ಕರಾವಳಿ

ಧರ್ಮಗಳ ಗೋಡೆಯನ್ನು ತಗ್ಗಿಸಿ ಮಾನವ ಧರ್ಮದ ಗೋಡೆಯನ್ನು ಎತ್ತರಿಸಿ ಪ್ರೀತಿಯಿಂದ ಜೀವಿಸೋಣ : ನೂತನ ಬಿಷಪ್‌ರಿಂದ ತುಳುವಿನಲ್ಲಿ ಸಂದೇಶ (ಕಾರ್ಯಕ್ರಮದ 160ಕ್ಕೂ ಹೆಚ್ಚು ಚಿತ್ರಗಳು ಪ್ರಕಟ)

Pinterest LinkedIn Tumblr

(ಮಂಗಳೂರು ಧರ್ಮ ಪ್ರಾಂತ್ಯದ ನೂತನ ಬಿಷಪ್ ರೆ.ಡಾ. ಪೀಟರ್ ಪಾವ್ಲ್ ಸಲ್ದಾನ ಅವರ ಅಧಿಕಾರ ಸ್ವೀಕಾರ – ದೀಕ್ಷೆ ಹಾಗೂ ಪಟ್ಟಾಬಿಷೇಕ ಕಾರ್ಯಕ್ರಮದ 160ಕ್ಕೂ ಹೆಚ್ಚು ಚಿತ್ರಗಳು ಪ್ರಕಟ)

ಮಂಗಳೂರು, ಸೆಪ್ಟಂಬರ್.15: ಕುಡ್ಲದಲ್ಲಿ ಒಂದೇ ಮಾನವ ಕುಲದಲ್ಲಿ ಹುಟ್ಟಿದ ನಾವೆಲ್ಲರೂ ಒಂದಾಗಿ ಜೀವಿಸುತ್ತಿದ್ದೇವೆ. ಸಹೋದರ, ಸಹೋದರಿಯರಂತೆ ನಾವೆಲ್ಲಾ ಒಂದಾಗಿ ಬದುಕುತ್ತಿರುವವರು. ಇದರ ಜತೆಯಲ್ಲೇ ನಾವು ಧರ್ಮಗಳ ಗೋಡೆಯನ್ನು ತಗ್ಗಿಸಿ ಮಾನವ ಧರ್ಮವೆಂಬ ಗೋಡೆಯನ್ನು ಎತ್ತರಿಸಿ ಪ್ರೀತಿಯಿಂದ ಜೀವಿಸೋಣ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ನೂತನ ಬಿಷಪರಾಗಿ ರವಿವಾರ ದೀಕ್ಷೆ ಸ್ವೀಕರಿಸಿದ ರೆ.ಡಾ. ಪೀಟರ್ ಪಾವ್ಲ್ ಸಲ್ದಾನ ತುಳುವಿನಲ್ಲಿ ನೀಡಿದ ಸಂದೇಶವಿದು.

ನಗರದ ರೊಸಾರಿಯೊ ಕೆಥಡ್ರಲ್‌ನ ಹೊರಾಂಗಣದ ಬೃಹತ್ ವೇದಿಕೆಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು, ಗೋವಾದ ಆರ್ಚ್‌ ಬಿಷಪ್‌ಗಳು, ವಿವಿಧೆಡೆಯ ಬಿಷಪರು, ಧರ್ಮಗುರುಗಳು, ಧರ್ಮ ಭಗಿನಿಯರು, ಕ್ರೈಸ್ತ ಬಾಂಧವರು, ಗಣ್ಯರು ಸೇರಿದಂತೆ ಸಹಸ್ರಾರು ಸಾರ್ವಜನಿಕರ ಸಮ್ಮುಖದಲ್ಲಿ ದೀಕ್ಷೆ ಸ್ವೀಕರಿಸಿದ ಅವರು, ಕನ್ನಡ, ತುಳು, ಇಟಾಲಿಯನ್, ಕೊಂಕಣಿ ಹಾಗೂ ಆಂಗ್ಲ ಭಾಷೆಯಲ್ಲಿ ಸಂದೇಶ ನೀಡಿದರು.

