ಕರಾವಳಿ

ಮಹಾಶಿವರಾತ್ರಿ ಎಂದರೇನು? ಮಹಾಶಿವರಾತ್ರಿಯ ಮಹತ್ವದ ಬಗ್ಗೆ ತಿಳಿಯಲು ಈ ವಿಶೇಷ ಲೇಖನ ಓದಿ..

Pinterest LinkedIn Tumblr

_ಶಿವನ ವಿಶ್ರಾಂತಿಯ ಕಾಲವೆಂದರೆ ಮಹಾಶಿವರಾತ್ರಿ. ಆ ಕಾಲದಲ್ಲಿ ಶಿವತತ್ತ್ವದ ಕಾರ್ಯ ನಿಂತುಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ

ಮಹಾಶಿವರಾತ್ರಿಯ ಮಹತ್ವ

ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶಿವತತ್ತ್ವದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆಯನ್ನು ಮಾಡಬೇಕು; ಅದರೊಂದಿಗೆ ‘ಓಂ ನಮಃ ಶಿವಾಯ|’ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು. ಈ ದಿನದಂದು ‘ಓಂ ನಮಃ ಶಿವಾಯ|’ ಈ ನಾಮಜಪವನ್ನು ಮಾಡುವ ಜೀವಕ್ಕೆ ಶಿವನ ಸೂಕ್ಷ್ಮ-ಶಕ್ತಿ ಸಿಗುತ್ತದೆ. ಶಿವನ ಜನ್ಮವು ಸ್ಥೂಲ ಮತ್ತು ಸೂಕ್ಷ್ಮ ರೂಪದ ಕೆಟ್ಟ ಶಕ್ತಿಗಳನ್ನು ನಾಶ ಮಾಡಲು ಮತ್ತು ಮಾನವನ ಕಲ್ಯಾಣಕ್ಕಾಗಿ ಆಗಿದೆ.

ಮಹಾಶಿವರಾತ್ರಿಯ ವ್ರತದ ವಿಧಿ

ಮಾಘ ಕೃಷ್ಣ ಚತುರ್ದಶಿಯಂದು ಏಕಭುಕ್ತರಾಗಿರಬೇಕು (ಒಂದು ಹೊತ್ತು ಊಟ ಮಾಡುವುದು). ಚತುರ್ದಶಿಯಂದು ಬೆಳಗ್ಗೆ ವ್ರತದ ಸಂಕಲ್ಪವನ್ನು ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು. ಶಿವನ ಧ್ಯಾನವನ್ನು ಮಾಡಬೇಕು, ಆಮೇಲೆ ಶೋಡಷೋಪಚಾರ ಪೂಜೆಯನ್ನು ಮಾಡಿ ಭವ ಭಾವಿನಿ ಪ್ರೀತ್ಯರ್ಥ ತರ್ಪಣವನ್ನು ನೀಡಬೇಕು. ಶಿವನಿಗೆ ೧೦೮ ಕಮಲಗಳನ್ನು ಅಥವಾ ಬಿಲ್ವಪತ್ರೆಗಳನ್ನು ನಾಮಮಂತ್ರ ಸಹಿತ ಅರ್ಪಿಸಬೇಕು. ಆಮೇಲೆ ಪುಷ್ಪಾಂಜಲಿಯನ್ನು ಅರ್ಪಿಸಿ ಅರ್ಘ್ಯ ನೀಡಬೇಕು. ಪೂಜೆ, ಸ್ತೋತ್ರಪಠಣ ಮತ್ತು ಮೂಲಮಂತ್ರ ಜಪದ ನಂತರ ಶಿವನ ಮಸ್ತಕದ ಮೇಲಿನ ಒಂದು ಹೂವನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳಬೇಕು ಮತ್ತು ಕ್ಷಮಾಯಾಚನೆ ಮಾಡಬೇಕು.

ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ

ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಯಾಯುಧಮ್|
ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್|| ? ಬಿಲ್ವಾಷ್ಟಕ, ಶ್ಲೋಕ ೧

ಅರ್ಥ: ಮೂರು ಎಲೆಗಳಿರುವ, ತ್ರಿಗುಣಗಳಂತಿರುವ, ಮೂರು ಕಣ್ಣುಗಳಂತಿರುವ, ಮೂರು ಆಯುಧಗಳಂತಿರುವ ಮತ್ತು ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವ ಈ ಬಿಲ್ವಪತ್ರೆ ಯನ್ನು ನಾನು ಶಿವನಿಗೆ ಅರ್ಪಿಸುತ್ತೇನೆ.

ಬಿಲ್ವಪತ್ರೆಯನ್ನು ಕೆಳಮುಖವಾಗಿ ಏಕೆ ಅರ್ಪಿಸಬೇಕು?

ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಕೆಳಮುಖವಾಗಿ ಅರ್ಪಿಸಿದರೆ ಅದರಿಂದ ನಿರ್ಗುಣ ಸ್ತರದಲ್ಲಿನ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗಿ ಭಕ್ತರಿಗೆ ಹೆಚ್ಚು ಲಾಭವಾಗುತ್ತದೆ.

ಶಿವನಿಗೆ ತಾಜಾ ಬಿಲ್ವಪತ್ರೆ ಸಿಗದಿದ್ದರೆ ಹಿಂದಿನ ದಿನ ತೆಗೆದಿಟ್ಟ ಬಿಲ್ವಪತ್ರೆಯು ನಡೆಯುತ್ತದೆ, ಆದರೆ ಸೋಮವಾರದ ಬಿಲ್ವಪತ್ರೆ ಮರುದಿನ ನಡೆಯುವುದಿಲ್ಲ.

