ಕರಾವಳಿ

ಜ.26ರಿಂದ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ

Pinterest LinkedIn Tumblr

( ಕಡತ ಚಿತ್ರ )

ಮಂಗಳೂರು ಜನವರಿ 24 : ತೋಟಗಾರಿಕೆ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಕದ್ರಿ ಉದ್ಯಾನವನ ಅಭಿವೃದ್ದಿ ಸಮಿತಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಸಿರಿ ತೋಟಗಾರಿಕೆ ಸಂಘ(ರಿ) ಮಂಗಳೂರು ಮತ್ತು ಇತರೆ ಅಭಿವೃದ್ದಿ ಇಲಾಖೆಗಳ ಸಹಭಾಗಿತ್ವದಲ್ಲಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿರುತ್ತದೆ.

ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ಜನವರಿ 26 ರಂದು ಪೂರ್ವಾಹ್ನ 10.30 ಗಂಟೆಗೆ ಉದ್ಘಾಟನೆಗೊಂಡು ದಿನಾಂಕ 28 ರವರೆಗೆ 3 ದಿನಗಳ ಕಾಲ ನಡೆಯಲಿದೆ.

( ಕಡತ ಚಿತ್ರ )

ಈ ವರ್ಷದ ಫಲಪುಷ್ಪ ಪ್ರದರ್ಶನದ ಉದ್ಘಾಟನೆಯನ್ನು ನಗರಾಭಿವೃದ್ದಿ ಸಚಿವ, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಯು.ಟಿ. ಖಾದರ್, ಮಾಡಲಿದ್ದು, ಹೂ ವಿನ್ಯಾಸ ಮಾದರಿಯನ್ನು ಸಭಾಪತಿಯವರು, ಕರ್ನಾಟಕ ವಿಧಾನ ಪರಿಷತ್ ಕೆ. ಪ್ರತಾಪಚಂದ್ರ ಶೆಟ್ಟಿ, ರವರು ಉದ್ಘಾಟಿಸಲಿದ್ದಾರೆ.

ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಡಿ. ವೇದವ್ಯಾಸ ಕಾಮತ್, ರವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಜಿಲ್ಲೆಯ ಎಲ್ಲಾ ಶಾಸಕರುಗಳು, ಸಂಸದರು ಹಾಗೂ ಎಲ್ಲಾ ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ತೋಟಗಾರಿಕೆ ಇಲಾಖೆಯು ಇತರೆ ಸರಕಾರಿ ಇಲಾಖೆಗಳು, ಬ್ಯಾಂಕ್‍ಗಳು, ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಈ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಿ ಜಿಲ್ಲೆಯಲ್ಲಿ ತೋಟಗಾರಿಕೆ ಚಟುವಟಿಕೆ ಹಾಗೂ ತೋಟಗಾರಿಕೆ ಕಲೆಯನ್ನು ಸಾರ್ವಜನಿಕರಲ್ಲಿ ಉದ್ದೀಪನಗೊಳಿಸುವ ಮೂಲಕ ಜಿಲ್ಲೆಯಲ್ಲಿ ತೋಟಗಾರಿಕೆಯಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಪರಿಸರ ಸಂರಕ್ಷಣೆ, ಸಾರ್ವಜನಿಕ ನೈರ್ಮಲ್ಯ, ಗ್ರಾಮ, ನಗರಗಳನ್ನು ಸುಂದರಗೊಳಿಸುವುದು, ಮೌಲ್ಯವರ್ಧನೆ ಇತ್ಯಾದಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಚಾಲನೆ ನೀಡುವ ಮೂಲಕ ತೋಟಗಾರಿಕೆ ಉದ್ದಿಮೆಯನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶವನ್ನು ಹೊಂದಿದೆ.