ದೇವರ ಅನುಗ್ರಹ ಪ್ರತಿಯೊಬ್ಬರಲ್ಲೂ ಕಾರ್ಯನಿತರವಾಗಿದೆ ಹಾಗೂ ದೇವರ ಆತ್ಮ ಬೇರೆ ಬೇರೆ ಧರ್ಮ ಸಂಪ್ರದಾಯದವರಾದ ನಮ್ಮನೆಲ್ಲಾ ಒಟ್ಟುಗೂಡಿಸಿದೆ. ಸಾವಿಗಿಂತ ಪ್ರೀತಿ ಹೆಚ್ಚು ಶಕ್ತಿಶಾಲಿ. ಪ್ರೀತಿ ಎಲ್ಲ ಸಿದ್ಧಾಂತಗಳಿಗಿಂತ ಉತ್ತಮವಾದದ್ದು ಹಾಗೂ ಬೇರ್ಪಡಿಸುವ ಎಲ್ಲ ಗೋಡೆಗಳಿಗಿಂತ ಎತ್ತರವಾದುದು ಎಂದು ಕನ್ನದಲ್ಲಿ ಅವರು ಸಂದೇಶ ನೀಡಿದರು.

ಒಬ್ಬ ಧರ್ಮಾಧ್ಯಕ್ಷನಾಗಿ ನಾನು ಕ್ರೈಸ್ತ ಧರ್ಮವನ್ನು ಪ್ರತಿನಿಧಿಸಬೇಕಾಗಿದೆ. ಕ್ರೈಸ್ತರು ಎಂದೂ ತಮಗಾಗಿ ಬಾಳುವುದಿಲ್ಲ. ಹಾಗೆಯೇ ಒಬ್ಬ ಧರ್ಮಾಧ್ಯಕ್ಷ ಕೂಡಾ ತನಗಾಗಿ ಬಾಳುವುದಿಲ್ಲ. ಕ್ರೈಸ್ತರನ್ನು ಸಂರಕ್ಷಿಸಿದರೆ ಅವರು ಯಾವುದೇ ಬೇಧ ಭಾವವಿಲ್ಲದೆ ಇತರೆಲ್ಲರ ಅಗತ್ಯಗಳಿಗೆ ಸ್ಪಂದಿಸಲು ದಯಾವಂತರು ಶಾಂತರಾಗುವುದನ್ನು ಕಾಣಬಹುದು. ಹಾಗೆಯೇ ಹಿಂದೂ ಬಾಂಧವನ್ನು ಸಂರಕ್ಷಿಸಿದರೆ ಅವರು ಅತ್ಯಂತ ಉದಾರ ಮನಸ್ಸಿನಿಂದ ಸಹಾಯ ಹಸ್ತ ಚಾಚುತ್ತಾರೆ.

ಮುಸ್ಲಿಂ ಬಾಂಧವರನ್ನು ಸಂರಕ್ಷಿಸಿದರೆ ಅವರು ಪ್ರಾಮಾಣಿಕರಾಗಿ ಅನುಕಂಪಭರಿತರಾಗುವುದನ್ನು ನಾವು ಕಾಣಬಹುದು. ಮಾನವ ಹೃದಯದ ಮೃತು ತಂತಿಗಳ ಮೂಲಕ ಸುಮಧುರ ಸ್ವರವನ್ನು ನುಡಿಸಲು ನಾವು ಬಯಸುತ್ತೇವೆ. ಆದರೆ ವಾದ್ಯವೊಂದರಿಂದ ಅದೆಷ್ಟು ಸುಂದರ ಸಂಗೀತ ನುಡಿಸಿದರೂ ವಾದ್ಯಗೋಷ್ಠಿಯನ್ನು ಪರಿಣಾಮಕಾರಿಯಾಗಿಸಲು ಸಾಧ್ಯವಿಲ್ಲ. ಎಲ್ಲ ವಾದ್ಯಗಳನ್ನು ಒಂದೇ ಶ್ರುತಿಯಲ್ಲಿ ನುಡಿಸಿದಾಗ ಹಾಗೂ ಅದರೊಟ್ಟಿಗೆ ಮಾನವ ಸ್ವರಗಳನ್ನು ಸೇರಿಸಿದಾಗ ನಮಗೆ ಮಹೋನ್ನತ ಅನುಭವವಾಗುತ್ತದೆ.

