ಕರಾವಳಿ

ಹಿಂದುತ್ವ ಡ್ರಗ್ಸ್ ಇದ್ದಂತೆ ಹೇಳಿಕೆ ವಿವಾದ: ದಿನೇಶ್ ಗುಂಡೂರಾವ್ ಸಮಸ್ತ ಹಿಂದೂಗಳ ಕ್ಷಮೆಯಾಚಿಸಲು ಆಗ್ರಹ

Pinterest LinkedIn Tumblr

ಮಂಗಳೂರು: ಹಿಂದುತ್ವ ಅಂದರೆ ಡ್ರಗ್ಸ್‌ನಂತೆ ಎಂದು ದ.ಕ.ಜಿಲ್ಲೆಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂದರ್ಭ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆಯಿಂದ ಸಮಗ್ರ ಹಿಂದೂಗಳ ಮನಸ್ಸಿಗೆ ನೋವಾಗಿದೆ. ಹಾಗಾಗಿ ದಿನೇಶ್ ಗುಂಡೂರಾವ್ ಈ ಕೂಡಲೇ ಹಿಂದೂಗಳ ಕ್ಷಮೆ ಕೇಳಬೇಕೆಂದು ವಿಶ್ವ ಹಿಂದು ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಆಗ್ರಹಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪ್ರಿಲ್ 2ರಂದು ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ದಿನೇಶ್ ಗುಂಡೂರಾವ್ ಅವರು ಪ್ರಧಾನಿ ಮೋದಿ ‘ಹಿಂದು ಟೆರರ್’ ಎಂದು ಉಲ್ಲೇಖಿಸಿದ್ದರು. ಮಾತ್ರವಲ್ಲ ಹಿಂದುತ್ವದ ಅಮಲನ್ನು ದೇಶವಿಡೀ ಹರಡುತ್ತಿದ್ದಾರೆ. ಮತೀಯವಾದವನ್ನು ಮೋದಿ ಬಿತ್ತುತ್ತಿದ್ದಾರೆ. ಹಿಂದುತ್ವ ಡ್ರಗ್ಸ್ ಇದ್ದಂತೆ ಎಂದು ಹೇಳಿಕೆ ನೀಡಿದ್ದರು. ಹಿಂದುತ್ವ ಯಾರಿಗೂ ಅನ್ಯಾಯ ಮಾಡಿಲ್ಲ. ಈ ದೇಶ ಉಳಿದಿರುವುದೇ ಹಿಂದುತ್ವದ ಆಧಾರದಲ್ಲಿ.ಆದರೆ ಹಿಂದೂಗಳ ಬಗ್ಗೆ ಕೇವಲವಾಗಿ ಹೇಳಿಕೆ ನೀಡಿರುವ ದಿನೇಶ್ ಗುಂಡೂರಾವ್ ಅವರು ಹಿಂದೂಗಳಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಹೇಳಿದರು.

ಉಳಾಯಿಬೆಟ್ಟು ಪ್ರಕರಣ ವಜಾ : ಹೈಕೋರ್ಟಿಗೆ ಅರ್ಜಿ

ಐದು ವರ್ಷಗಳ ಹಿಂದೆ ಮಂಗಳೂರು ತಾಲೂಕಿನ ಉಳಾಯಿಬೆಟ್ಟಿನಲ್ಲಿ ನಡೆದ ಕೋಮುಗಲಭೆಯ ಆರೋಪಿಗಳು ಸೇರಿದಂತೆ ವಿಚಾರಣೆಯ ಹಂತದಲ್ಲಿದ್ದ ಒಟ್ಟು ೧೪೨ ಪ್ರಕರಣಗಳನ್ನು ರಾಜ್ಯ ಸರಕಾರ ವಜಾಗೊಳಿಸಿದ್ದು, ಇದರಲ್ಲಿ ಅಲ್ಪಸಂಕ್ಯಾಕರ ವಿರುದ್ಧದ ಪ್ರಕರಣಗಳೇ ಹೆಚ್ಚು. ಚುನಾವಣೆಯ ಸಮಯದಲ್ಲಿ ರಾಜ್ಯ ಸರಕಾರ ಕೈಗೊಂಡ ಈ ತೀರ್ಮಾನವನ್ನು ಪ್ರಶ್ನಿಸಿ ಸಂತ್ರಸ್ತರೊಂದಿಗೆ ಹೈಕೋರ್ಟ್ ಮೆಟ್ಟಲೇರಲಾಗುವುದು ಎಂದು ಶರಣ್ ಪಂಪ್‌ವೆಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಗೋಪಾಲ್ ಕುತ್ತಾರ್, ಪ್ರವೀಣ್ ಕುತ್ತಾರ್, ಶಿವಾನಂದ ಮೆಂಡನ್, ಭುಜಂಗ ಕುಲಾಲ್ ಮುಂತಾದವರಿದ್ದರು.

Comments are closed.