ಕರಾವಳಿ

ನಾಳೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಕ್ರೀಡಾ ಸಾಧಕರಿಗೆ ಸನ್ಮಾನ ಹಾಗೂ ಗೋಕರ್ಣನಾಥ ಆರೋಗ್ಯ ಕಾರ್ಡ್ ವಿತರಣೆ

Pinterest LinkedIn Tumblr

ಮಂಗಳೂರು,ಆಕ್ಟೋಬರ್.17:: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಕ್ಟೋಬರ್ 10ರಿಂದ 20ರ ವರೆಗೆ ಹಮ್ಮಿಕೊಂಡಿರುವ ನವರಾತ್ರಿ ಉತ್ಸವ ಮತ್ತು ‘ಮಂಗಳೂರು ದಸರಾ’ಮಹೋತ್ಸವ ಹಿನ್ನೆಲೆಯಲ್ಲಿ ಈ ಬಾರಿಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಅಕ್ಟೋಬರ್ 18ರಂದು 10 ಕ್ರೀಡಾ ಸಾಧಕರಿಗೆ ಸನ್ಮಾನ ಹಾಗೂ ಗೋಕರ್ಣನಾಥ ಆರೋಗ್ಯ ಕಾರ್ಡ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಕುದ್ರೋಳಿ ಕ್ಷೇತ್ರಾಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ( ಅಡ್ವಕೇಟ್) ತಿಳಿಸಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾಕ್ಷೇತ್ರದಲ್ಲಿ ಸಾಧನೆ ತೋರಿದ ಪೂವಮ್ಮ, ಗುರುರಾಜ್, ಜಗದೀಶ್, ಪ್ರದೀಪ್ ಆಚಾರ್ಯ, ಪಂಚಮಿ ಸೇರಿದಂತೆ 10 ಮಂದಿಗೆ ಸನ್ಮಾನವನ್ನು ಅಂದು ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ.

ಇದೇ ವೇಳೆ ಗೋಕರ್ಣನಾಥ ಆರೋಗ್ಯ ಕಾರ್ಡ್ ಬಿಡುಗಡೆ ಮಾಡಲಾಗುವುದು. ಈ ಕಾರ್ಡ್ ಪ್ರಥಮವಾಗಿ 2,000 ಬಡ ಕುಟುಂಬಗಳಿಗೆ ಪ್ರಯೋಜನವಾಗಲಿದ್ದು, ಚಿಕಿತ್ಸೆಗಾಗಿ ಎ,ಜೆ, ಆಸ್ಪತ್ರೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದೆ 10,000 ಕುಟುಂಬಗಳಿಗೆ ಈ “ಆರೋಗ್ಯ ಕಾರ್ಡ್” ವಿತರಿಸುವ ಯೋಜನೆಯ ಪ್ರಯೋಜನವನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ಕ್ಷೇತ್ರದ ನವೀಕರಣದ ರೂವಾರಿ ಜನಾರ್ದನ ಪೂಜಾರಿಯವರ ಇಚ್ಛೆಯಂತೆ ಹಾಗೂ ನಿರ್ದೇಶನದಂತೆ ಈ ಬಾರಿ ಸಮಾಜಮುಖಿ ಕಾರ್ಯಕ್ರಮದ ಅಂಗವಾಗಿ ಗೋಕರ್ಣನಾಥ ಆರೋಗ್ಯ ಕಾರ್ಡ್, ವಿದ್ಯಾನಿಧಿ ಮತ್ತು ಸಾಮಾಜಿಕ ನಿಧಿ ಬಿಡುಗಡೆಯಾಗಲಿದೆ. ” ಆರೋಗ್ಯಕಾರ್ಡ್” ವಿತರಣೆ ಸಂಬಂಧ ನಗರದ ಎ ಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಜತೆ ಒಪ್ಪಂದ ಮಾಡಲಾಗಿದೆ. ಈ ಅರೋಗ್ಯ ಕಾರ್ಡ್ ಹೊಂದಿದ ಪ್ರತಿಯೊಬ್ಬ ವ್ಯಕ್ತಿಗೂ ಚಿಕಿತ್ಸೆ ಹಾಗೂ ಇತರ ವೆಚ್ಚದಲ್ಲಿ ಶೇ. 25ರಷ್ಟು ರಿಯಾಯಿತಿ ಸಿಗಲಿದೆ. ಈ ಆರೋಗ್ಯಕಾರ್ಡ್‌ ಪ್ರಥಮ ಹಂತದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ವಿತರಣೆಯಾಗಲಿದೆ ಎಂದರು.

ಕ್ಷೇತ್ರದಲ್ಲಿ ಅ.10 ರಿಂದ ಅರೋಗ್ಯಕಾರ್ಡ್ ಗೆ ಅರ್ಜಿಯನ್ನು ಸ್ವೀಕರಿಸಲಾಗುತ್ತಿದ್ದು, ಯಾವುದೇ ಜಾತಿ ಧರ್ಮದ ಭೇದವಿಲ್ಲದೆ ಬಿಪಿಎಲ್ ಪಡಿತರ ಚೀಟಿಯೊಂದಿಗೆ ಅರ್ಜಿ ಪಡೆದು ಕಾರ್ಡ್ ಪಡೆದುಕೊಳ್ಳಬಹುದು ಎಂದು ಪದ್ಮರಾಜ್ ಆವರು ತಿಳಿಸಿದರು.

ಆಕ್ಟೋಬರ್, 19ರಂದು ಶೋಭಾಯಾತ್ರೆ :

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಕ್ಟೋಬರ್ 10ರಿಂದ ಆರಂಭಗೊಂಡಿರುವ ನವರಾತ್ರಿ ಉತ್ಸವ ಮತ್ತು ‘ಮಂಗಳೂರು ದಸರಾ’ಮಹೋತ್ಸವ ಆ.20ರ ವರೆಗೆಜರಗಲಿದ್ದು, ಅ.19ರಂದು ಶೋಭಾಯಾತ್ರೆಯೊಂದಿಗೆ ಮಂಗಳೂರು ದಸರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ದಸರಾ ಮೆರವಣಿಗೆಯಲ್ಲಿ 75ಕ್ಕೂ ಅಧಿಕ ಸ್ತಬ್ಧಚಿತ್ರಗಳು, 100ಕ್ಕೂ ಅಧಿಕ ವೇಷ ಭೂಷಣಗಳು, ವಾದ್ಯಮೇಳ ತಂಡಗಳು ಭಾಗವಹಿಸಲಿವೆ ಎಂದು ಪದ್ಮರಾಜ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಕಾರ್ಯದರ್ಶಿ ಮಾಧವ ಸುವರ್ಣ, ಅಭಿವೃದ್ಧಿ ಸಮಿತಿ ಸದಸ್ಯರಾದ ಊರ್ಮಿಳಾ ರಮೇಶ್ ಕುಮಾರ್, ರವಿಶಂಕರ ಮಿಜಾರ್,ಡಾ.ಬಿ.ಜಿ. ಸುವರ್ಣ,ಡಾ.ಅನಸೂಯಾ, ಶೇಖರ ಪೂಜಾರಿ, ಡಿ.ಡಿ. ಕಟ್ಟೆಮಾರ್ ಮುಂತಾದವರು ಉಪಸ್ಥಿತರಿದ್ದರು.

Comments are closed.