ಸಂಯಂಮೀಂದ್ರರ ತೀರ್ಥ ಸ್ವಾಮೀಜಿಗಳು ಹೇಳಿದರು.

ಅವರು ಯೂತ್ ಆಫ್ ಜಿಎಸ್ ಬಿ ವತಿಯಿಂದ ಮಂಗಳೂರಿನ ಸಂಘನಿಕೇತನದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಬೇಸಿಗೆ ಶಿಬಿರದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಜನ್ಮ ಕೊಟ್ಟ ತಾಯಿ ಮಕ್ಕಳಿಂದ ಯಾವುದೇ ಅಪೇಕ್ಷೆ ಮಾಡುವುದಿಲ್ಲ. ಅದೇ ರೀತಿಯಲ್ಲಿ ನಮಗೆ ನೀರುಣಿಸುವ ನದಿ, ಫಲ ನೀಡುವ ಮರ ಹಾಗೂ ಹಾಲು ನೀಡುವ ಗೋವು ನಮ್ಮಿಂದ ಏನೂ ಫಲಾಪೇಕ್ಷೆ ಮಾಡದೇ ನಮ್ಮನ್ನು ಪೋಷಿಸುತ್ತವೆ. ನದಿ ತನ್ನ ನೀರನ್ನು ತಾನು ಕುಡಿಯುವುದಿಲ್ಲ, ಮರಗಳು ತಾನು ಬೆಳೆದ ಫಲವನ್ನು ತಾನು ತಿನ್ನುವುದಿಲ್ಲ, ಗೋವು ಕೂಡ ಹಾಲನ್ನು ನೀಡುತ್ತದೆ ವಿನ: ಅದಕ್ಕಾಗಿ ಏನನ್ನು ಇಟ್ಟುಕೊಳ್ಳುವುದಿಲ್ಲ. ಹಾಗೇ ತಾಯಿ ಕೂಡ ಮಕ್ಕಳಿಂದ ಏನನ್ನು ಬಯಸದೇ ಕೇವಲ ಮಕ್ಕಳ ಏಳಿಗೆಗಾಗಿ ದುಡಿಯುತ್ತಾಳೆ. ಇವರುಗಳ ತ್ಯಾಗವನ್ನು ಇಂದಿನ ಮಕ್ಕಳು ಯಾವತ್ತೂ ಮರೆಯಬಾರದು ಎಂದು ಶ್ರೀಮದ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿಗಳು ಹೇಳಿದರು.

ಮಕ್ಕಳು ಶಿಬಿರದಲ್ಲಿ ಕಲಿತ ಮಾಹಿತಿ, ಜ್ಞಾನವನ್ನು ಬದುಕಿನುದ್ದಕ್ಕೂ ಪಾಲಿಸಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಹೆಸರನ್ನು, ಮೌಲ್ಯವನ್ನು ಎತ್ತಿಹಿಡಿಯಲು ಶ್ರಮಿಸಬೇಕು ಎಂದು ಸ್ವಾಮೀಜಿಯವರು ಆರ್ಶೀವಚನ ನೀಡಿದರು.

ಉಚಿತ ಬೇಸಿಗೆ ಶಿಬಿರ ಮೇ 9 ರಿಂದ 12 ರ ತನಕ ನಾಲ್ಕು ದಿನಗಳ ಪರ್ಯಂತ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರ್ನಾಟಕ ವಿವಿಧ ಭಾಗಗಳಿಂದ ಮಾತ್ರವಲ್ಲ, ಮಹಾರಾಷ್ಟ್ರ, ಕೇರಳದ ಹಲವಾರು ಪ್ರದೇಶದಿಂದ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದರು.

ಒಟ್ಟು 165 ಮಕ್ಕಳು ಶಿಬಿರದ ಪ್ರಯೋಜನ ಪಡೆದರು. ಶಿಬಿರದಲ್ಲಿ ಮಕ್ಕಳಿಗೆ ಯೋಗ, ವ್ಯಕ್ತಿತ್ವ ವಿಕಸನ, ವೇದ ಗಣಿತ, ಸಂಧ್ಯಾವಂದನೆ, ಮೌಲ್ಯ ಶಿಕ್ಷಣ, ಶ್ಲೋಕ ಪಠಣ, ಭಜನೆ, ಉದ್ಯೋಗ-ವ್ಯವಹಾರ ಜ್ಞಾನ, ನಾಯಕತ್ವ, ಸಂವಹನ, ವೃತ್ತಿ ಮಾರ್ಗದರ್ಶನ, ನಾಟಕ ಕಲೆ, ಪರೀಕ್ಷಾ ತಯಾರಿ ಸಹಿತ ಹಲವಾರು ಭೋದಕರಿಂದ, ಪರಿಣಿತರಿಂದ ಸಂವಹನ ಕಾರ್ಯಕ್ರಮ ನಡೆಯಿತು.

ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಯಿತು. ಚಾರ್ಟೆಡ್ ಅಕೌಂಟೆಂಟ್ ಜಗನ್ನಾಥ ಶೆಣೈ ಸ್ವಾಗತಿಸಿದರು. ಸುಧಾಕರ್ ಭಟ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಶಾಸಕ ವೇದವ್ಯಾಸ ಕಾಮತ್, ಆಯೋಜಕರಾದ ಯೋಗಿಶ್ ಕಾಮತ್, ಚೇತನ್ ಕಾಮತ್, ನರೇಶ್ ಪ್ರಭು, ಹನುಮಂತ ಕಾಮತ್, ಗೋಪಾಲಕೃಷ್ಣ ಭಟ್ ಸಹಿತ ಹಲವಾರು ಗಣ್ಯರು ಮತ್ತು ಮಕ್ಕಳ ಪೋಷಕರು ಭಾಗವಹಿಸಿದರು.

Comments are closed.