ಶಿವನ ದರ್ಶನ ಪಡೆಯುವ ಮುನ್ನ ನಂದಿಯ ದರ್ಶನ ಪಡೆಯುವುದು

ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಮುನ್ನ ನಂದಿಯ ಎರಡೂ ಕೊಂಬುಗಳಿಗೆ ಕೈಮುಟ್ಟಿಸಿ ಅದರ ದರ್ಶನ ಪಡೆಯಬೇಕು ನಂದಿಯ ಕೊಂಬುಗಳಿಂದ ಪ್ರಕ್ಷೇಪಿತವಾಗುವ ಶಿವತತ್ತ್ವದ ಸಗುಣ ಮಾರಕ ಲಹರಿಗಳಿಂದ ವ್ಯಕ್ತಿಯ ಶರೀರದಲ್ಲಿನ ರಜ-ತಮ ಕಣಗಳ ವಿಘಟನೆಯಾಗಿ ವ್ಯಕ್ತಿಯ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಇದರಿಂದ ವ್ಯಕ್ತಿಗೆ ಶಿವಲಿಂಗದಿಂದ ಹೊರ ಬೀಳುವ ಶಕ್ತಿಶಾಲಿ ಲಹರಿಗಳನ್ನು ಸಹಿಸಲು ಸಾಧ್ಯವಾಗುತ್ತದೆ.

ಲಿಂಗದ ದರ್ಶನವನ್ನು ಪಡೆದುಕೊಳ್ಳುವಾಗ ಶಿವಲಿಂಗ ಮತ್ತು ನಂದಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತುಕೊಳ್ಳದೇ ಲಿಂಗ ಮತ್ತು ನಂದಿಯನ್ನು ಜೋಡಿಸುವ ರೇಖೆಯ ಬದಿಯಲ್ಲಿ ನಿಂತುಕೊಳ್ಳಬೇಕು.

ಭಸ್ಮವನ್ನು ಎಲ್ಲಿ ಹಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು?

‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನು ಹೇಳುತ್ತಾ ಭಸ್ಮವನ್ನು ಬಲಗೈಯ ಮಧ್ಯದ ಮೂರು ಬೆರಳುಗಳಿಂದ ಹಣೆ, ಹೃದಯ (ಎದೆ), ನಾಭಿ ಮತ್ತು ಕಂಠದ ಮೇಲೆ ಅಡ್ಡವಾಗಿ ಹಚ್ಚಬೇಕು.

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

ಪ್ರದಕ್ಷಿಣೆ ಹಾಕುವಾಗ ಹರಿನಾಳದಿಂದ ಆರಂಭಿಸಿ ತಮ್ಮ ಎಡಬದಿಯಿಂದ ಹರಿನಾಳದ ಇನ್ನೊಂದು ಬದಿಯವರೆಗೆ ಹೋಗಬೇಕು. ನಂತರ ಹರಿನಾಳವನ್ನು ದಾಟದೇ ಹಿಂತಿರುಗಿ ಪುನಃ ಹರಿನಾಳದ ಮೊದಲ ಬದಿಯವರೆಗೆ ಬಂದು ಪ್ರದಕ್ಷಿಣೆ ಪೂರ್ಣಗೊಳಿಸಬೇಕು
ಪಾಣಿಪೀಠದಿಂದ ಹರಿದು ಹೋಗುವ (ಹರಿನಾಳದ) ನೀರಿನಲ್ಲಿ ಶಕ್ತಿಯ ಪ್ರವಾಹವಿರುವುದರಿಂದ ಅದನ್ನು ದಾಟಬಾರದು. ಅದನ್ನು ದಾಟುವಾಗ ಕಾಲುಗಳು ಅಗಲವಾಗುವುದರಿಂದ ವೀರ್ಯನಿರ್ಮಿತಿಯ ಮೇಲೆ ಹಾಗೂ ೫ ವಾಯುಗಳ ಮೇಲೆ ವಿಪರೀತ ಪರಿಣಾಮವಾಗುತ್ತದೆ. ದೇವದತ್ತ ಮತ್ತು ಧನಂಜಯ ವಾಯುಗಳು ಕುಗ್ಗುತ್ತವೆ. ಆದರೆ ಅದನ್ನು ದಾಟುವಾಗ ವ್ಯಕ್ತಿಯು ತನ್ನನ್ನು ತಾನು ಬಿಗಿಹಿಡಿದುಕೊಂಡರೆ ನರಗಳು ಬಿಗಿಯಾಗಿ ಅದರ ಪರಿಣಾಮವಾಗುವುದಿಲ್ಲ.

ಸಂಗ್ರಹ :- ಶ್ರೀ. ಮೋಹನ ಗೌಡ, ಹಿಂದೂ ಜನಜಾಗೃತಿ ಸಮಿತಿ
ಆಧಾರ: ಸನಾತನ ನಿರ್ಮಿತ ಗ್ರಂಥ : ‘ಶಿವ’.
ಸಂಪರ್ಕ – 7204082609
ಹೆಚ್ಚಿನ ಮಾಹಿತಿಗೆ www.sanatan.org/kannada

Comments are closed.