ಅಂತರಾಷ್ಟ್ರೀಯ

ವಿಧ್ವಂಸಕ ಕೃತ್ಯ ನಡೆಸುತ್ತಿರುವ ಉಗ್ರರ ದಮನಿಸಿ, ಇಲ್ಲದಿದ್ದರೆ ನಾವೇ ನುಗ್ಗಿ ಧ್ವಂಸ ಮಾಡ್ತೀವಿ: ಪಾಕ್‌ಗೆ ಎಚ್ಚರಿಕೆ ನೀಡಿದ ಇರಾನ್

Pinterest LinkedIn Tumblr

ಹೊಸದಿಲ್ಲಿ: ಭಯೋತ್ಪಾದಕರನ್ನು ಮುಂದಿಟ್ಟು ಛಾಯಾ ಸಮರ ನಡೆಸುವ ಪಾಕಿಸ್ತಾನದ ವಿರುದ್ಧ ಭಾರತ ವೈಮಾನಿಕ ದಾಳಿ ನಡೆಸಿದ್ದಾಯಿತು. ಈಗ ಇರಾನ್ ಕೂಡ ಪಾಕ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.

ಪಾಕ್‌ ಕೃಪಾಪೋಷಿತ ಉಗ್ರಗಾಮಿ ಸಂಘಟನೆಗಳು ಇರಾನ್‌ನಲ್ಲೂ ವಿಧ್ವಂಸಕ ಕೃತ್ಯ ನಡೆಸುತ್ತಿದ್ದು, ಅವುಗಳನ್ನು ಪಾಕ್‌ ಹತ್ತಿಕ್ಕದಿದ್ದರೆ ತಾನೇ ಧ್ವಂಸಗೊಳಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.

ಇರಾನಿನ ಸಶಸ್ತ್ರ ಪಡೆ ಮುಖ್ಯಸ್ಥ ಜನರಲ್‌ ಖಾಸಿಂ ಸೊಲೈಮಾನಿ ಅವರು ಪಾಕ್ ಸರಕಾರ ಹಾಗೂ ಸೇನಾಪಡೆಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ‘ಪಾಕ್ ಸರಕಾರಕ್ಕೆ ನನ್ನ ಪ್ರಶ್ನೆಯಿದು. ನೀವು ಯಾವ ಕಡೆ ಸಾಗುತ್ತಿದ್ದೀರಿ? ನಿಮ್ಮ ನೆರೆಯ ಎಲ್ಲ ದೇಶಗಳ ಗಡಿಯಲ್ಲೂ ಅಶಾಂತಿ, ವಿಧ್ವಂಸಕತೆಗೆ ಕಾರಣರಾಗಿದ್ದೀರಿ. ನೀವು ಅಶಾಂತಿ ಸೃಷ್ಟಿಸದ ನೆರೆಯ ದೇಶ ಯಾವುದಾದರೂ ಉಳಿದಿದೆಯೆ?’ ಎಂದು ಜನರಲ್ ಸೊಲೈಮಾನಿ ಪ್ರಶ್ನಿಸಿದ್ದಾರೆ.

‘ನೀವು ಅಣುಬಾಂಬ್ ಹೊಂದಿರಬಹುದು, ಆದರೆ ನಿಮ್ಮ ದೇಶದೊಳಗೆ ಇರುವ ಉಗ್ರರ ಪಡೆಗಳನ್ನು ನಾಶಪಡಿಸಲು ಏಕೆ ಅಸಮರ್ಥರಾಗಿದ್ದೀರಿ?’ ಎಂದು ಪ್ರಶ್ನಿಸಿರುವ ಅವರು, ಇರಾನ್‌ ನಿರ್ಣಯವನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಸಿದರು.

ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಭಾರತ-ಇರಾನ್ ಹೆಚ್ಚಿನ ಸಹಕಾರ ಹೊಂದಿವೆ. ಮುಂದಿನ ಬಾರಿ ಎರಡೂ ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಇದೇ ವಿಚಾರ ಪ್ರಮುಖವಾಗಿ ಚರ್ಚೆಗೆ ಬರಲಿದೆ. ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರ ಇರಾನ್ ಭೇಟಿ ಈ ವಾರಾಂತ್ಯಕ್ಕೆ ನಿಗದಿಯಾಗಿತ್ತು. ಆದರೆ ಭಾರತ-ಪಾಕ್ ಉದ್ವಿಗ್ನತೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದೆ.