ಫಲಪುಷ್ಪ ಪ್ರದರ್ಶನದಲ್ಲಿರುವ ವಿಶೇಷತೆಗಳು ಇಂತಿವೆ:

ಬಣ್ಣ ಬಣ್ಣದ ಕಾನೇರ್ಷನ್ ಮತ್ತು ಗುಲಾಬಿ ಹೂವಿನಿಂದ ಅಲಂಕರಿಸಿದ “ಸಮುದ್ರದಲ್ಲಿ ತೇಲುವ ಹಡಗು’’ ಹಾಗೂ ಇನ್ನಿತರ ಮಾದರಿಗಳು/ಆಕೃತಿಗಳು. ತೋಟಗಾರಿಕೆ ಇಲಾಖಾ ವತಿಯಿಂದ ಬೆಳೆಸಲಾಗಿರುವ ವಿವಿಧ ಜಾತಿಯ ಆಕರ್ಷಣೀಯವಾದ ಹೂಗಳ “ಟೋಪಿಯಾರಿ” ಹಾಗೂ ವಿವಿಧ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ. ಅಂಥೂರಿಯಂ, ಆರ್ಕಿಡ್ ಗಿಡಗಳು ಇನ್ನಿತರೇ ಆಕರ್ಷಣೀಯವಾದ ಗಿಡಗಳ ಪ್ರದರ್ಶನ. ವಿವಿಧ ತಾಲ್ಲೂಕುಗಳಿಂದ ಹಾಗೂ ಇಲಾಖೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ತರಕಾರಿ ಸಸಿ ಹಾಗೂ ಹೂವಿನ ಗಿಡಗಳನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಮಾರಾಟ.

ವಿವಿಧ ನರ್ಸರಿದಾರರು, ಬೀಜ/ಗೊಬ್ಬರಗಳ ಮಾರಾಟಗಾರರು, ಯಂತ್ರಗಳ ಮಾರಾಟಗಾರರು ಮಳಿಗೆಗಳನ್ನು ತೆರೆಯಲಿದ್ದು, ಸಾವಯವ ಉತ್ಪನ್ನಗಳು, ತೋಟಗಾರಿಕೆ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆದಾರರಿಂದ ಸಾರ್ವಜನಿಕರು ತಮಗೆ ಅಗತ್ಯವಿರುವ ಉತ್ಪನ್ನಗಳ ಖರೀದಿ ಹಾಗೂ ವೀಕ್ಷಣೆಗೆ ಅವಕಾಶ.

ಹನಿ ನೀರಾವರಿ ಪ್ರಾತ್ಯಕ್ಷತೆ, ಹೈಡ್ರೋಪೋನಿಕ್ಸ್, ಜೇನುಸಾಕಾಣಿಕೆ ಮಾದರಿ, ಅಣಬೆ ಮಾದರಿಗಳು ಹಾಗೂ ವಿವಿಧ ಕಟ್ ಪ್ಲವರ್‍ಗಳ ಜೋಡಣೆ. ಜೇನು ಬೇಸಾಯ ಬಗ್ಗೆ ಮಾಹಿತಿ ಹಾಗೂ ಜೇನಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ.

ಕೈತೋಟದ ಪ್ರಾತ್ಯಕ್ಷತೆ. ವಿವಿಧ ಅಭಿವೃದ್ದಿ ಇಲಾಖೆಗಳ ಪ್ರದರ್ಶನದ ಮಳಿಗೆಗಳು. ಫಲಪುಷ್ಪ ಪ್ರದರ್ಶನಕ್ಕೆ ಎಲ್ಲಾ ಶಾಲಾ ಮಕ್ಕಳಿಗೆ, ಅಂಗವಿಕಲರಿಗೆ ಮತ್ತು ಭಿನ್ನ ಸಾರ್ಮಥ್ಯದ ಮಕ್ಕಳಿಗೆ ಉಚಿತ ಪ್ರವೇಶ ಎಂದು ಪ್ರಕಟಣೆ ತಿಳಿಸಿದೆ.

 

Comments are closed.