ನಾವು ಮಾನವ ಹೃದಯದಿಂದ ಪ್ರೀತಿ, ಸತ್ಯ ಹಾಗೂ ದಯೆ ಎಂಬ ಸುಂದರ ಸಂಗೀತವನ್ನು ನುಡಿಸಲು ಪ್ರಯತ್ನಿಸಬೇಕಾಗಿದೆ. ಆದ್ದರಿಂದ ನಾವು ಪ್ರತಿಯೊಬ್ಬರನ್ನು ಮೆಚ್ಚಿಕೊಂಡು ರಕ್ಷಿಸೋಣ. ಕೇಡು ಮತ್ತು ಹಿಂಸೆಯನ್ನು ಸ್ಪಂಜಿನಂತೆ ಹೀರಿ ಇತರ ಬಗ್ಗೆ ಅನುಕಂಪದಿಂದ ವರ್ತಿಸೋಣ ಎಂದು ನೂತನ ಬಿಷಪ್ ಆಶಯ ವ್ಯಕ್ತಪಡಿಸಿದರು.

‘ಸಂಶಯದ ಗೋಡೆಯಿಂದ ಹೊರಬರೋಣ’

ನಾವೆಲ್ಲರೂ ಒಂದು ಮಾನವ ಕುಟುಂಬಕ್ಕೆ ಸೇರಿದ್ದರೂ ನಮ್ಮ ಅಗತ್ಯತೆ ಮತ್ತು ಭಯಗಳೆಲ್ಲವೂ ಒಂದೇ ಆಗಿವೆ. ಒಬ್ಬರ ಕಣ್ಣುಗಳನ್ನು ಆಳವಾಗಿ ಗಮನಿಸಿದಾಗ ಆ ನೋಟದ ಹಿಂದಿರುವ ನೋವು ಅರಿವಾಗುತ್ತದೆ. ಒಬ್ಬರ ಹೃದಯ ಬಡಿತವನ್ನು ಆಲಿಸಿದರೆ, ಪ್ರೀತಿಗಾಗಿನ ಅವರ ಕೂಗು ನಮಗೆ ಕೇಳಿಸುತ್ತದೆ. ಆದರೆ ದುರಾದೃಷ್ಟ ಎಂಬಂತೆ ನಮ್ಮ ಮಧ್ಯೆ ಸಂಶಯದ ಗೋಡೆಗಳನ್ನು ನಾವು ಕಟ್ಟಿಕೊಂಡಿದ್ದೇವೆ. ಇದರಿಂದಾಗಿ ನಮ್ಮ ಹೃದಯಗಳು ಕಲ್ಲುಗಳಂತಾಗುತ್ತವೆ. ಆದ್ದರಿಂದ ನಾವು ಈ ಕ್ಷಣದಿಂದಾದರೂ ಮಾನವತೆಯನ್ನು ಬೆಳೆಸೋಣ. ಪ್ರೀತಿಯ ಗಾಳಿ ಎಲ್ಲೆಡೆ ಹರಿದಾಡಲು ಒಂದು ಮುಕ್ತ ಸಮಾಜವನ್ನು ಸೃಷ್ಟಿಸೋಣ ಎಂದು ರೆ.ಡಾ. ಪೀಟರ್ ಪಾವ್ಲ್ ಸಲ್ದಾನ ಅಭಿಪ್ರಾಯಿಸಿದರು.

‘ಜಿಲ್ಲೆಯ ಅಭಿವೃದ್ಧಿಯಲ್ಲಿ ಕ್ರೈಸ್ತ ಮಿಶನರಿಗಳ ಕೊಡುಗೆ ಅಪಾರ’

ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಕ್ರೈಸ್ತ ಮಿಶನರಿಗಳ ಪಾತ್ರ ಹಾಗೂ ಕೊಡುಗೆ ಅಪಾರ ಎಂದು ನೂತನ ಬಿಷಪರನ್ನು ಅಭಿನಂದಿಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಿಸಿದರು.

ಮಾರ್ಗದ ಬದಿಯಲ್ಲಿ ನಿಂತು ಇನ್ನೊಬ್ಬನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ದೇಶಪ್ರೇಮ ಅನ್ನಿಸಿಕೊಳ್ಳುವುದಿಲ್ಲ. ಸಮಾಜದ ಕಟ್ಟಕಡೆಯ ಜನರಿಗಾಗಿ ಶ್ರಮಿಸುವುದೇ ದೇಶಪ್ರೇಮ. ನಿರ್ಗಮನ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾರವರು ಜನಸಾಮಾನ್ಯರ ಬಿಷಪ್ ಆಗಿ ಗುರುತಿಸಿಕೊಂಡವರು. ನೂತನ ಬಿಷಪ್ ಕೂಡಾ ಸರ್ವ ಧರ್ಮಗಳಿಗೂ ಬಿಷಪ್ ಆಗಿ ಸಲಹೆ, ಮಾರ್ಗದರ್ಶನ ನೀಡಬೇಕು ಎಂದು ಅವರು ಹೇಳಿದರು.