ಪಾಕ್‌ ಜತೆಗಿನ ತನ್ನ ಗಡಿಯಲ್ಲಿ ಬೃಹತ್ ಗೋಡೆ ನಿರ್ಮಿಸುವ ಬಗ್ಗೆ ಇರಾನ್‌ ಸಂಸತ್ತಿನ ವಿದೇಶಾಂಗ ನೀತಿ ಆಯೋಗದ ಮುಖ್ಯಸ್ಥ ಹೆಶ್ಮತೊಲ್ಲಾ ಫಲಾಹತ್‌ಪಿಶೆಷ್ ಪ್ರಸ್ತಾಪಿಸಿದ್ದಾರೆ. ಇರಾನ್ ಮೇಲೆ ಪಾಕ್ ನಡೆಸುತ್ತಿರುವ ಭಯೋತ್ಪಾದಕ ದಾಳಿಗಳನ್ನು ನಿಲ್ಲಿಸಲು ಅಸಮರ್ಥವಾದರೆ, ಇರಾನ್ ಪಡೆಗಳು ಪಾಕಿಸ್ತಾನದ ಒಳಗೇ ನುಗ್ಗಿ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಟೆಹರಾನ್ ಹೇಳಿದೆ.

ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖೊಮೇನಿಗೆ ಸಹಾಯಕರಾಗಿರುವ ಮೇಜರ್ ಜನರಲ್ ಯಾಹ್ಯಾ ರಹೀಂ ಸಫಾವಿ ಬಹಿರಂಗವಾಗಿಯೇ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಲೇಬೇಕು ಎಂದು ಖೊಮೇನಿ ಬಯಸಿದ್ದಾರೆ.

‘ಬಲೂಚಿಸ್ತಾನದ ಬುಡಕಟ್ಟು ಜನರಿಗೆ ತರಬೇತಿ ನೀಡಿ ಆತ್ಮಹತ್ಯಾ ಬಾಂಬರ್‌ಗಳಾಗಿ ನೆರೆಯ ದೇಶಗಳಿಗೆ ಕಳುಹಿಸಿ ದಾಳಿ ನಡೆಸಲಾಗುತ್ತಿದೆ. ಪಾಕ್ ಸರಕಾರ ಹಾಗೂ ಐಎಸ್‌ಐ ಇದಕ್ಕೆ ಇರಾನ್ ಜನತೆ ಮತ್ತು ಸಶಸ್ತ್ರ ಪಡೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಪಾಕಿಸ್ತಾನ ತನ್ನ ಎಲ್ಲ ನೆರೆಯ ದೇಶಗಳ ವಿರುದ್ಧ ಧರ್ಮದ್ರೋಹಿ ಉಗ್ರರನ್ನು ಛೂ ಬಿಟ್ಟು, ಉಗ್ರರ ಸ್ವರ್ಗವಾಗಿ ಪರಿಣಮಿಸಿದೆ’ ಎಂದು ಅವರು ಹೇಳಿದ್ದಾರೆ.

ಇತ್ತ ಅಫ್ಘಾನಿಸ್ತಾನ ಕೂಡ ಪಾಕ್ ಮೇಲೆ ಕಿಡಿಕಾರಿದೆ. ಅಫ್ಘಾನಿಸ್ತಾನವನ್ನು ನಾಶ ಮಾಡಲೆಂದೇ ಪಾಕಿಸ್ತಾನ 45-48 ಉಗ್ರರ ಗುಂಪುಗಳನ್ನು ಸಾಕಿಕೊಂಡಿದೆ. ಬಾಲಾಕೋಟ್‌ ಮೇಲೆ ಭಾರತ ಬಹಳಷ್ಟು ಮೊದಲೇ ದಾಳಿ ನಡೆಸಬೇಕಿತ್ತು ಎಂದು ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಹಾಗೂ ಮಾಜಿ ಬೇಹುಗಾರಿಕಾ ಮುಖ್ಯಸ್ಥ ರಹಮತುಲ್ಲಾ ನಬಿಲ್ ಹೇಳಿದ್ದಾರೆ.

Comments are closed.