ಇದೇ ವೇಳೆ ನೂತನ ಬಿಷಪರಿಗೆ ದೀಕ್ಷೆ ಸಮಾರಂಭದ ಅಧ್ಯಕ್ಷತೆ ವಹಿಸಿ, ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದ ನಿರ್ಗಮನ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ನೂತನ ಬಿಷಪ್‌ಗೆ ಶುಭ ಹಾರೈಸಿದರು. 22 ವರ್ಷಗಳ ಕಾಲ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದಕ್ಕಾಗಿ ಕ್ರೈಸ್ತ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದ ಅವರು, ತಮ್ಮ ಅಧಿಕಾರವಧಿಯಲ್ಲಿ ಯಾರಿಗಾದರೂ ಯಾವ ಕಾರಣದಿಂದಾದರೂ ನೋವಾಗಿದ್ದಲ್ಲಿ ಅದಕ್ಕಾಗಿ ಪಶ್ಚಾತ್ತಾಪದ ಜತೆ ಕ್ಷಮೆಯನ್ನೂ ಈ ಸಂದರ್ಭದಲ್ಲಿ ಯಾಚಿಸುತ್ತಿರುವುದಾಗಿ ನುಡಿದರು.

ದೀಕ್ಷಾ ಸಮಾರಂಭದ ಬಳಿಕ ಅಭಿನಂದನೆ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆರ್ಚ್ ಬಿಷಪ್ ಪೀಟರ್ ಮಚಾದೊ ಸಂದೇಶ ನೀಡಿ ನೂತನ ಬಿಷಪರಿಗೆ ಶುಭ ಹಾರೈಸಿದರು.

ಸಚಿವ ಯು.ಟಿ.ಖಾದರ್‌ರವರು ನೂತನ ಹಾಗೂ ನಿರ್ಗಮನ ಬಿಷಪರಿಗೆ ಶಾಲು ಹೊದಿಸಿ ಅಭಿನಂದಿಸಿದರು. ಇದೇ ವೇಳೆ ನೂತನ ಬಿಷಪ್, ನಿರ್ಗಮನ ಬಿಷಪ್ ಹಾಗೂ ಆರ್ಚ್ ಬಿಷಪರನ್ನು ಸನ್ಮಾನ ಪತ್ರ, ಶಾಲು, ಹೂ ಹಾರ ಹಾಗೂ ತೆಂಗಿನ ಸಸಿ ನೀಡುವ ಮೂಲಕ ಸನ್ಮಾನಿಸಲಾಯಿತು.

ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದಿಂದ ಪರಿಸರ ಸಂರಕ್ಷಣೆಯ ಧ್ಯೋತಕವಾಗಿ ತಮಗೆ ನೀಡಲಾದ ತೆಂಗಿನ ಸಸಿಯನ್ನು ಕುಂಡಗಳಲ್ಲಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಕಾರ್ಯಕ್ಕೆ ನೂತನ ಬಿಷಪ್, ನಿರ್ಗಮನ ಹಾಗೂ ಆರ್ಚ್ ಬಿಷಪ್ ಚಾಲನೆ ನೀಡಿದರು.

ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಅವರ ಪತ್ನಿ ಬ್ಲೋಸಂ ಫೆರ್ನಾಂಡಿಸ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮೇಯರ್ ಭಾಸ್ಕರ ಕೆ., ಮಾಜಿ ಶಾಸಕರಾದ ಯೋಗೀಶ್ ಭಟ್, ಜೆ.ಆರ್. ಲೋಬೋ, ಮೊಯ್ದಿನ್ ಬಾವಾ, ಅಪರ ಜಿಲ್ಲಾಧಿಕಾರಿ ಕುಮಾರ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಮೊದಲಾದವರು ಉಪಸ್ಥಿತರಿದ್ದು ನೂತನ ಬಿಷಪರನ್ನು ಅಭಿನಂದಿಸಿದರು. ರೆ.ಫಾ. ವಾಲ್ಟರ್ ಡಿಮೆಲ್ಲೋ ವಂದಿಸಿದರು.

ವರದಿ ಕೃಪೆ : ವಾರ್ತಾ ಭಾರತಿ

Comments are closed.